ಜ್ಯೋತಿರಾದಿತ್ಯ ಸಿಂಧಿಯಾ-ರೊಮೇನಿಯಾ ಮೇಯರ್ ಮಾತಿನ ಚಕಮಕಿ?
ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಖಾರ್ಕೀವ್ ನಗರದಲ್ಲಿ ಕರ್ನಾಟಕದ ಮೂಲದ ವಿದ್ಯಾರ್ಥಿ ನವೀನ ಶೇಖರಪ್ಪ ದಾಳಿಗೆ ಬಲಿಯಾದ ಬಳಿಕ ಭಾರತೀಯರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಮಿಶನ್ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಗೊಳಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ರೊಮೇನಿಯಾಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಸಿಂಧಿಯಾ ಹಾಗೂ ರೊಮೇನಿಯಾ ಮೇಯರ್ ನಡುವೆ ಮಾತಿನ ಚಕಮಕಿ ನಡೆದಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಭಾರತೀಯ ವಿದ್ಯಾರ್ಥಿಗಳಿಗೆ ಮಾಡಿದ ಸಹಾಯಕ್ಕಾಗಿ ರೊಮೇನಿಯಾ ಆಡಳಿತಕ್ಕೆ ಧನ್ಯವಾದ ಕೂಡ ಹೇಳಿದ್ದಾರೆ.

ರೊಮೇನಿಯಾ ಶಿಬಿರವನ್ನು ತಲುಪಿದ ಬಳಿಕ ಸಿಂಧಿಯಾ ಅವರು ತಮ್ಮ ಸರ್ಕಾರ ಮಾಡಿದ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ಈ ಸಮಯದಲ್ಲಿ ರೊಮೇನಿಯಾ ಮೇಯರ್ ಸಿಂಧಿಯಾರನ್ನು ಅಡ್ಡಿಪಡಿಸುತ್ತಾರೆ.
ನೀವು ಯಾವಾಗ ಇಲ್ಲಿಂದ ಹೊರಡುತ್ತೀರಿ, ನಾವು ಇಲ್ಲಿ ವಿದ್ಯಾರ್ಥಿಗಳಿಗೆ ಊಟದ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ, ಎಂದು ಹೇಳುತ್ತಾರೆ, ಆಗ ಸಿಂಧಿಯಾ ನನಗೆಲ್ಲವೂ ಅರ್ಥವಾಗುತ್ತದೆ ಎಂದು ಹೇಳುತ್ತಾರೆ ಆಗ ಮೇಯರ್ ಬೇರೆಡೆಗೆ ತೆರಳುತ್ತಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಪ್ರತಿ ಶಿಬಿರದಿಂದ ಕರೆದುಕೊಂಡು ಹೋಗುವುದು ನಮ್ಮ ಯೋಜನೆ ಎಂದು ಹೇಳುತ್ತಾರೆ.
ಯುದ್ಧ ಭೂಮಿ ಉಕ್ರೇನ್ನಿಂದ ಸುರಕ್ಷಿತವಾಗಿ ರೋಮಾನಿಯಾ ತಲುಪಿದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಏರ್ಲಿಫ್ಟ್ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ಸ್ನೇಹಿತರಿಗೆ ಸಂದೇಶ ರವಾನಿಸಿ. ಪ್ರತಿಯೊಬ್ಬರ ಸುರಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ.
ಮೋದಿ ಪರವಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮೆಲ್ಲರನ್ನು ತಾಯ್ನಾಡಿಗೆ ಮರಳಿಸುವ ಜವಾಬ್ದಾರಿ ನನ್ನದು ಎಂದು ಬುಚರೆಸ್ಟ್ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಸಿಂದಿಯಾ ಹೇಳಿದ್ದಾರೆ.
ಮಾತುಕತೆಯಲ್ಲಿ ವಿದ್ಯಾರ್ಥಿ ತನ್ನ ರಾಜ್ಯ ಮಹಾರಾಷ್ಟ್ರ ಎಂದಾಗ, ಮರಾಠಿಯಲ್ಲೇ ಮಾತನಾಡು ಎಂದಿದ್ದಾರೆ. ಬಳಿಕ ಮರಾಠಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ವಿದ್ಯಾರ್ಥಿ ಜೊತೆ ಮಾತನಾಡಿದ್ದಾರೆ. ಇನ್ನು ಮತ್ತೊರ್ವ ವಿದ್ಯಾರ್ಥಿ ಕೇರಳದ ಕಣ್ಣೂರು ಜಿಲ್ಲೆ ಎಂದಾಗ, ಕಣ್ಣೂರಿನ ಕುರಿತು ಹಲವು ವಿಚಾರವನ್ನು ಸಿಂಧಿಯಾ ಹೇಳಿದ್ದಾರೆ. ಕಣ್ಣೂರಿನಲ್ಲಿ ಹೆಚ್ಚು ಕಾಳು ಮೆಣಸು ಬೆಳೆಯುತ್ತಾರೆ. ನಾನು ವಾಣಿಜ್ಯ ಸಚಿವನಾಗಿದ್ದ ವೇಳೆ ಕಣ್ಣೂರಿಗೆ ಬೇಟಿ ನೀಡಿದ್ದೇನೆ ಎಂದು ವಿದ್ಯಾರ್ಥಿಗೆ ಹೇಳಿದ್ದಾರೆ.
ಯುದ್ಧಪೀಡಿತ ಉಕ್ರೇನ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೇಮಿಸಲಾಗಿರುವ ನಾಲ್ವರು ಸಚಿವರು ಉಕ್ರೇನ್ ನೆರೆಯ ರಾಷ್ಟ್ರಗಳತ್ತ ಮಂಗಳವಾರ ಪ್ರಯಾಣ ಆರಂಭಿಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದ ಬಕಾರೆಸ್ಟ್ನತ್ತ ಮತ್ತು ಸಚಿವ ಹರ್ದೀಪ್ಪುರಿ ಹಂಗೇರಿಯ ಬುಡಾಪೆಸ್ಟ್ನತ್ತ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾಗೆ ಮತ್ತು ಸಚಿವ ವಿ.ಕೆ.ಸಿಂಗ್ ಪೋಲೆಂಡ್ ದೇಶದತ್ತ ಪ್ರಯಾಣ ಆರಂಭಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, 'ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದ್ದೇವೆ. ಪ್ರತಿಯೊಬ್ಬ ಭಾರತೀಯ ನಾಗರಿಕರನ್ನು ಮನೆಗೆ ಮರಳಿ ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ' ಎಂದಿದ್ದಾರೆ.
ಹರ್ದೀಪ್ ಪುರಿ ಸಹ, 'ನಮ್ಮ ದೇಶದ ಯುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬುಡಾಪೆಸ್ಟ್ನಿಂದ ಹೊರಡುವ ವಿಮಾನ ಇಂಧನ ತುಂಬಿಕೊಳ್ಳುವುದಕ್ಕಾಗಿ ಇಸ್ತಾಂಬುಲ್ನಲ್ಲಿ ನಿಲ್ಲಲಿದೆ' ಎಂದು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಇಂಡಿಗೋ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.












Click it and Unblock the Notifications