ಉಕ್ರೇನ್-ರಷ್ಯಾ ಬಿಕ್ಕಟ್ಟು: ಭಾರತೀಯರು ಉಕ್ರೇನ್ ತೊರೆಯಲು ಸೂಚನೆ
ನವದೆಹಲಿ, ಫೆಬ್ರವರಿ 15: ಉಕ್ರೇನ್ ಮತ್ತು ರಷ್ಯಾ ನಡುವಿನ ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.
ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತದ ರಾಯಭಾರ ಕಚೇರಿಯು, "ಉಕ್ರೇನ್ನಲ್ಲಿನ ಪ್ರಸ್ತುತ ಪರಿಸ್ಥಿತಿಯ ನಡುವೆ ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳು, ವಿಶೇಷವಾಗಿ ವಾಸ್ತವ್ಯದ ಅಗತ್ಯವಿಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೊರಡುವ ಬಗ್ಗೆ ಯೋಚಿಸಬಹುದು. ಭಾರತೀಯ ಪ್ರಜೆಗಳು ಈ ಬಿಕ್ಕಟ್ಟಿನಿಂದ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು. ಉಕ್ರೇನ್ ಒಳಗೆಯೂ ಅಗತ್ಯವಿದ್ದರೆ ಮಾತ್ರ ಸಂಚಾರ ಮಾಡಿ," ಎಂದು ಸಲಹೆ ನೀಡಲಾಗಿದೆ.
"ಉಕ್ರೇನ್ನಲ್ಲಿ ಇರುವ ಭಾರತೀಯ ಪ್ರಜೆಗಳ ಸ್ಥಿತಿಯನ್ನು ತಿಳಿಯಲು ಸುಲಭವಾಗಲು, ಅಗತ್ಯ ಬಂದಾಗ ಭಾರತೀಯ ಪ್ರಜೆಗಳನ್ನು ಸಂಪರ್ಕ ಮಾಡಲು ಸುಲಭವಾಗುವಂತೆ ರಾಯಭಾರ ಕಚೇರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುವಂತೆ ವಿನಂತಿ ಮಾಡಲಾಗಿದೆ. ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಎಲ್ಲಾ ಸೇವೆಗಳನ್ನು ಒದಗಿಸಲು ರಾಯಭಾರ ಕಚೇರಿಯು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ," ಎಂದು ಕೂಡಾ ತಿಳಿಸಲಾಗಿದೆ.
ನೋಂದಾವಣಿ ಮಾಡಿಕೊಳ್ಳುವಂತೆ ತಿಳಿಸಿದ್ದ ರಾಯಭಾರಿ ಕಚೇರಿ
ಜನವರಿ 26 ರಂದು, ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್ನಲ್ಲಿ ನೆಲೆಸಿರುವ ತನ್ನ ನಾಗರಿಕರನ್ನು ಶೀಘ್ರದಲ್ಲೇ ನೋಂದಾಯಿಸಿಕೊಳ್ಳುವಂತೆ ಕೇಳಿಕೊಂಡಿತ್ತು. "ಭಾರತೀಯ ನಾಗರಿಕರೊಂದಿಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುವ ಉದ್ದೇಶದಿಂದ ಮತ್ತು ತ್ವರಿತ ರೀತಿಯಲ್ಲಿ ಮಾಹಿತಿಯನ್ನು ಪ್ರಸಾರ ಮಾಡುವ ಉದ್ದೇಶದಿಂದ, ಭಾರತದ ರಾಯಭಾರ ಕಚೇರಿ, ಪ್ರಸ್ತುತ ಉಕ್ರೇನ್ ಪ್ರದೇಶದಲ್ಲಿ ನೆಲೆಗೊಂಡಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರಿಗೆ ಈ ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಲು ಕೈವ್ ವಿನಂತಿಸುತ್ತದೆ. ಪ್ರಸ್ತುತ ಭಾರತದಲ್ಲಿದ್ದು ಆನ್ಲೈನ್ ಶಿಕ್ಷಣವನ್ನು ಪಡೆಯುತ್ತಿರುವವರು ಈ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ," ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ಹಾಗೂ ರಷ್ಯಾ ಉದ್ವಿಗ್ನತೆ ಹೆಚ್ಚಿದೆ, ರಷ್ಯಾ ಮತ್ತು ನ್ಯಾಟೋ ರಷ್ಯಾ-ಉಕ್ರೇನಿಯನ್ ಗಡಿಯಲ್ಲಿ ಪಡೆಗಳನ್ನು ಹೆಚ್ಚಿಸುತ್ತಿದೆ ಎಂದು ಪರಸ್ಪರ ಆರೋಪಿಸುತ್ತಿವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಉಕ್ರೇನ್ ರಷ್ಯಾ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ ಎಂದು ಆರೋಪಿಸಿದೆ. ಈ ನಡುವೆ ಮಾಸ್ಕೋ ಮಾತ್ರ ಇದನ್ನು ನಿರಾಕರಿಸಿದೆ. ಯಾವುದೇ ದೇಶದ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ ಎಂದು ಹೇಳಿದೆ.
ಭಾರತ ಸೇರಿದಂತೆ ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಯಾವುದೇ ದೇಶವು ಪಾತ್ರ ವಹಿಸುವ ಪ್ರಯತ್ನವನ್ನು ಯುಎಸ್ ಸ್ವಾಗತಿಸುತ್ತದೆ ಎಂದು ಶ್ವೇತಭವನದ ವಕ್ತಾರರು ಈ ಹಿಂದೆ ಹೇಳಿದ್ದರು. "ನಾವು ನಿಸ್ಸಂಶಯವಾಗಿ ಯಾವ ದೇಶಗಳ ಪಾತ್ರವನ್ನು ಕೂಡಾ ಸ್ವಾಗತಿಸುತ್ತೇವೆ ಮತ್ತು ಈ ಕುರಿತು ನಾವು ಹಲವಾರು ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ ಭಾರತೀಯ ಅಧಿಕಾರಿಗಳಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಮಾತುಕತೆ ನಡೆದಿಲ್ಲ," ಎಂದು ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ಎ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಉಕ್ರೇನ್ ತೊರೆಯಲು ಸೂಚಿಸಿದ ದೇಶಗಳು ಯಾವುದು?
ಉಕ್ರೇನ್ ತೊರೆಯುವಂತೆ ತನ್ನ ದೇಶದ ನಾಗರಿಕರಿಗೆ ಹಲವಾರು ದೇಶಗಳು ಈಗಾಗಲೇ ಸೂಚನೆ ನೀಡಿದೆ. ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳು ತಮ್ಮ ದೇಶದ ನಾಗರಿಕರು ಉಕ್ರೇನ್ ಅನ್ನು ತೊರೆದು ದೇಶಕ್ಕೆ ವಾಪಾಸ್ ಬರುವಂತೆ ಹೇಳಿದೆ. (ಒನ್ಇಂಡಿಯಾ ಸುದ್ದಿ)
Recommended Video