ಷರಿಯಾ ಕಾನೂನು ಎತ್ತಿಹಿಡಿಯುವಂತೆ ತಾಲಿಬಾನ್ ನಾಯಕ ಕರೆ
ಕಾಬೂಲ್, ಸೆಪ್ಟೆಂಬರ್ 08: ಷರಿಯಾ ಕಾನೂನನ್ನು ಎತ್ತಿ ಹಿಡಿಯುವಂತೆ ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡಜಾದಾ ಕರೆ ನೀಡಿದ್ದಾರೆ.
ವೈದ್ಯರು, ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಂತಹ ಪ್ರತಿಭಾವಂತ ಮತ್ತು ವೃತ್ತಿಪರರಿಗೆ ಸರ್ಕಾರವು ಪ್ರಾಮುಖ್ಯತೆಯನ್ನು ನೀಡುತ್ತದೆ. ದೇಶದ ಅಭಿವೃದ್ಧಿಗೆ ಅವರ ಅಗತ್ಯವಿದೆ ಎಂದು ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡಜಾದ ಹೇಳಿದ್ದು, ದೇಶವನ್ನು ತೊರೆಯದಂತೆ ತಾಲಿಬಾನ್ ಜನರಿಗೆ ಮನವಿ ಮಾಡಿದ್ದಾನೆ. ತಾಲಿಬಾನ್ ಆಳ್ವಿಕೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ, ಹಾಗಾಗಿ ಯಾರೂ ಅಫ್ಘಾನಿಸ್ತಾನವನ್ನು ತೊರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾನೆ.
ಷರಿಯಾ ಕಾನೂನು ಎಂದರೇನು; ಅಫ್ಘಾನಿಸ್ತಾನದಲ್ಲಿ ಕೈ-ಕಾಲು ಕತ್ತರಿಸಲು ಹೇಳುತ್ತದೆಯೇ ಕಾಯ್ದೆ!?
ತಾಲಿಬಾನ್ ಶಾಂತಿಯುತ, ಸಮೃದ್ಧ ಮತ್ತು ಸ್ವಾವಲಂಬಿ ಅಫ್ಘಾನಿಸ್ತಾನವನ್ನು ಬಯಸುತ್ತದೆ. ಏಕೆಂದರೆ ದೇಶದಲ್ಲಿ ಯುದ್ಧ ಮತ್ತು ಸಂಘರ್ಷದ ಎಲ್ಲಾ ಕಾರಣಗಳನ್ನು ತೊಡೆದುಹಾಕಲು ಈ ಪ್ರಯತ್ನಗಳನ್ನು ಮಾಡಲಾಗುವುದು.
ಇದರಿಂದ ದೇಶವಾಸಿಗಳು ಸಂಪೂರ್ಣ ಸುರಕ್ಷತೆ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಹೊಸ ಸರ್ಕಾರವು ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಮತ್ತು ಅದಕ್ಕಾಗಿ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಹೇಳಿಕೊಂಡಿದ್ದಾನೆ.
ಈ ಕುರಿತು ಇದೇ ಮೊದಲ ಬಾರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಹಿಬತುಲ್ಲಾ ಅಖುಂಡಜಾದ, ಭವಿಷ್ಯದ ಅಫ್ಘಾನಿಸ್ತಾನವು ತಾಲಿಬಾನ್ ಆಳ್ವಿಕೆಯಲ್ಲಿ ಹೇಗಿರುತ್ತದೆ ಎಂಬುದುನ್ನು ತಿಳಿಸಿದ್ದಾನೆ.
ಇಸ್ಲಾಮಿಕ್ ಕಾನೂನಿಗೆ ವಿರುದ್ಧವಲ್ಲದ ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳು, ಒಪ್ಪಂದಗಳು ಮತ್ತು ನಿರ್ಣಯಗಳಿಗೆ ತಾಲಿಬಾನ್ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ತಾಲಿಬಾನ್ ಆಳ್ವಿಕೆಯಲ್ಲಿ ಅಫಘಾನ್ ಮಣ್ಣನ್ನು ಬೇರೆ ಯಾವುದೇ ದೇಶದ ಭದ್ರತೆಗೆ ವಿರುದ್ಧವಾಗಿ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಎಲ್ಲಾ ವಿದೇಶಿ ರಾಜತಾಂತ್ರಿಕರು, ರಾಯಭಾರ ಕಚೇರಿಗಳು, ದೂತಾವಾಸಗಳು, ಮಾನವೀಯ ಸಂಘಟನೆಗಳು ಮತ್ತು ಹೂಡಿಕೆದಾರರಿಗೆ ಅಫ್ಘಾನಿಸ್ತಾನದಲ್ಲಿ ಸುರಕ್ಷಿತ ವಾತಾವರಣವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಷರಿಯಾ ಚೌಕಟ್ಟಿನೊಳಗೆ ಎಲ್ಲಾ ದೇಶವಾಸಿಗಳಿಗೆ ಧಾರ್ಮಿಕ ಮತ್ತು ಆಧುನಿಕ ವಿಜ್ಞಾನಕ್ಕೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ತಾಲಿಬಾನ್ ಒದಗಿಸುತ್ತದೆ. ಅದೇ ಸಮಯದಲ್ಲಿ, ಇಸ್ಲಾಂನ ವ್ಯಾಪ್ತಿಯಲ್ಲಿ ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ಹಿಂದುಳಿದ ಜನರ ಹಕ್ಕುಗಳನ್ನು ರಕ್ಷಿಸಲು ತಾಲಿಬಾನ್ ಗಂಭೀರ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಭರವಸೆ ನೀಡಲಾಗಿದೆ.
ಷರಿಯಾ ಕಾನೂನು ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆಯಾಗಿದೆ. ಕುರಾನ್ ಹಾಗೂ ಇಸ್ಲಾಂ ಧರ್ಮದ ಕೇಂದ್ರ ಪಠ್ಯವಾದ ಫತ್ವಾಗಳಿಂದ ವಿಭಾಗಿಸಲಾಗಿದೆ. ಇಸ್ಲಾಂ ವಿದ್ವಾಂಸರ ತೀರ್ಪುಗಳನ್ನು ಕಾನೂನು ಒಳಗೊಂಡಿದೆ.
ಷರಿಯಾ ಕಾನೂನಿನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ, ಉಪವಾಸ ಹಾಗೂ ಬಡವರಿಗೆ ನೀಡುವ ದಾನದ ಮಹತ್ವವನ್ನು ತಿಳಿಸುತ್ತದೆ. ಇದರಲ್ಲಿರುವ ನಿಬಂಧನೆಗಳು ಜೀವನ ಸಂಹಿತೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಆಶಯದಂತೆ ಪ್ರತಿಯೊಬ್ಬ ಮುಸ್ಲಿಂ ಧರ್ಮೀಯನು ಜೀವನವನ್ನು ಹೇಗೆ ನಡೆಸಬೇಕು? ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ತಿಳಿಸುತ್ತದೆ.
ಮುಸ್ಲಿಂ ಧರ್ಮೀಯರ ಜೀವನ ಕ್ರಮವನ್ನು ಇದು ತಿಳಿಸುತ್ತದೆ. ಪಾಶ್ಚಾತ್ಯ ಜೀವನ ಕ್ರಮದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಈ ಕಾನೂನು ತಿಳಿಸುತ್ತದೆ. ಶರಿಯಾ ನಿಯಮಕ್ಕೆ ಅನುಗುಣವಾಗಿ ತನ್ನ ನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಕಡ್ಡಾಯವಾಗಿದೆ.
ಷರಿಯಾ ಕಾನೂನಿನ ಪ್ರಕಾರ ಅಪರಾಧಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 'ಹದ್' ಅಪರಾಧಗಳು ಹಾಗೂ 'ತಜೀರ್' ಅಪರಾಧಗಳು ಎಂದಾಗಿದೆ. ಹದ್ ಅಪರಾಧಗಳಿಗೆ ನಿಗದಿತ ದಂಡಗಳೊಂದಿಗೆ ಗಂಭೀರ ಅಪರಾಧ ಎಂದು ಕರೆಯಿಸಿಕೊಳ್ಳುತ್ತದೆ.
ಇನ್ನು ತಜೀರ್ ಅಪರಾಧಗಳ ಶಿಕ್ಷೆ ಹಾಗೂ ತೀರ್ಪನ್ನು ನ್ಯಾಯಾಧೀಶರ ವಶಕ್ಕೆ ಒಪ್ಪಿಸಲಾಗುತ್ತದೆ. ಹದ್ ಅಪರಾಧಗಳಲ್ಲಿ ಕಳ್ಳತನದ ಶಿಕ್ಷೆಗೆ ಕೈಗಳನ್ನು ಕತ್ತರಿಸುವ ದಂಡನೆಯನ್ನು ವಿಧಿಸಲಾಗುತ್ತದೆ. ವ್ಯಭಿಚಾರ ಅಪರಾಧಕ್ಕೆ ಕಲ್ಲೆಸೆದು ಹತ್ಯೆಗೈಯ್ಯುವ ಶಿಕ್ಷೆಯನ್ನು ವಿಧಿಸಲಾಗಿದೆ.