ಗಾಜಾ ಜನರು ಜೀವ ಉಳಿಸಿಕೊಳ್ಳಲು ಇರುವುದು ಒಂದೇ ಮಾರ್ಗ!
ಜಗತ್ತಿನಲ್ಲಿ ಇನ್ನೇನು ಶಾಂತಿ ನೆಲೆಸಲಿದೆ ಅಂತಾ ಜಗತ್ತು ಅಂದುಕೊಂಡಿತ್ತು, ಆದರೆ ಇದು ಉಲ್ಟಾ ಆಗಿದೆ. ಯಾವಾಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿತ್ತೋ, ಆ ಕ್ಷಣವೇ ಮತ್ತೊಂದು ಮಹಾಯುದ್ಧದ ಭೀತಿ ಎದುರಾಗಿತ್ತು. ಇದು ಸಾಲದು ಎಂಬಂತೆ ಈ ಸಮಯದಲ್ಲೇ ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ರಣಕಾಳಗ ಶುರುವಾಗಿದೆ. ಗಾಜಾ ನಗರ ಛಿದ್ರವಾಗಿರುವ ಸಂದರ್ಭದಲ್ಲೇ, ಅಲ್ಲಿನ ಜನರಿಗೆ ಇರುವ ಏಕೈಕ ಮಾರ್ಗದಲ್ಲಿ ಈಗ ಸಂಕಷ್ಟ ಶುರುವಾಗಿದೆ.
ಗಾಜಾಪಟ್ಟಿ ಉತ್ತರ ಭಾಗ ಸಂಪೂರ್ಣ ಛಿದ್ರ ಛಿದ್ರವಾಗಿ ಹೋಗಿದೆ. ಹೀಗಾಗಿ ದಕ್ಷಿಣ ಭಾಗ ಮಾತ್ರ ಒಂದಷ್ಟು ನೆಲೆ ನೀಡಿದೆ. ಅಲ್ಲದೆ ಗಾಜಾಪಟ್ಟಿ ಜನಕ್ಕೆ ಜೀವ ಉಳಿಸಿಕೊಳ್ಳಲು ಈಗ ಇರುವ ಏಕೈಕ ಮಾರ್ಗ ದಕ್ಷಿಣ ಮಾತ್ರ. ಅದ್ರಲ್ಲೂ ಈಜಿಪ್ಟ್ ಜೊತೆ ಗಡಿ ಇರುವ ಗಾಜಾದ ರಫಾ ಕೇಂದ್ರ ಸಂಜೀವಿನಿ ಎನ್ನಬಹುದು. ಇಲ್ಲಿಂದ ಮಾತ್ರ ಗಾಜಾಪಟ್ಟಿಯ ಜನ ಹೊರಗೆ ಹೋಗಲು ಸಾಧ್ಯ. ಇದನ್ನು ಬಿಟ್ಟರೆ, ಗಾಜಾಪಟ್ಟಿ ಉತ್ತರ ಭಾಗದಲ್ಲಿ ಇರುವ ಇನ್ನೆರಡು ಹೊರ ಹೋಗುವ ದಾರಿಗಳನ್ನೇ ಇಸ್ರೇಲ್ ಇದೀಗ ಮುಚ್ಚಿ ಹಾಕಿದೆ. ಹಾಗಾದರೆ ರಫಾ ಗಡಿ ಭಾಗದಲ್ಲಿ ಸದ್ಯಕ್ಕೆ ಏನಾಗುತ್ತಿದೆ ಗೊತ್ತಾ?

ಒಂದೇ ಜಾಗ.. ದೇವರ ನೆನೆದ ಜನ...
ಅಂದಹಾಗೆ ಗಾಜಾಪಟ್ಟಿ ನಗರ ಹೇಗಿದೆ ಎಂದರೆ, ಪೂರ್ವ ಭಾಗ ಹಾಗೂ ಉತ್ತರ ಭಾಗದಲ್ಲಿ ಇಸ್ರೇಲ್ ಗಡಿಯಿಂದ ಈ ಜಾಗ ಆವೃತವಾಗಿದೆ. ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರ ಇದೆ. ದಕ್ಷಿಣದಲ್ಲಿ ಕೆಲ ಭಾಗ ಈಜಿಪ್ಟ್ ದೇಶದ ಗಡಿಗೆ ಹೊಂದಿಕೊಂಡಿದೆ. ಇದೇ ಜಾಗದಿಂದ ಮಾತ್ರ ಗಾಜಾಪಟ್ಟಿ ಜನ ಈಗ ಹೊರಗೆ ಹೋಗಲು ಸಾಧ್ಯವಿದೆ. ಗಾಜಾಪಟ್ಟಿ ದಕ್ಷಿಣದಲ್ಲಿ ಈಜಿಪ್ಟ್ ದೇಶದ ರಫಾ ಗಡಿಯ ಮೂಲಕ ಗಾಜಾಪಟ್ಟಿ ಜನರು ಹೊರಗೆ ಹೋಗಲು ಕಾಯ್ತಾ ಇದ್ದಾರೆ. ಲಕ್ಷ ಲಕ್ಷ ಜನ ಪುಟ್ಟ ಪುಟ್ಟ ಮಕ್ಕಳನ್ನ ಗಡಿ ಭಾಗದಲ್ಲಿ ಕೂರಿಸಿಕೊಂಡು ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಏಕೆಂದರೆ ಮೊದಲೇ ಹೇಳಿದಂತೆ ಗಾಜಾಪಟ್ಟಿ ಉತ್ತರ ಭಾಗದಲ್ಲಿ ಇರುವ 2 ಗಡಿ ಇಸ್ರೇಲ್ನ ಭೂ ಭಾಗದ ಜೊತೆ ಸಂಪರ್ಕ ಹೊಂದಿದೆ. ಅವೆರಡನ್ನು ಇಸ್ರೇಲ್ ಈಗ ಮುಚ್ಚಿ ಹಾಕಿದೆ. 'ಎರೆಜ್' ಎಂಬ ಒಂದು ಗಡಿ ಭಾಗ & 'ಕೆರೆಮ್ ಶಲೋಮ್' ಎಂಬ ಇನ್ನೊಂದು ಗಡಿಯ ಭಾಗವನ್ನೂ ಇಸ್ರೇಲ್ ಸೇನೆ ಮುಚ್ಚಿ ಹಾಕಿದೆ. ಈ ಕಾರಣಕ್ಕೆ ಈಗ ಇರುವ ಒಂದೇ ಗಡಿಯ ಭಾಗದಿಂದ ಓಡಿ ಹೋಗಲು ಗಾಜಾಪಟ್ಟಿಯ ಹತ್ತಾರು ಲಕ್ಷ ಜನ ಕಾದು ಕುಳಿತಿದ್ದಾರೆ.
ಗಾಜಾಪಟ್ಟಿ ನಗರ ಜೈಲಿನಂತಿದೆ ಗೊತ್ತಾ?
ಈ ಜಗತ್ತಿನಲ್ಲಿ ಎಷ್ಟೊಂದು ರೀತಿಯ ಜೈಲುಗಳನ್ನ ನೋಡಿದ್ದೀರಿ. ಆದರೆ ತೆರೆದ ಜೈಲನ್ನು ನೋಡಿದ್ದೀರಾ? ಇಲ್ಲ ಅಲ್ವಾ, ಹಾಗಾದರೆ ನೀವು ಅದನ್ನ ಗಾಜಾಪಟ್ಟಿ ನಗರದಲ್ಲಿ ನೋಡಿ ಆಸೆ ಪೂರೈಸಿಕೊಳ್ಳಬಹುದು. ಹಾಗಂತಾ ಈಗ ಅಲ್ಲಿಗೆ ಹೋದ್ರೆ ಅಲ್ಲಿಂದ ವಾಪಸ್ ಬರುವ ಆಸೆ ಬಿಟ್ಟುಬಿಡಿ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ, ಗಾಜಾಪಟ್ಟಿ ಜನ ಇಲ್ಲಿ ಪ್ರತಿದಿನ ಅನುಭವಿಸ್ತಿರುವ ಹಿಂಸೆ ಅಷ್ಟಿಷ್ಟಲ್ಲ. ಅತ್ತ ಗಾಜಾಪಟ್ಟಿ ಬಿಟ್ಟು ಹೊರ ಹೋಗಲು ಆಗದೆ ಇತ್ತ ಗಾಜಾ ಒಳಗೆ ಬದುಕಲು ಆಗದೆ ಇಷ್ಟುದಿನ ನರಳುತ್ತಿದ್ದರು. ಆದರೆ ಹಮಾಸ್ ಉಗ್ರರು ಈಗ ಇಸ್ರೇಲ್ ಮೇಲೆ ನಡೆಸಿರುವ ಕೃತ್ಯ ಹತ್ತಾರು ಲಕ್ಷ ಜನರ ಜೀವಕ್ಕೆ ಕಂಟಕ ತಂದಿದೆ.

ಹಾಗೇ ರಫಾ ಗಡಿ ಮೂಲಕ ಗಾಜಾಪಟ್ಟಿ ಜನರು ಹೊರಗೆ ಹೋಗಲು ಇಸ್ರೇಲ್ ಸೇನೆಯು ಕದನ ವಿರಾಮ ಘೋಷಣೆ ಮಾಡಬೇಕು. ಆದ್ರೆ ಆ ಕೆಲಸವೇ ಆಗಿಲ್ಲ. ಹೀಗಾಗಿ ರಫಾ ಗಡಿ ಭಾಗದಲ್ಲಿ ನಿಂತಿರುವ ಪರಿಹಾರ ಸಾಮಗ್ರಿ ಹೊತ್ತ ನೂರಾರು ಟ್ರಕ್ಗಳು ಇಸ್ರೇಲ್ನ ಆದೇಶ ಹೊರಬೀಳಲಿ ಎಂದು ಕಾಯುತ್ತಿವೆ. ಹಾಗೇ ಗಜಾಪಟ್ಟಿ ಜನ ಕೂಡ ಜೀವ ಉಳಿಸಿಕೊಳ್ಳಲು ಇಲ್ಲಿ ಸಾಲುಗಟ್ಟಿ ನಿಂತು ಹರಸಾಹಸ ಮಾಡುತ್ತಿದ್ದಾರೆ.
ಇದೆಲ್ಲಾ ಏನೇ ಇರಲಿ, ಮಾನವೀಯ ನೆಲೆಯಲ್ಲಿ ಮೊದಲು ಅಮಾಯಕರ ಜೀವ ಉಳಿಸಿ ಎಂದು ಇಡೀ ಜಗತ್ತು ಈಗ ಇಸ್ರೇಲ್ಗೆ ಬುದ್ಧಿ ಹೇಳುತ್ತಿದೆ. ಆದರೆ ಇಸ್ರೇಲ್ ಈಗ ಸೇಡನ್ನು ಮುಂದಿಟ್ಟುಕೊಂಡು, ಹಮಾಸ್ ಉಗ್ರರನ್ನ ಟಾರ್ಗೆಟ್ ಮಾಡಿದೆ. ಇವರ ಕಿತ್ತಾಟಕ್ಕೆ ಸಿಲುಕಿ ಸಾಯುತ್ತಿರುವುದು ಮಾತ್ರ ಅಮಾಯಕರು. ಇಷ್ಟಾದರೂ ವಿಶ್ವಸಂಸ್ಥೆ ಏನೂ ಮಾಡಲಾಗದೆ ಸುಮ್ಮನೆ ಕೂತಿದೆ. ಇದನ್ನೇ ರಷ್ಯಾ ಕೂಡ ಅಸ್ತ್ರ ಮಾಡಿಕೊಂಡು, ಅಮೆರಿಕ & ಇಸ್ರೇಲ್ನ ವಿರುದ್ಧ ಗುಡುಗುತ್ತಿದೆ.












Click it and Unblock the Notifications