ಥೈಲ್ಯಾಂಡ್ ಗುಹೆಯೊಳಗೆ ಸಿಲುಕಿರುವ ಕೋಚ್ ಬರೆದ ಮನಮಿಡಿಯುವ ಪತ್ರ
ಮೇಸಾಯಿ (ಥೈಲ್ಯಾಂಡ್), ಜುಲೈ 07 : "ನನ್ನ ಜೊತೆ ಎಲ್ಲ ಮಕ್ಕಳು ಈಗಲೂ ಚೆನ್ನಾಗಿದ್ದಾರೆ. ನಾನು ಪ್ರತಿ ಮಗುವಿನ ರಕ್ಷಣೆಯ ಭಾರ ಹೊರುತ್ತೇನೆಂದು ಪ್ರಮಾಣ ಮಾಡುತ್ತೇನೆ. ನನಗೆ ನೈತಿಕ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಪೋಷಕರೆ ದಯವಿಟ್ಟು ನನ್ನನ್ನು ಕ್ಷಮಿಸಿ."
ಹೀಗಿರುವ ಒಕ್ಕಣೆಯೊಂದಿಗೆ ಹೃದಯ ಒದ್ದೆಒದ್ದೆಯಾಗುವಂಥ ಪತ್ರವನ್ನು ಬರೆದಿದ್ದಾರೆ, ಥೈಲ್ಯಾಂಡ್ ನ ಗುಹೆಯೊಂದರಲ್ಲಿ ಕಳೆದೆರಡು ವಾರಗಳಿಂದ ಸಿಲುಕಿರುವ 'ವೈಲ್ಡ್ ಬೋರ್' ಯುವ ಫುಟ್ಬಾಲ್ ತಂಡದ ಆಟಗಾರರ ಕೋಚ್ ಎಕ್ಕಾಪೋಲ್ ಚಂಟವಾಂಗ್. ಮಕ್ಕಳು ಕೂಡ ಆ ಪತ್ರದಲ್ಲಿ ಬರೆದಿದ್ದಾರೆ. ಮಕ್ಕಳು 11ರಿಂದ 16 ವರ್ಷದವರಾಗಿದ್ದು, ಕೋಚ್ ವಯಸ್ಸು 25.
ತಮ್ಮನ್ನು ಪಾರು ಮಾಡಲು ಬಂದಿದ್ದ ರಕ್ಷಣಾ ತಂಡದ ಸದಸ್ಯರಿಗೆ ತಾವು ಬರೆದಿರುವ ಪತ್ರವನ್ನು ನೀಡಿದ್ದಾರೆ. ಅವರು ಮತ್ತು ಮಕ್ಕಳು ಕಗ್ಗತ್ತಲಲ್ಲಿ ರಕ್ಷಣಾ ತಂಡದಿಂದ ಪತ್ತೆಯಾಗುವ ಮುನ್ನ ತಮ್ಮ ಬಳಿಯಿದ್ದ ಆಹಾರವನ್ನು ಮಕ್ಕಳಿಗೆ ನೀಡಿದ್ದಕ್ಕಾಗಿ ತರಬೇತುದಾರನನ್ನು ಮೀಡಿಯಾದವರು ಹಾಡಿ ಹೊಗಳಿದ್ದಾರೆ.
ಕೆಲವರು ತರಬೇತುದಾರನ ಹುಂಬತನವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಮಳೆಗಾಲದ ಸಮಯದಲ್ಲಿ ಅಂಥ ದುರ್ಗಮ ಗುಹೆಯೊಳಗೆ ಆ ಮಕ್ಕಳನ್ನು ಏಕೆ ಕರೆದುಕೊಂಡು ಹೋಗಬೇಕಾಗಿತ್ತು ಎಂದು ಆತನನ್ನು ಟೀಕಿಸುತ್ತಿದ್ದಾರೆ. ಆದರೆ, ಇದು ಟೀಕಿಸುತ್ತಾ ಕೂಡುವ ಸಮಯವಲ್ಲ. ಮಕ್ಕಳು ಸುರಕ್ಷಿತವಾಗಿ ಹೊರತರುವ ಕಾರ್ಯ ಆಗಬೇಕಾಗಿದೆ.
ಈ ಪತ್ರವನ್ನು ಥಾಯಿ ನೇವಿ ಶನಿವಾರ ಬಿಡುಗಡೆ ಮಾಡಿದೆ. ಮಣ್ಣಿನಿಂದ ಆವೃತವಾಗಿರುವ ಗುಹೆಯ ಒಳಗೆ ಮಕ್ಕಳು ಸಿಲುಕಿದ್ದು, ಅವರನ್ನು ರಕ್ಷಿಸುವುದು ಹೇಗೆ ಎಂದು ಚಿಂತಿಸಲಾಗುತ್ತಿದೆ. ಅಲ್ಲಿ ಭಾರೀ ಮಳೆ ಸುರಿಯುವ ಸಂಭವವಿರುವುದರಿಂದ ಅವರನ್ನು ಹೊರತರುವುದು ಅಷ್ಟು ಸುಲಭವಲ್ಲ.
ಮಕ್ಕಳ ಹೊರಬರುವಿಕೆಗಾಗಿ ಇಡೀ ಜಗತ್ತು ಉಸಿರುಬಿಗಿಹಿಡಿದು ಕಾದುಕುಳಿತಿದೆ. ಅವರಲ್ಲಿ ಪ್ರೊಟೀನ್ ಯುಕ್ತ ಆಹಾರವಿದ್ದಿದ್ದರಿಂದ ಮತ್ತು ಆಮ್ಲಜನಕವೂ ದಕ್ಕಿದ್ದರಿಂದ ಮಕ್ಕಳು ತಕ್ಕಮಟ್ಟಿಗೆ ಆರೋಗ್ಯವಾಗಿಯೇ ಇದ್ದಾರೆ. ಆದರೆ, ಅವರನ್ನು ರಕ್ಷಿಸಲು ಹೋಗಿದ್ದ ಥಾಯಿ ಡೈವರ್ ಒಬ್ಬರು ಹುತಾತ್ಮರಾಗಿದ್ದಾರೆ.

ವಾಪಸ್ ಬಂದ ಮೇಲೆ ನಿಮಗೆ ಸಹಾಯ ಮಾಡುತ್ತೇನೆ
ಆ ಪತ್ರಕ್ಕೆ ಮಕ್ಕಳೂ ಸಹಿ ಹಾಕಿದ್ದು, 'ಬಿವ್' ಎಂಬ ಅಡ್ಡಹೆಸರಿರುವ ಬಾಲಕನೊಬ್ಬ, "ಅಪ್ಪ, ಅಮ್ಮ ನನ್ನ ಬಗ್ಗೆ ಚಿಂತೆ ಮಾಡಬೇಡಿ. ಕಳೆದೆರಡು ವಾರಗಳಿಂದ ನಾನು ನಿಮ್ಮಿಂದ ದೂರವಿದ್ದೇನೆ. ವಾಪಸ್ ಬಂದು ಸಾಮಾನು ಮಾರಾಟ ಮಾಡಲು ನಾನು ಸಹಾಯ ಮಾಡುತ್ತೇನೆ" ಎಂದು ಥಾಯಿ ಭಾಷೆಯಲ್ಲಿ ಬರೆದಿದ್ದಾನೆ. ಆತನ ತಂದೆ ಕಿರಾಣಿ ಅಂಗಡಿ ಇಟ್ಟಿದ್ದಾರೆ. ಆತನ ಅಕ್ಷರಗಳನ್ನು ನೋಡಿ ಗುಹೆಯ ಹೊರಗೆ ಕಳೆದ ಹದಿನೈದು ದಿನಗಳಿಂದ ಕಾದು ಕುಳಿತಿರುವ ಪೋಷಕರ ಕಣ್ಣಲ್ಲಿ ಅಶ್ರುಧಾರೆ ಬರದೆ ಇದ್ದೀತೆ?

ನನ್ನ ಪುಟ್ಟ ತಮ್ಮನಿಗೆ ನನ್ನ ಪ್ರೀತಿ
'ಡೋಮ್' ಎಂಬ ಹೆಸರಿನ ಮತ್ತೊಬ್ಬ "ನಾನು ಹುಷಾರಿಗಿದ್ದೇನೆ. ಆದರೆ, ಇಲ್ಲಿ ತುಂಬಾ ಚಳಿಯಿದೆ" ಎಂದಿದ್ದರೆ, 'ನಿಕ್' ಅಡ್ಡಹೆಸರಿರುವ 15 ವರ್ಷದ ಫಿಫಟ್ ಫೋಟಿ ಎಂಬಾತ "ಅಪ್ಪ, ಅಮ್ಮ ಮತ್ತು ನನ್ನ ಪುಟ್ಟ ತಮ್ಮನಿಗೆ ನನ್ನ ಪ್ರೀತಿ" ಎಂದು ಬರೆದಿರುವ ಕಾಗದವನ್ನು ಪೋಷಕರು ಎದೆಗವಚಿಕೊಂಡು ಕಾದು ಕುಳಿತಿದ್ದಾರೆ. ಈ ಪತ್ರವನ್ನು ಥಾಯಿ ನೇವಿ ಸೀಲ್ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

ಒಂದು ವೇಳೆ ಹೊರ ಬಂದರೆ...
"ಅಪ್ಪ, ಅಮ್ಮ ಮತ್ತು ನನ್ನ ಸಹೋದರಿ, ನಾನು ನಿಮ್ಮನ್ನೆಲ್ಲ ತುಂಬಾ ಪ್ರೀತಿಸುತ್ತೇನೆ. ನನ್ನ ಬಗ್ಗೆ ಚಿಂತಿಸಬೇಡಿ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಒಂದು ವೇಳೆ ಹೊರಬಂದರೆ ನನಗೆ ಗ್ರಿಲ್ಡ್ ಪೋರ್ಕ್ (ಹಂದಿ ಮಾಂಸ) ಮತ್ತು ತರಕಾರಿ ನೀಡುವಿರಾ?" ಎಂದು ಗುಹೆಯಲ್ಲಿಯೇ 16ನೇ ವಯಸ್ಸಿಗೆ ಕಾಲಿಟ್ಟ 'ನೈಟ್' ಎಂಬ ನಿಕ್ ನೇಮ್ ಇರುವ ಫೀರಾಫಟ್ ಬರೆದಿರುವ ಅಕ್ಷರಗಳನ್ನು ಓದಿದರೆ ಎಂಥವರಿಗೂ ಕಣ್ಣಲ್ಲಿ ನೀರು ಜಿನುಗುತ್ತದೆ.

ಎಷ್ಟು ದಿನ ಬೇಕಾದರೂ ಕಾದಿರುತ್ತೇನೆ
"ನನಗೆ ನನ್ನ ಮಗನ ಪತ್ರ, ಅವನ ಮುದ್ದಾದ ಕೈಬರಹ ಓದಿ ತುಂಬಾ ಸಂತೋಷವಾಗಿದೆ. ನಾನು ಅಳುವುದೊಂದು ಬಾಕಿಯಿದೆ. ನಾನು ಆತನ ಬರುವಿಕೆಗಾಗಿ ಎಷ್ಟು ದಿನ ಬೇಕಾದರೂ ಇಲ್ಲಿ ಕಾದಿರುತ್ತೇನೆ" ಎಂದು ಗುಹೆಯ ಹೊರಗಡೆಯೇ ಕಾಯುತ್ತ ಕುಳಿತಿರುವ ನಿಕ್ ನ ತಾಯಿ ಕಂಬನಿಮಿಡಿದಿದ್ದಾರೆ. ಈ ಮಕ್ಕಳೆಲ್ಲ ಜೂನ್ 23ರಂದೇ ಗುಹೆಯೊಳಗೆ ಹೋಗಿದ್ದಾರೆ. ಆದರೆ, ಪ್ರವಾಹ ಗುಹೆಯೊಳಗೆ ನುಗ್ಗಿದ್ದರಿಂದ ಅಲ್ಲಿಯೇ ಸಿಲುಕಿದ್ದಾರೆ. ಜೂನ್ 30ರಂದು ಅವರನ್ನು ಪತ್ತೆ ಮಾಡಲಾಯಿತು.

ಹೆಚ್ಚೂಕಡಿಮೆಯಾದರು ಮಣ್ಣು ಕುಸಿಯುವ ಅಪಾಯ
ಗುಹೆಯಲ್ಲಿನ ನೀರಿನ ಪ್ರಮಾಣವನ್ನು ಹೈಪವರ್ ಪಂಪ್ ಬಳಸಿ ಕಡಿಮೆ ಮಾಡಲು ರಕ್ಷಣಾ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಒಂದು ವೇಳೆ ಭಾರೀ ಮಳೆಯಾಗಿ ಮತ್ತೆ ಗುಹೆಯೊಳಗೆ ನೀರು ಹೊಕ್ಕರೆ, ನೀರಿನಲ್ಲಿ ಡೈವ್ ಹೊಡೆದು ಈಜಿ ಸುರಕ್ಷಿತವಾಗಿ ಹೊರ ಬರುವಂತೆ ಮಕ್ಕಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಹೆಚ್ಚೂಕಮ್ಮಿಯಾದರೆ ಗುಹೆಯೊಳಗೆ ಮತ್ತೆ ಮಣ್ಣು ಕುಸಿಯುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications