ರಷ್ಯಾ ವಿರುದ್ಧದ ಹೋರಾಟಕ್ಕೆ ಕೈದಿಗಳು, ಮಾಜಿ ಸೈನಿಕರ ಬಳಕೆ
ಕೀವ್, ಫೆಬ್ರವರಿ 28: ರಷ್ಯಾದ ವಿರುದ್ಧ ಹೋರಾಡಲು ಮಾಜಿ ಸೈನಿಕರು ಹಾಗೂ ಕೈದಿಗಳ ಬಳಕೆಗೆ ಉಕ್ರೇನ್ ನಿರ್ಧರಿಸಿದೆ.
ಅಪರಾಧಿಯ ಸೇವಾ ದಾಖಲೆ, ಯುದ್ಧದ ಅನುಭವ ಮತ್ತು ಜೈಲಿನಲ್ಲಿ ಆತನ ವರ್ತನೆಯನ್ನು ಪರಿಗಣಿಸಿದ ನಂತರವೇ ವಾರ್ ಝೋನ್ ನಲ್ಲಿ ಭಾಗಿಯಾಗಾಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಜನರಲ್ ಕಚೇರಿಯ ಅಧಿಕಾರಿ ಆಂಡ್ರೆ ಸಿನುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಷ್ಯಾದ ನಿರಂತರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಉಕ್ರೇನ್ ಯಾವುದೇ ಸಣ್ಣ ಅಸ್ತ್ರವನ್ನು ಬಿಡುತ್ತಿಲ್ಲ. ಈ ಮಧ್ಯೆ ರಣಭಯಂಕರ ಕೈದಿಗಳು ಹಾಗೂ ಮಿಲಿಟರಿ ಹಿನ್ನೆಲೆಯುಳ್ಳ ಆರೋಪಿಗಳನ್ನು ಯುದ್ಧ ಭೂಮಿಗೆ ಕಳುಹಿಸಲು ಉಕ್ರೇನ್ ನಿರ್ಧರಿಸಿದೆ. ಉಕ್ರೇನ್ ನ ರಾಷ್ಟ್ರೀಯ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಈ ನಿರ್ಧಾರವನ್ನು ದೃಢಪಡಿಸಿದೆ.

ಈ ನಿರ್ಧಾರದ ಬಳಿಕ ಮಾಜಿ ಯುದ್ಧ ಅನುಭವಿ ಕೈದಿಗಳಲ್ಲಿ ಸೆರ್ಗೆಯ್ ಟೋರ್ಬಿನ್ ಒಬ್ಬ. ಈತನನ್ನು ಬಿಡುಗಡೆಗೆ ನಿರ್ಧರಿಸಲಾಗಿದ್ದು, ಅಪರಾಧಿ ಟೊರ್ಬಿನ್ ಈ ಹಿಂದೆ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಗಳೊಂದಿಗೆ ಯುದ್ಧಗಳಲ್ಲಿ ಹೋರಾಡಿದ್ದ. 2018ರಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಕಟೆರಿನಾ ಹ್ಯಾಂಡ್ಜುಕ್ ಮೇಲೆ ಆಸಿಡ್ ಎರೆಚಿದ್ದ. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಳು.
ಈ ಹಿನ್ನೆಲೆಯಲ್ಲಿ ಟೊರ್ಬಿನ್ ವಿರುದ್ಧ ಆರು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈಗ ಈತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿ ಆಂಡ್ರೆ ತಿಳಿಸಿದ್ದಾರೆ.
2018 ರಲ್ಲಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಕ್ಕಾಗಿ ಒಂಭತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಮಾಜಿ ಸೈನಿಕ ಡಿಮಿಟ್ರಿ ಬಾಲಬುಖಾ ಕೂಡ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ಬೆದರಿಕೆಯ ಬಳಿಕ ಉಕ್ರೇನ್ ಶಾಂತಿ ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್ ಗಡಿಯಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಾತುಕತೆಗೆ ಮುಂದಾಗಲಿವೆ. ಸಂಧಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ನಿಯೋಗಗಳ ಆಗಮನಕ್ಕೆ ಕಾದಿದ್ದೇವೆ ಎಂದು ಬೆಲಾರಸ್ ಸರ್ಕಾರ ತಿಳಿಸಿದೆ.
ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಸಂಧಾನ ನಡೆಸಲು ಎಲ್ಲವೂ ಸಿದ್ಧವಾಗಿದೆ. ಉಭಯ ರಾಷ್ಟ್ರಗಳ ನಿಯೋಗಗಳ ಬರುವಿಕೆಗಾಗಿ ಕಾಯಲಾಗುತ್ತಿದೆ ಎಂದು ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.












Click it and Unblock the Notifications