ಅಫ್ಘಾನಿಸ್ತಾನದ ಗ್ರಾಮೀಣ ಭಾಗಗಳಲ್ಲಿ ಆಹಾರ ತುರ್ತು ಪರಿಸ್ಥಿತಿ: ವಿಶ್ವಸಂಸ್ಥೆ
ಕಾಬೂಲ್, ಸೆಪ್ಟೆಂಬರ್ 15: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ದೇಶಾದ್ಯಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಫ್ಘಾನಿಸ್ತಾನದ ಗ್ರಾಮೀಣ ಭಾಗಗಳಲ್ಲಿ ಆಹಾರ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಅಂಥವರಿಗೆ ನೆರವಾಗಬೇಕು ಎಂದು ವಿಶ್ವ ಸಂಸ್ಥೆ ಹೇಳಿದೆ.
ಅಫ್ಘಾನಿಸ್ತಾನದಲ್ಲಿ 40 ಲಕ್ಷ ಮಂದಿ ಆಹಾರ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಫ್ಘನ್ನ ಶೇ.70ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಅವರು ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಗ್ರಾಮೀಣ ಭಾಗದಲ್ಲಿನ ಬಹುಪಾಲು ಜನರಿಗೆ ಚಳಿಗಾಲದ ಗೋಧಿ ನಾಟಿ ಮಾಡಲು, ಜಾನುವಾರುಗಳಿಗೆ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಕುಟುಂಬಗಳು, ವೃದ್ಧರು, ದುರ್ಬಲರಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ದೇಶದ 34 ಪ್ರಾಂತ್ಯಗಳ ಪೈಕಿ ಶೇ.25ರಲ್ಲಿ ತೋವ್ರ ಬರಗಾಲವಿದ್ದು,73 ಲಕ್ಷ ಜನರು ಬಾಧಿತರಾಗಿದ್ದಾರೆ. ಆಹಾರ ಸೇವನೆ ನಡುವಿನ ಅಂತರ ಅತಿಯಾದ ಅಪೌಷ್ಠಿಕತೆ ಜನರನ್ನು ಕಿತ್ತು ತಿನ್ನುತ್ತಿದೆ.
ಇನ್ನೊಂದೆಡೆ ಮಹಿಳೆಯರ ಹಕ್ಕನ್ನು ಗೌರವಿಸುವುದು ಸೇರಿದಂತೆ ಹಲವು ಭರವಸೆಗಳನ್ನು ತಾಲಿಬಾನ್ ವಿಶ್ವ ಸಮುದಾಯಕ್ಕೆ ನೀಡಿತ್ತು, ಆದರೆ ಈ ಬದ್ಧತೆಗೆ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ . ಮಹಿಳೆಯರನ್ನು ಸಾರ್ವಜನಿಕ ಕಾರ್ಯಕ್ಷೇತ್ರದಿಂದ ಹೊರಗಿಡಲಾಗಿದೆ. ತಮ್ಮ ಹಕ್ಕುಗಳ ಬಗ್ಗೆ ಮಹಿಳೆಯರು ಹಾಗೂ ಜನಾಂಗೀಯ ಗುಂಪುಗಳು ಆತಂಕಕ್ಕೆ ಒಳಗಾಗಿವೆ ಎಂದು ವಿಶ್ವಸಂಸ್ಥೆ ಹೇಳಿತ್ತು.
ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ಆ ದೇಶದಲ್ಲಿ ಈ ಹೊಸ ಬಿಕ್ಕಟ್ಟು, ಗಂಭೀರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವ ಸಂಸ್ಥೆ ಆಹಾರ ಕಾರ್ಯಕ್ರಮಗಳ ಆಫ್ಘನ್ ನಿರ್ದೇಶಕಿ ಮೇರಿ ಎಲ್ಲೆನ್, ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇ. 40 ಕ್ಕಿಂತಲೂ ಹೆಚ್ಚು ಬೆಳೆ ವಿಫಲವಾಗಿದ್ದು, ಸಂಗ್ರಹಿಸಿದ ಆಹಾರ ಧಾನ್ಯಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ.
ತಾಲಿಬಾನಿಗಳ ಆಗಮನದಿಂದ ಸಾವಿರಾರು ಜನರು ನಿರಾಶ್ರಿತರಾಗುತ್ತಿದ್ದಾರೆ. ಅವರಿಗೆ ಆಹಾರ ಒದಗಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ 40 ಲಕ್ಷ ಜನರ ಹಸಿವನ್ನು ನೀಗಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ 90 ಲಕ್ಷ ಜನರಿಗೆ ಆಹಾರ ಕಲ್ಪಿಸಬೇಕಾದ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸವಾಲುಗಳಿವೆ. ಈ ಹಸಿವಿನ ಬಿಕ್ಕಟು ನಿವಾರಿಸಲು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ತುರ್ತಾಗಿ 20 ಕೋಟಿ ಅಮೆರಿಕನ್ ಡಾಲರ್ ಅಗತ್ಯವಿದೆ ಎಂದು ಮೇರಿ ವಿವರಿಸಿದರು.
ಈಗಾಗಲೇ ಅಫ್ಘಾನಿಸ್ತಾನದಲ್ಲಿ ಶೇ. 40 ರಷ್ಟು ಆಹಾರ ಧಾನ್ಯಗಳು ನಾಶವಾಗಿದೆ. ಬರಗಾಲದಿಂದಾಗಿ ಜಾನುವಾರುಗಳು ಕೂಡಾ ಮೃತ ಪಟ್ಟಿದೆ. ಸಾವಿರಾರು ಜನರು ತಾಲಿಬಾನ್ ದಾಳಿಯಿಂದಾಗಿ ಆತಂಕಕ್ಕೆ ಒಳಗಾದ ಹಿನ್ನೆಲೆ ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಚಳಿಗಾಲವು ಶೀಘ್ರವಾಗಿ ಬರುತ್ತಿದೆ, ಅಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಓಟ ನಡೆಸುವಂತಾಗಿದೆ,"
ಈ ಸಂಘರ್ಷವನ್ನು ನಿಲ್ಲಿಸುವಂತೆ ಮನವಿ ಮಾಡಿದ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲೆನ್, ಇನ್ನು ಕೂಡಾ ಸುಮಾರು 200 ಮಿಲಿಯನ್ ಡಾಲರ್ಗಳ ಅಗತ್ಯವಿದೆ. ದೇಣಿಗೆ ನೀಡಲು ಇಚ್ಛಿಸುವವರು ನೀಡಬಹುದು ಎಂದಿದ್ದಾರೆ. ಹಾಗೆಯೇ ಈ ದೇಣಿಗೆಯಿಂದ ಅಫ್ಘಾನಿಸ್ತಾನದ ಸ್ಥಿತಿಯನ್ನು ಕೊಂಚ ಸುಧಾರಿಸಲು ಸಹಕಾರಿಯಾದೀತು ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ಇನ್ನು ಅಫ್ಘಾನಿಸ್ತಾನದಲ್ಲಿ ಸುಮಾರು 30 ಮಿಲಿಯನ್ ಜನರು ಬಡತನ ರೇಖಿಗಿಂತ ಕೆಳ ಮಟ್ಟದವರಾಗಿದ್ದಾರೆ ಎಂದು ವರದಿಗಳು ಹೇಳಿದೆ. ಹಾಗೆಯೇ 11 ಮಿಲಿಯನ್ ಅಫ್ಘಾನ್ ಜನರು ಆಹಾರ ಭದ್ರತೆ ಕೊರತೆಯಿಂದಾಗಿ ನರಳುತ್ತಾರೆ ಎಂದು ಕೂಡಾ ಅಫ್ಘಾನಿಸ್ತಾನದ ಆಹಾರ ಭದ್ರತೆಯ ಬಗ್ಗೆಗಿನ ವರದಿಯು ತಿಳಿಸಿದೆ.