ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಕಣದಲ್ಲಿ ಮೂವರು
ಕೊಲಂಬೋ, ಜುಲೈ 20: ಬುಧವಾರ ನಡೆಯಲಿರುವ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂವರು ಮಾತ್ರ ಕಣದಲ್ಲಿದ್ದಾರೆ. ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಡಳಸ್ ಅಳಗಪೆರುಮ ಮತ್ತು ಅನುರ ಕುಮಾರ ಡಿಸ್ಸನಾಯಕೆ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ.
ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಏಳೆಂಟು ಜನರು ಸ್ಪರ್ಧಿಸುವ ನಿರೀಕ್ಷೆ ಇತ್ತು. ಅಂತಿಮವಾಗಿ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಸಜಿತ್ ಪ್ರೇಮದಾಸ ಮಂಗಳವಾರ ತಮ್ಮ ನಾಮಪತ್ರ ವಾಪಸ್ ಪಡೆದರು.
ಶ್ರೀಲಂಕಾ ಮತ್ತು ಪೆಟ್ರೋಲ್ ಕಥೆ- 20 ರೂ ಇಳಿದರೂ ಕಣ್ಣೀರು ತರಿಸುತ್ತೆ ಬೆಲೆ
ಸಂಸತ್ನಿಂದಲೇ ಹೊಸ ಅಧ್ಯಕ್ಷರ ಆಯ್ಕೆ ಆಗಲಿದೆ. ಶ್ರೀಲಂಕಾದ ಎಲ್ಲಾ ಸಂಸದರು ಸೇರಿ ಗುಪ್ತ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಚುನಾಯಿಸಲಿದ್ಧಾರೆ. ಯಾವ ಪಕ್ಷದವರು ಯಾವ ಕಟ್ಟುಪಾಡು ಇಲ್ಲದೇ ಯಾರಿಗೆ ಬೇಕಾದರೂ ಮತ ಹಾಕಲು ಸಾಧ್ಯ.
ಶ್ರೀಲಂಕಾ ಇತಿಹಾಸದಲ್ಲಿ ಈ ರೀತಿ ಸಂಸತ್ನಿಂದ ಅಧ್ಯಕ್ಷರ ಆಯ್ಕೆ ಆಗಲಿರುವುದು ಇದು ಎರಡನೇ ಬಾರಿ. 1993ರಲ್ಲಿ ಆಗಿನ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಹತ್ಯೆಯಾದ ಬಳಿಕ ಇದೇ ರೀತಿ ಸಂಸದರು ಸೇರಿ ಹೊಸ ಅಧ್ಯಕ್ಷರನ್ನು ಚುನಾಯಿಸಿದ್ದರು. ಆಗ ಡಿ. ಬಿ. ವಿಜೇತುಂಗ ಅವರು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕುತೂಹಲವೆಂದರೆ 1993ರಲ್ಲಿ ಹತ್ಯೆಯಾಗಿದ್ದ ರಣಸಿಂಘೆ ಪ್ರೇಮದಾಸ ಅವರ ಮಗ ಸಜಿತ್ ಪ್ರೇಮದಾಸ ಮಂಗಳವಾರ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದು ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾರೆ.
|
ಡಳಸ್ಗೆ ಪ್ರೇಮದಾಸ ಬೆಂಬಲ
ಸಾಮಗಿ ಜನ ಬಲವೇಗಯ ಪಕ್ಷದ ನಾಯಕ ಸಜಿತ್ ಪ್ರೇಮದಾಸ ತಾನು ನಾಮಪತ್ರ ವಾಪಸ್ ಪಡೆಯಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಅಧ್ಯಕ್ಷೀಯ ಕಣದಲ್ಲಿರುವ ಡಳಸ್ ಅಳಗಪೆರುಮ ಅವರಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ.
"ನಾನು ಪ್ರೀತಿಸುವ ನನ್ನ ದೇಶ ಮತ್ತು ಜನರ ಒಳಿತಿಆಗಿ ನಾನು ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ನನ್ನ ಪಕ್ಷ ಮತ್ತು ನಮ್ಮ ಮಿತ್ರ ಪಕ್ಷಗಳು ಸೇರಿ ಡಳಸ್ ಅಳಗಪೆರುಮ ಗೆಲುವಿಗಾಗಿ ಶ್ರಮಿಸುತ್ತೇವೆ" ಎಂದು ಸಜಿತ್ ಪ್ರೇಮದಾಸ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ
|
ಭಾರತದ ನೆರವಿಗೆ ಯಾಚನೆ
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೇ ಗೆಲುವು ಸಾಧಿಸಿದರೂ ಭಾರತದ ಸಹಾಯ ಮುಂದುವರಿಯಲಿ ಎಂದು ಸಜಿತ್ ಪ್ರೇಮದಾಸ ಇದೇ ವೇಳೆ ಮನವಿ ಮಾಡಿದ್ದಾರೆ.
"ಯಾರೇ ಶ್ರೀಲಂಕಾ ಅಧ್ಯಕ್ಷರಾದರೂ ಲಂಕಾ ಮಾತೆ ಮತ್ತವಳ ಜನರನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ಸಹಾಯ ಮಾಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಎಲ್ಲಾ ಭಾರತೀಯರಿಗೂ ಮನವಿ ಮಾಡುತ್ತೇನೆ" ಎಂದು ಮಂಗಳವಾರ ಸಂಜೆ ಪ್ರೇಮದಾಸ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಎಸ್ಎಲ್ಪಿಪಿ ಪಕ್ಷದೊಳಗೆ ಗೊಂದಲ
ಎಸ್ಎಲ್ಪಿಪಿ ಪಕ್ಷದ ಅನೇಕ ಸದಸ್ಯರು ಈಗ ರಾಜಪಕ್ಸೆ ಪ್ರಭಾವಳಿಯಿಂದ ದೂರ ಉಳಿಯಲು ಯತ್ನಿಸುತ್ತಿದ್ದಾರೆ. ಸಂಸತ್ನಲ್ಲೂ ಅವರು ತಮ್ಮ ಪಕ್ಷಕ್ಕೆ ನಿಗದಿ ಮಾಡಿದ ಸ್ಥಳದಿಂದ ದೂರವೇ ಕೂರುತ್ತಿದ್ದಾರೆ.
ಸಂಸತ್ನಲ್ಲಿ ಎಸ್ಎಲ್ಪಿಪಿ ಅತಿದೊಡ್ಡ ಪಕ್ಷವಾಗಿದೆ. 225 ಸಂಸದರ ಪೈಕಿ ಈ ಪಕ್ಷದವರ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಆದರೆ, ರಾನಿಲ್ ವಿಕ್ರಮಸಿಂಘೆಗೆ ಬೆಂಬಲ ಕೊಡಬೇಕು ಎಂದು ಒಂದು ವರ್ಗ ಬಯಸಿದರೆ, ಮತ್ತೊಂದು ಗುಂಪು ಡಳಸ್ ಅಳಗಪೆರುಮ ಪರ ಒಲವು ಹೊಂದಿದೆ ಎಂದು ತಿಳಿದುಬಂದಿದೆ.
ರಾನಿಲ್ಗೆ ರಾಜಪಕ್ಸೆ ಬೆಂಬಲ
ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಆ ಸ್ಥಾನ ತುಂಬಿದ್ದು ರಾನಿಲ್ ವಿಕ್ರಮಸಿಂಘೆಯೇ. ರಾಜಪಕ್ಸೆ ಕುಟುಂಬ ಮತ್ತು ಅವರ ಎಸ್ಎಲ್ಪಿಪಿ ಪಕ್ಷದ ಬೆಂಬಲ ರಾನಿಲ್ ಅವರಿಗೆ ಇದೆ ಎಂದು ಹೇಳಲಾಗುತ್ತದೆ. ಏನೇ ಆದರೂ ರಾನಿಲ್ ವಿಕ್ರಮಸಿಂಘೆಗೆ ಬೆಂಬಲ ನೀಡುವಂತೆ ರಾಜಪಕ್ಷೆ ಸಹೋದರರು ಮತ್ತು ಕುಟುಂಬದವರು ಪಕ್ಷದ ಸಂಸದರಿಗೆ ಅಪ್ಪಣೆ ಮಾಡಿರುವುದು ತಿಳಿದುಬಂದಿದೆ.
ಆದರೆ, ರಾಜಪಕ್ಸೆ ನೆರಳಿನಲ್ಲಿ ಗುರುತಿಸಿಕೊಂಡಿರುವುದು ರಾನಿಲ್ ವಿಕ್ರಮಸಿಂಘೆಗೆ ಹಿನ್ನಡೆಯಾಗಬಹುದು. ರಾನಿಲ್ರನ್ನು ರಾಜಪಕ್ಸೆ ರಿಮೋಟ್ ಕಂಟ್ರೋಲ್ ರೀತಿ ಬಳಸಬಹುದು ಎಂಬ ಭಾವನೆ ಬಂದರೆ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ಎಸ್ಎಲ್ಪಿಪಿ ಸಂಸದರಲ್ಲಿ ಅನೇಕರು ರಾನಿಲ್ಗೆ ಮತ ನೀಡದೇ ಇರುವ ಸಾಧ್ಯತೆ ಇದೆ.
ಡಳಸ್ ಪ್ರಬಲ ಸ್ಪರ್ಧಿ
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಡಳಸ್ ಅಳಗಪೆರುಮ ಅವರು ಅಧ್ಯಕ್ಷ ಸ್ಥಾನದ ಅತ್ಯಂತ ಪ್ರಬಲ ಸ್ಪರ್ಧಿಯಂತೆ ತೋರುತ್ತದೆ. ಶ್ರೀಲಂಕಾ ಪೊದುಜನ ಪೇರಮುನ ಪಕ್ಷದ ಹಲವು ಸಂಸದರ ಬೆಂಬಲ ಡಳಸ್ಗೆ ಇದೆ. ಹಾಗೆಯೇ, ಪ್ರಮುಖ ವಿಪಕ್ಷ ನಾಯಕ ಸಜಿತ್ ಪ್ರೇಮದಾಸ ಕೂಡ ಡಳಸ್ಗೆ ಬೆಂಬಲ ನೀಡಿದ್ಧಾರೆ. ವಿರೋಧ ಪಕ್ಷಗಳಿಂದ 50ಕ್ಕೂ ಹೆಚ್ಚು ಸಂಸದರು ಡಳಸ್ಗೆ ಬೆಂಬಲ ನೀಡಿದ್ದಾರೆ.
ಡಳಸ್ ಕೂಡ ಹಿಂದೆ ರಾಜಪಕ್ಸೆಗೆ ನಿಷ್ಠರಾಗಿದ್ದವರು. ಆದರೆ, ಅವರ ಪ್ರಭಾವಳಿಯಿಂದ ಈಗ ಹೊರಗೆ ಬಂದಿದ್ದಾರೆ.
ಡಿಸ್ಸನಾಯಕೆಗೆಷ್ಟು ಅವಕಾಶ?
ಅನುರ ಕುಮಾರ ಡಿಸ್ಸನಾಯಕೆ ಶ್ರೀಲಂಕಾದ ಎಡಪಂಥೀಯ ಮುಖಂಡ. ಇವರ ಎಸ್ವಿಪಿ ಪಕ್ಷದ ಸಂಸದರು ಇರುವುದು ಮೂವರು ಮಾತ್ರ. ಆದರೆ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯದವರ ಬೆಂಬಲ ಡಿಸ್ಸನಾಯಕೆಗೆ ಇದೆ. ಆದರೂ ಕೂಡ ಇವರಿಗೆ ಗೆಲುವಿನ ಅವಕಾಶ ಕಡಿಮೆಯೇ.
ಈ ಹಿನ್ನೆಲೆಯಲ್ಲಿ ಶ್ರಿಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂವರು ಕಣದಲ್ಲಿದ್ದಾರಾದರೂ ರಾನಿಲ್ ವಿಕ್ರಮಸಿಂಘೆ ಮತ್ತು ಡಳಸ್ ಮಧ್ಯೆ ನೇರ ಪೈಪೋಟಿ ಇದೆ.
(ಒನ್ಇಂಡಿಯಾ ಸುದ್ದಿ)
Recommended Video