ಅಫ್ಘಾನಿಸ್ತಾನದ ಘಜ್ನಿ ಪ್ರದೇಶವನ್ನು ವಶಪಡಿಸಿಕೊಂಡ ತಾಲಿಬಾನ್
ಕಾಬೂಲ್, ಆಗಸ್ಟ್ 12: ಅಫ್ಘಾನಿಸ್ತಾನದ ಘಜ್ನಿ ಪ್ರದೇಶವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಘಜ್ನಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಿಂದ 150 ಕಿ.ಮೀ ದೂರದಲ್ಲಿದೆ.
ಪ್ರಮುಖ ಪ್ರದೇಶಗಳಾದ ಗವರ್ನರ್ ಕಚೇರಿ, ಪೊಲೀಸ್ ಹೆಡ್ ಕ್ವಾರ್ಟ್ರ್ಸ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯ ಮತ್ತಷ್ಟು ಹೆಚ್ಚಿದ್ದು, ಬಹುತೇಕ ರಾಜ್ಯ, ನಗರಗಳು ಉಗ್ರರ ತೆಕ್ಕೆಗೆ ಜಾರುವ ಆತಂಕ ಎದುರಾಗಿದೆ. 6 ದಿನದಲ್ಲಿ 8 ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಈಶಾನ್ಯದ ಬದಾಕ್ಷನ್ ಪ್ರಾಂತ್ಯದ ರಾಜಧಾನಿ ಫೈಜಾಬಾದ್ ಅನ್ನು ಬುಧವಾರ ಉಗ್ರರು ಆಕ್ರಮಿಸಿದ್ದಾರೆ.
ತಾಲಿಬಾನ್ ಉಗ್ರರ ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸುತ್ತಿದ್ದರೆ 90 ದಿನಗಳ ಒಳಗೆ ಆಫ್ಘನ್ ರಾಜಧಾನಿ ಕಾಬೂಲ್ ಸಹ ಉಗ್ರರ ಕೈವಶವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.
ತಾಲಿಬಾನ್ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ವೇಗವನ್ನು ಗಮನಿಸಿದರೆ ಮೂವತ್ತು ದಿನದೊಳಗೆ ಕಾಬೂಲ್ ಪ್ರದೇಶಕ್ಕೆ ತಾಲಿಬಾನ್ ಉಗ್ರರ ಸೈನ್ಯ ಮೆಲ್ಲಗೆ ನುಗ್ಗಲಿದೆ, 90 ದಿನದೊಳಗೆ ತಾಲಿಬಾನಿಗಳು ಕಾಬೂಲನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.
ಅದಾಗ್ಯೂ ಅಫ್ಘಾನಿಸ್ತಾನದ ಸೇನೆ ಪ್ರಬಲ ವಿರೋಧ ವ್ಯಕ್ತಪಡಿಸಿದರೆ ಇದನ್ನು ತಡೆಯಬಹುದು, ತಾಲಿಬಾನಿಗಳೇ ಪರಮ ಶಕ್ತಿ ಅಲ್ಲ ಎಂದು ಕೂಡ ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ.
ಮೇ ತಿಂಗಳಿನಿಂದ ಅಫ್ಘಾನಿಸ್ತಾನದಲ್ಲಿ ಸಂಘರ್ಷ ಹೆಚ್ಚಾಗಿದೆ. ಅಫ್ಘಾನಿಸ್ತಾನದ ಮೂರು ಪ್ರಾಂತೀಯ ರಾಜಧಾನಿಗಳಾದ ಕುಂದುಜ್, ಸರ್ ಇ ಪುಲ್ ಮತ್ತು ತಲುಕನ್ ನಗರಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ.
ಕಳೆದ ಎರಡು ದಶಕಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಬೆನ್ನಲ್ಲೇ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಮುಂದಾಗಿರುವ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳಲು ಆಫ್ಘನ್ ಸೇನಾಪಡೆಗಳ ಮೇಲೆ ಯುದ್ಧ ಸಾರಿದ್ದವು.
ಕಳೆದ ಕೆಲ ತಿಂಗಳುಗಳಲ್ಲಿ ದೇಶದಲ್ಲಿ ಸ್ಫೋಟ, ಹಿಂಸಾಚಾರ, ವಿದ್ಯಾಸಂಸ್ಥೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಿದ್ದವು. ಹಿಂಸಾಚಾರದ ಹಿಂದೆ ತಾಲಿಬಾನ್ ಕೈವಾಡ ಇದೆಯೆಂದು ಸರ್ಕಾರ ಆರೋಪಿಸಿತ್ತು.
ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವಿನ ಶಾಂತಿ ಮಾತುಕತೆ ಸಮಯದಲ್ಲಿ, ಅಮೆರಿಕ ಸೈನಿಕರು ದೇಶದಿಂದ ಕಾಲುಕಿತ್ತರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದರು. ಅದರಂತೆ ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತ್ತು.
ಈ ಹಿಂದೆ ಸಾವಿರಾರು ಆಫ್ಘನ್ ಸೇನಾಪಡೆಯ ಸೈನಿಕರು ತಾಲಿಬಾನ್ ಬಂಡುಕೋರರ ನಡುವಿನ ಕಾದಾಟದಲ್ಲಿ ಹಿಮ್ಮೆಟ್ಟಿ ಪಾಕ್ ಗಡಿ ಪ್ರದೇಶದೊಳಕ್ಕೆ ನುಗ್ಗಿ ಅಲ್ಲಿನ ಆಶ್ರಯ ಪಡೆದುಕೊಂಡಿತ್ತು ಎನ್ನುವುದು ಗಮನಾರ್ಹ. ಇತ್ತೀಚಿಗಷ್ಟೆ ಕಂದಹಾರ್ನಲ್ಲಿ ಆಫ್ಘನ್ ಭದ್ರತಾಪಡೆಗಳು ಮತ್ತು ತಾಲಿಬಾನ್ ನಡುವಿನ ಸಂಘರ್ಷದ ವರದಿಗಾರಿಕೆಗೆಂದು ತೆರಳಿದ್ದ ಭಾರತೀಯ ಮೂಲದ ಪತ್ರಕರ್ತ ದಾನಿಶ್ ಸಿದ್ದಿಕಿ ತಾಲಿಬಾನಿಗಳ ಗುಂಡಿಗೆ ಬಲಿಯಾಗಿದ್ದು ಎನ್ನುವುದು ಉಲ್ಲೇಖನೀಯ.
ಇದರಿಂದಾಗಿ ದೇಶದಲ್ಲಿ ಮತ್ತೆ ತಾಲಿಬಾನ್ ಆಡಳಿತ ಶುರುವಾಗಿ, ಜನಸಾಮಾನ್ಯರು ಅಪಾಯಕ್ಕೆ ಸಿಲುಕುವ ಆತಂಕವನ್ನು ಅಂತಾರಾಷ್ಟ್ರೀಯ ಸಮುದಾಯ ವ್ಯಕ್ತಪಡಿಸಿತ್ತು. ಅದೀಗ ನಿಜವಾಗುತ್ತಿದೆ ಎಂದು ರಾಜಕೀಯ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಶೇ.60 ಪ್ರತಿಶತ ದೇಶವನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಈ
ಮಧ್ಯೆ
ತಾಲಿಬಾನ್
ಮೂರು
ಪ್ರಮುಖ
ನಗರಗಳನ್ನು
ವಶಪಡಿಸಿಕೊಂಡಿರುವುದು
ತಾಲಿಬಾನ್
ಮೇಲುಗೈ
ಸಾಧಿಸಿರುವುದರ
ಪ್ರತೀಕ
ಎಂದು
ರಾಜಕೀಯ
ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.ಅಫ್ಘಾನಿಸ್ತಾನದ
ರಾಜಧಾನಿ
ಬಾಲ್ಖ್
ಪ್ರಾಂತ್ಯದ
ಸುತ್ತಮುತ್ತಲಿನ
ಪ್ರದೇಶಗಳಲ್ಲಿ
ನಡೆಯುತ್ತಿರುವ
ತಾಲಿಬಾನ್
ಹಿಂಸಾಚಾರವನ್ನು
ಗಮನದಲ್ಲಿಟ್ಟುಕೊಂಡು,
ಮಜರ್-ಇ-ಶರೀಫ್ನಲ್ಲಿರುವ
ತನ್ನ
ದೂತವಾಸದಿಂದ
ಭಾರತವು
ತನ್ನ
ಸಿಬ್ಬಂದಿಯನ್ನು
ಸ್ಥಳಾಂತರಿಸುತ್ತಿದೆ
ಎಂದು
ಬಲ್ಲ
ಮೂಲಗಳು
ತಿಳಿಸಿವೆ.
ಕಾನ್ಸುಲೇಟ್ನ ಭಾರತೀಯ ಮೂಲದ ಸಿಬ್ಬಂದಿ ಮತ್ತು ಮಜರ್-ಇ-ಶರೀಫ್ನಲ್ಲಿ ವಾಸಿಸುತ್ತಿರುವ ಹಲವಾರು ಭಾರತೀಯರನ್ನು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಭದ್ರತಾ ಸನ್ನಿವೇಶದಿಂದಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸಲಹೆ ನೀಡಿದೆ.