UK-India Week 2022, ಲಂಡನ್‌ನಲ್ಲಿ ವಜ್ರಮಹೋತ್ಸವ ಆರಂಭ

ಲಂಡನ್, ಜೂನ್ 28: ಭಾರತ ಮತ್ತು ಯುಕೆ (ಬ್ರಿಟನ್) ದೇಶಗಳ ನಡುವಿನ ಸಂಬಂಧಕ್ಕೆ 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ಆಚರಣೆಯಾಗಿ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮಗಳು ಸೋಮವಾರ ಆರಂಭಗೊಂಡವು. ಕಾರ್ಯಕ್ರಮ ಆಯೋಜಿಸಿದ ಇಂಡಿಯಾ ಗ್ಲೋಬಲ್ ಫೋರಂನ ಸ್ಥಾಪಕ ಮತ್ತು ಸಿಇಒ ಪ್ರೊ. ಮನೋಜ್ ಲಾಡವಾ ಸೇರಿದಂತೆ ಹಲವು ಗಣ್ಯರು ಸೋಮವಾರ ಮೊದಲ ದಿನ ಭಾಷಣ ಮಾಡಿದರು.

ಪ್ರತೀ ವರ್ಷವೂ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮಗಳು ನಡೆಯುತ್ತಿವೆ. ಜುಲೈ 1ರವರೆಗೆ ಇರುವ ಈ ಬಾರಿಯ ಕಾರ್ಯಕ್ರಮಗಳಿಗೆ ರೀಇಮ್ಯಾಜಿನ್@75 ಎಂಬ ಥೀಮ್ ನಿಗದಿ ಮಾಡಲಾಗಿದೆ. ಭಾರತ ಬ್ರಿಟನ್ ಸಂಬಂಧಕ್ಕೆ 75 ವರ್ಷವಾದ್ದರಿಂದ ವಿಶೇಷ ಪರಿಕಲ್ಪನೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮೊದಲ ದಿನದ ಉಪನ್ಯಾಸಗಳಲ್ಲಿ ಪ್ರಮುಖವಾದುದು "ಕ್ರಿಯೇಟಿವ್ ಇಂಡಸ್ಟ್ರೀಸ್ ಅಂಡ್ ಕಲ್ಚರಲ್ ಎಕನಾಮಿ" ವಿಚಾರವಾಗಿ ನಡೆದ ಚರ್ಚೆ, ಸಂವಾದಗಳು. ಹಾಗೆಯೇ, ಸಾಂಸ್ಕೃತಿಕ ಕ್ಷೇತ್ರದ ಅಸಂಖ್ಯ ಅವಕಾಶಗಳ ಬಗೆಗಿನ ಸೆಮಿನಾರ್‌ನಿಂದ ಯುಕೆ-ಇಂಡಿಯಾ ವೀಕ್ ಚಾಲನೆಗೊಂಡಿತು.

"ಈ ಸಂಬಂಧದಲ್ಲಿ ನಮ್ಮ ಆಳವಾದ ಸಾಂಸ್ಕೃತಿಕ ಬೆಸುಗೆಯು ಮನೆಮಾಡಿದೆ. ಈ ಗೆಲುವಿನ ಜೊತೆಗಾರಿಕೆಯ ನಿಜವಾದ ನಾಡಿಮಿಡಿತವೇ ಈ ಸಾಂಸ್ಕೃತಿಕ ಬೆಸುಗೆ. ಆದ್ದರಿಂದ ಸಾಂಸ್ಕೃತಿಕ ರಂಗದಲ್ಲಿ ಬಹು ಅವಕಾಶಗಳ ಬಗ್ಗೆ ಗಮನಕೇಂದ್ರಿತವಾದ ಉಪನ್ಯಾಸದೊಂದಿಗೆ ಯುಕೆ-ಇಂಡಿಯಾ ವೀಕ್ ೨೦೨೨ ಆರಂಭವಾಗಿರುವುದು ಬಹಳ ಸಂತೋಷ" ಎಂದು ಇಂಡಿಯಾ ಗ್ಲೋಬಲ್ ಫೋರಂನ ಸ್ಥಾಪಕ ಮತ್ತು ಸಿಇಒ ಪ್ರೊ. ಮನೋಜ್ ಲಾಡ್ವಾ ಹೇಳಿದರು.

ಲಂಡನ್‌ನ ನೆಹರೂ ಸೆಂಟರ್‌ನಲ್ಲಿ ಉಪನ್ಯಾಸಗಳು ನಡೆದವು. ಭಾರತ ಮತ್ತು ಬ್ರಿಟನ್‌ನ ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿರುವ ಪ್ರಮುಖ ಸೆಲಬ್ರಿಟಿಗಳು ಮತ್ತು ತಜ್ಞರು ಉಪನ್ಯಾಸದಲ್ಲಿ ಭಾಗಿಯಾದರು.

ಇತಿಹಾಸ ಹಂಚಿರಬಹುದು, ಅನುಭವ ಅಲ್ಲ

ಇತಿಹಾಸ ಹಂಚಿರಬಹುದು, ಅನುಭವ ಅಲ್ಲ

ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಅಧ್ಯಕ್ಷ ಡಾ. ವಿನಯ್ ಸಹಸ್ರಬುದ್ಧೆ ಮತ್ತು ಭಾರತ ಸರಕಾರದ ಆರ್ಥಿಕ ಸಲಹೆಗಾರ ಸಂಜೀವ್ ಸಾನ್ಯಾಲ್ ನಡುವಿನ ಸಂವಾದ ಕುತೂಹಲ ಮೂಡಿಸಿತು.

"ನಮ್ಮ ಇತಿಹಾಸ ಹಂಚಿರಬಹುದು. ಆದರೆ, ಅನುಭವ ಮತ್ತು ಸ್ಮರಣೆ ಹಂಚಿಕೆಯಾಗಿಲ್ಲ. ಹಂಚಿತ ಮೌಲ್ಯ ಅಥವಾ ಶೇರ್ಡ್ ವ್ಯಾಲ್ಯೂ ಎಂದು ನಾವು ಹೇಳುವಾಗ, ಭಾರತದ ದೃಷ್ಟಿಕೋನದಲ್ಲಿ ಮಾತುಕತೆಯ ಮೂಲಕ ಈ ಹಂಚಿತ ಮೌಲ್ಯವನ್ನು ಗುರುತಿಸಲು ಇಚ್ಛಿಸುತ್ತೇವೆ. ತಂತ್ರಜ್ಞಾನದ ಮೂಲಕ 21ನೇ ಶತಮಾನದ ದೃಷ್ಟಿಕೋನದಲ್ಲಿ ನಾವು ವಿಚಾರಗಳನ್ನು ನೋಡುವುದು ಮುಖ್ಯ" ಎಂದು ಸಂಜೀವ್ ಸಾನ್ಯಾಲ್ ಅಭಿಪ್ರಾಯಪಟ್ಟರು.

ಎಲ್ಲರೊಂದಿಗೆ ನ್ಯಾಯಯುತವಾಗಿರಿ

ಎಲ್ಲರೊಂದಿಗೆ ನ್ಯಾಯಯುತವಾಗಿರಿ

"ಸಮಯ ಕಳೆದಂತೆ ಮೌಲ್ಯ ಹೆಚ್ಚು ಆಸ್ತಿ ಎಂದರೆ ಅದು ಜನರು ಮಾತ್ರ. ಸಂಸ್ಕೃತಿಗೆ ಗ್ರಹಿಕೆಯ ಅಗಾಧ ಶಕ್ತಿ ಇರುತ್ತದೆ. ಆದ್ದರಿಂದ ನಿರಂತರವಾಗಿ ನಾವು ಹೊಂದಿಕೆಯತ್ತ ಸಾಗುವುದು ಬಹಳ ಮುಖ್ಯ ಎನಿಸುತ್ತದೆ" ಎಂದು ಸೆರೆಂಡಿಪಿಟಿ ಆರ್ಟ್ಸ್ ಫೌಂಡೇಶನ್‌ನ ಸ್ಥಾಪಕ ಮತ್ತು ಛೇರ್ಮನ್ ಸುನಿಲ್ ಕಾಂತ್ ಮುಂಜಲ್ ಹೇಳಿದರು.

"ಭಾರತಕ್ಕೆ ಬಹಳ ಸಮೃದ್ಧ ಪರಂಪರೆ ಇದೆ. ನಮ್ಮ ಕಲೆ ಮತ್ತು ಕೌಶಲ್ಯಗಳು ಕಾಲದ ಮಿತಿಮೀರಿ ನಿಲ್ಲುವಂತೆ ಮಾಡುವುದು ಮುಖ್ಯ. ನಮ್ಮ ಎಲ್ಲಾ ಕಂಪನಿಗಳಿಗೂ ನಾವು ಹೇಳುವ ಸಂದೇಶವೆಂದರೆ, ಎಲ್ಲಾ ಕಾಲದಲ್ಲೂ ಎಲ್ಲಾ ಜನರಿಗೂ ನ್ಯಾಯಯುತವಾಗಿರಿ," ಎಂದು ತಿಳಿಸಿದರು.

ಕಂಚಿನ ಯುಗದಿಂದಲೂ ಜೀವಂತ ನಾಗರಿಕತೆ

ಕಂಚಿನ ಯುಗದಿಂದಲೂ ಜೀವಂತ ನಾಗರಿಕತೆ

ಲಂಡನ್‌ನ ನೆಹರೂ ಕೇಂದ್ರದ ನಿರ್ದೇಶಕ ಅಮಿಶ್ ತ್ರಿಪಾಠಿ ಮಾತನಾಡಿ, "ಭಾರತ ಮತ್ತು ಬ್ರಿಟನ್ ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧ ಗಟ್ಟಿಯಾಗಿದೆ. ಸಿನಿಮಾ, ಪುಸ್ತಕ, ಕಲೆ ಮತ್ತಿತರ ಕ್ರಿಯಾತ್ಮಕ ಉದ್ಯಮಗಳು ಈ ಸಂಬಂಧದ ಬೆಸುಗೆಯನ್ನು ಬಲಪಡಿಸಿವೆ. ಬ್ರಿಟನ್‌ನಲ್ಲಿರುವ ಭಾರತೀಯ ಸಮುದಾಯದವರು ಎರಡು ದೇಶಗಳ ಮಧ್ಯೆ ಜೀವಂತ ಸೇತುವೆಯಾಗಿದ್ದಾರೆ" ಎಂದು ಹೇಳಿದರು.

"ನಮ್ಮ ಸಂಬಂಧವನ್ನು ನಾವು ಸರಿಯಾಗಿ ಬಳಕೆ ಮಾಡಿರುವುದು ಸ್ವಲ್ಪ ಮಾತ್ರವೇ. ಕಂಚಿನ ಯುಗಕ್ಕಿಂತಲೂ ಮುಂಚೆಯೇ ಆರಂಭಗೊಂಡು (Pre-Bronze Age) ಈಗಲೂ ಜೀವಂತವಾಗಿರುವ ನಾಗರಿಕತೆ ನಮ್ಮದು ಮಾತ್ರವೇ. ನಮ್ಮ ಮಾರುಕಟ್ಟೆ, ವೈವಿಧ್ಯತೆ ಮತ್ತು ಸಂಪ್ರದಾಯಗಳಿಗೆ ಯಾವುದೂ ಸಾಟಿ ಇಲ್ಲ. ಭಾರತ ಮತ್ತು ಬ್ರಿಟನ್ ಒಟ್ಟುಸೇರಿ ನಡೆದರೆ ಇಡೀ ಜಗತ್ತಿನ ಮೇಲೆ ದಶಕಗಳ ಕಾಲ ಪ್ರಭಾವ ಬೀರಬಲ್ಲಂತಹ ಸಾಂಸ್ಕೃತಿಕ ಪರಿವರ್ತನೆ ತರಬಹುದು" ಎಂದು ಅಮಿಶ್ ತ್ರಿಪಾಠಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು:

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು:

* ರಿಷಿ ಸುಣಕ್, ಬ್ರಿಟನ್ ಸರಕಾರದ ಹಣಕಾಸು ಸಚಿವ
* ಡಾ. ಎಸ್ ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ
* ಸಾಜಿದ್ ಜಾವಿದ್, ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಪೋಷಣೆ ವಿಭಾಗದ ಕಾರ್ಯದರ್ಶಿ
* ಡಾ. ಮನಸುಖ್ ಮಾಂಡವೀಯ, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
* ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಖಾತೆಗಳ ಸಚಿವ
* ಭೂಪೇಂದ್ರ ಯಾದವ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಪರಿಸರ, ಅರಣ್ಯ, ಹವಾಮಾವ ಬದಲಾವಣೆ ಖಾತೆಗಳ ಸಚಿವ
* ಡಾ. ರಾಜೀವ್ ಚಂದ್ರಶೇಖರ್, ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಐಟಿ ರಾಜ್ಯ ಖಾತೆಗಳ ಸಚಿವ
* ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ
* ಅಲೋಕ್ ಶರ್ಮಾ, ಸಿಒಪಿ 26ನ ಅಧ್ಯಕ್ಷ
* ಲಾರ್ಡ್ ಜೆರಿ ಗ್ರಿಮ್‌ಸ್ಟೋನ್, ಬ್ರಿಟನ್‌ನ ಹೂಡಿಕೆ ಸಚಿವ
* ಆನ್-ಮೇರೀ ಟ್ರೆವೆಲಯಾನ್, ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ ಕಾರ್ಯದರ್ಶಿ, ಮತ್ತು ವ್ಯಾಪಾರ ಮಂಡಳಿ ಅಧ್ಯಕ್ಷೆ
* ಬಿಲ್ ವಿಂಟರ್ಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್
* ಆರಿಯಾನಾ ಹಫಿಂಗ್ಟನ್, ಥ್ರೈವ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಒ
* ಹರ್ಮೀನ್ ಮೆಹತಾ, ಬ್ರಿಟಿಷ್ ಟೆಲಿಕಾಂ ಕಂಪನಿಯ ಚೀಫ್ ಡಿಜಿಟಲ್ ಅಂಡ್ ಇನ್ನೋವೇಶನ್ ಆಫೀಸರ್.
* ಡಾ. ಶಶಿ ತರೂರ್, ಸಂಸದರು
* ಭವೀಶ್ ಅಗರ್ವಾಲ್, ಒಲಾದ ಸಹ-ಸಂಸ್ಥಾಪಕರು ಮತ್ತು ಸಿಇಒ
* ಅಮಿತ್ ಕಪುರ್, ಟಿಸಿಎಸ್‌ನ ಯುಕೆ, ಐರ್‌ಲೆಂಡ್ ವಿಭಾಗದ ಮುಖ್ಯಸ್ಥರು
* ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್ ಸ್ಥಾಪಕರು.

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಐಜಿಎಫ್ ಅಥವಾ ಇಂಡಿಯಾ ಗ್ಲೋಬಲ್ ಫೋರಂ ಎಂಬುದು ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಜಾಗತಿಕ ನಾಯಕರಿಗೆ ವಿಚಾರ ಹಂಚುವ ವೇದಿಕೆಯಾಗಿದೆ. ವಿವಿಧ ವಲಯಗಳಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ನೀತಿರೂಪಕರಿಗೆ ಆ ವಲಯ ಸಂಬಂಧಿತ ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸುವ ವೇದಿಕೆ ಇದಾಗಿದೆ. ಬಹಳ ಆಳವಾದ ವಿಶ್ಲೇಷಣೆ, ಸಂದರ್ಶನ, ಸಂವಾದಗಳು ಇಂಡಿಯಾ ಗ್ಲೋಬಲ್ ಫೋರಂನ ವಿಶೇಷತೆಗಳಾಗಿವೆ ಎಂದು ಫೋರಂನ ವೆಬ್‌ಸೈಟ್‌ನಲ್ಲಿ ಹೇಳಿಕೊಳ್ಳಲಾಗಿದೆ.

ಇಂಡಿಯಾ ಇನ್ಕ್ ಗ್ರೂಪ್ ಎಂಬ ಸಂಸ್ಥೆಯು ಇಂಡಿಯಾ ಗ್ಲೋಬಲ್ ಫೋರಂ ಅನ್ನು ಆಯೋಜಿಸುತ್ತದೆ. ಭಾರತಕ್ಕೆ ಸಂಬಂಧಿಸಿದ ಜಾಗತಿಕವಾಗಿ ಮಹತ್ವವಾಗಿರುವ ಆರ್ಥಿಕ ವ್ಯವಹಾರ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಹೂಡಿಕೆ, ವ್ಯಾಪಾರ ಮತ್ತು ನೀತಿ ವಿಚಾರಗಳ ಬಗ್ಗೆ ಇಂಡಿಯಾ ಇನ್ಕ್ ಗ್ರೂಪ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಲೇಖನಗಳನ್ನು ಪ್ರಕಟಿಸುತ್ತದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+