Chandrayaan-3: ಇಸ್ರೋ ಉಡಾಯಿಸಿದ ‘ಚಂದ್ರಯಾನ-3’ ಈಗ ಎಲ್ಲಿದೆ?
ಭಾರತ ಮತ್ತೊಮ್ಮೆ ತನ್ನ ತಾಕತ್ತು ತೋರಿಸಿದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದುವರಿದ ರಾಷ್ಟ್ರಗಳನ್ನೇ ಮೀರಿಸಿ ಬೆಳೆಯುತ್ತಿದೆ. 'ಚಂದ್ರಯಾನ-3' ಯಶಸ್ಸು ನೋಡಿದ ಶತಕೋಟಿ ಭಾರತೀಯರು, ಎದೆಯುಬ್ಬಿಸಿ ಹೆಮ್ಮೆಯಿಂದ ಇಸ್ರೋ ಬಗ್ಗೆ ಮಾತನಾಡ್ತಿದ್ದಾರೆ. ಹಾಗಾದ್ರೆ ಜುಲೈ 14ರಂದು ಇಸ್ರೋ ಹಾರಿಸಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಈಗ ಎಲ್ಲಿದೆ ಗೊತ್ತಾ? ಬನ್ನಿ ಚಂದ್ರಯಾನ-3 ನೌಕೆಯ ಇಂಚಿಂಚು ಮಾಹಿತಿ ತಿಳಿಯೋಣ.
ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿತ್ತು. ಹೀಗೆ ಲಾಂಚ್ ಆದ 2 ದಿನಗಳಲ್ಲಿ ಬರೋಬ್ಬರಿ 45 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ. ಅಲ್ಲದೆ ನೌಕೆ ಆರೋಗ್ಯ ಚೆನ್ನಾಗಿದ್ದು, ಚಂದ್ರನ ಮೊದಲ ಕಕ್ಷೆಗೂ ಯಶಸ್ವಿಯಾಗಿ ಎಂಟ್ರಿ ಕೊಟ್ಟಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಆದ್ರೆ ಇದು ಕೇವಲ ಮೊದಲ ಹೆಜ್ಜೆ ಮುಂದೆ ಸಾಕಷ್ಟು ಸವಾಲು ಎದುರಾಗಲಿವೆ. ಹೀಗಾಗಿ ಅದನ್ನೆಲ್ಲಾ ಎದುರಿಸಲು ಇಸ್ರೋ ವಿಜ್ಞಾನಿಗಳು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ.

ಚಂದ್ರನ ಮೇಲೆ ಇಳಿಯುವುದು ಯಾವಾಗ?
3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಭೂಮಿಯಿಂದ 3,84,000 ಕಿಮೀ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಇಡೀ ಜಗತ್ತೇ ಮೆಚ್ಚುವ ಕೆಲಸವನ್ನ ಭಾರತದ ಇಸ್ರೋ ಮಾಡಿದ್ದು, ನೌಕೆಯ ಬಗ್ಗೆ ಕ್ಷಣಕ್ಷಣದ ಅಪ್ಡೇಟ್ ನೀಡಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಸ್ರೋ ರೋವರ್ 'ಸಾಫ್ಟ್ ಲ್ಯಾಂಡಿಂಗ್' ಮಾಡಲಿದೆ.
ನೀರು ಹುಡುಕುವುದೇ ನಮ್ಮ ಟಾರ್ಗೆಟ್!
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ತಿಂಗಳಲ್ಲಿ ತನ್ನ ಗುರಿ ತಲುಪಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.
ಭಾರತದ ಸಾಧನೆಗೆ ಪಾಕಿಸ್ತಾನದ ಪ್ರತಿಕ್ರಿಯೆ
2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಸೋತು ಹೋಗಿದ್ದಾಗ ಶತಕೋಟಿ ಭಾರತೀಯರು ಕಣ್ಣೀರು ಹಾಕಿದ್ದರು. ಅದರಲ್ಲೂ ಅಂದಿನ ಇಸ್ರೋ ಅಧ್ಯಕ್ಷರೇ ಅತ್ತುಬಿಟ್ಟರು. ಪರಿಸ್ಥಿತಿ ಹೀಗಿದ್ದಾಗ ಇಡೀ ಜಗತ್ತೇ ಭಾರತದ ಪ್ರಯತ್ನಕ್ಕೆ ನಮಿಸಿತ್ತು. ಆದ್ರೆ ಇದೇ ಹೊತ್ತಲ್ಲಿ ಆಗ ಪಾಕ್ ಐಟಿ ಸಚಿವನಾಗಿದ್ದ ಫಾವದ್ ಚೌಧರಿ, ಇಸ್ರೋ ಬಗ್ಗೆ ಪರೋಕ್ಷವಾಗಿ ಆಡಿಕೊಂಡಿದ್ದ. ಮೊನ್ನೆ ಭಾರತ ಯಶಸ್ವಿಯಾಗಿ 'ಚಂದ್ರಯಾನ-3' ಲಾಂಚ್ ಮಾಡಿದ್ದು ಸ್ವತಃ ಇದೇ ಫಾವದ್ ಚೌಧರಿ ಭಾರತಕ್ಕೆ ಶುಭ ಕೋರಿದ್ದಾರೆ. ಹೀಗೆ ಭಾರತದ ಸಾಧನೆಗೆ ಶತ್ರುಗಳು ತಲೆಬಾಗಿದ್ದಾರೆ.

ಒಟ್ನಲ್ಲಿ ಭಾರತದ ಮಹತ್ವದ ಬಾಹ್ಯಾಕಾಶ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಆದ್ರೆ ಆಗಸ್ಟ್ ತಿಂಗಳು ಇಸ್ರೋ ಸಂಸ್ಥೆಗೆ ಮಹತ್ವದ ಸಮಯ. ಚಂದ್ರನ ಮೇಲೆ ರೋವರ್ ಇಳಿಸಿ ಅಧ್ಯಯನ ನಡೆಸುವಲ್ಲಿ ನಮ್ಮ ದೇಶ ಯಶಸ್ವಿಯಾದರೆ, ಇತಿಹಾಸ ಸೃಷ್ಟಿಯಾಗಲಿದೆ. ಈ ಕಾರಣಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಯೋಜನೆ ಕೈಗೆತ್ತಿಕೊಂಡಿತ್ತು ಇಸ್ರೋ. ಇದೀಗ ಅದರ ಫಲವಾಗಿ ಚಂದ್ರನ ಮೇಲೆ ಹಲವು ಅಧ್ಯಯನಗಳು ನಡೆಯಲಿವೆ.












Click it and Unblock the Notifications