'ತಾಲಿಬಾನ್ ಹೇಳಿಕೆ ಸುಳ್ಳು, ಪಂಜ್ಶೀರ್ನಲ್ಲಿ ಸಂಘರ್ಷ ಮುಂದುವರಿದಿದೆ' ಎಂದ ವಿರೋಧಿ ಪಡೆ
ಕಾಬೂಲ್, ಸೆಪ್ಟೆಂಬರ್ 06: ಪಂಜ್ಶೀರ್ ಕಣಿವೆಯನ್ನು ಸಂಪೂರ್ಣವಾಗಿ ನಾವು ನಮ್ಮ ವಶಕ್ಕೆ ಪಡೆದುಕೊಂಡು ಆಗಿದೆ ಎಂದು ತಾಲಿಬಾನ್ ಹೇಳಿಕೊಂಡ ಬೆನ್ನಲ್ಲೇ ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ (ಎನ್ಆರ್ಎಫ್) "ತಾಲಿಬಾನ್ನ ಈ ಹೇಳಿಕೆ ಸುಳ್ಳು, ತಾಲಿಬಾನ್ ವಿರುದ್ದದ ಹೋರಾಟ ಮುಂದುವರಿಯುತ್ತದೆ," ಎಂದು ಹೇಳಿಕೊಂಡಿದೆ.
ನಿನ್ನೆಯಷ್ಟೇ ತಾಲಿಬಾನ್ ಒಟ್ಟು ನಾಲ್ಕು ಜಿಲ್ಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ಈಗ ಒಟ್ಟು ಏಳು ಜಿಲ್ಲೆಗಳನ್ನು ಕೂಡಾ ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿತ್ತು. ಆದರೆ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ನೀಡಿರಲಿಲ್ಲ.
ಆದರೆ ಈ ಬಗ್ಗೆ ಈಗ ಸ್ಪಷ್ಟನೆ ನೀಡಿರುವ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ, ತಾಲಿಬಾನ್ನ ಈ ವಾದ ಸುಳ್ಳು, ಅಫ್ಘಾನಿಸ್ತಾನದ ಪಂಜ್ಶೀರ್ ಕಣಿವೆಯನ್ನು ತಾಲಿಬಾನ್ ಇನ್ನೂ ಕೂಡಾ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ತಾಲಿಬಾನ್ ವಿರುದ್ದದ ಈ ಹೋರಾಟ ಮುಂದುವರಿಯಲಿದೆ," ಎಂದು ಹೇಳಿದೆ.

"ತಾಲಿಬಾನ್ ವಿರುದ್ದದ ಈ ಕದನವು ಮುಂದುವರಿಯುತ್ತದೆ. ಈ ಪಂಜ್ಶೀರ್ ಕಣಿವೆಯನ್ನು ನಾವು ಇನ್ನೂ ಕಳೆದುಕೊಂಡಿಲ್ಲ," ಎಂದಿದೆ. "ನಾವು ಈ ಕಣಿವೆ ಪ್ರದೇಶದುದ್ದಕ್ಕೂ ಸಮರ್ಥವಾದ ನಮ್ಮ ಸೇನೆಯನ್ನು ನಿಯೋಜಿಸಿದ್ದೇವೆ. ತಾಲಿಬಾನ್ ಹಾಗೂ ಅದರ ಜೊತೆ ಇರುವ ಸಂಘಟನೆಗಳ ವಿರುದ್ದದ ಘರ್ಷಣೆಯು ಮುಂದುವರಿಯುತ್ತದೆ," ಎಂದಿದೆ.
"ತಾಲಿಬಾನ್ ವಿರುದ್ದದ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ನಾವು ಅಫ್ಘಾನಿಸ್ತಾನದ ಜನರಿಗೆ ಭರವಸೆ ನೀಡುತ್ತೇವೆ," ಎಂದು ತಿಳಿಸಿದೆ. "ನಮಗೆ ನ್ಯಾಯ ಹಾಗೂ ಸ್ವಾತಂತ್ಯ್ರ ದೊರೆಯುವವರೆಗೂ ತಾಲಿಬಾನ್ ಹಾಗೂ ಅದರ ಮಿತ್ರ ಸಂಘಟನೆಗಳ ವಿರುದ್ದದ ನಮ್ಮ ಹೋರಾಟ ಮುಂದುವರಿಯುತ್ತದೆ," ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಹೇಳಿದೆ.
ಇನ್ನು ಇದಕ್ಕೂ ಮುನ್ನ ತಾಲಿಬಾನ್ ನಾವು ಸಂಪೂರ್ಣವಾಗಿ ಪಂಜ್ಶೀರ್ ಕಣಿವೆಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿಕೊಂಡಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ತಾಲಿಬಾನ್ ಮುಖ್ಯ ವಕ್ತಾರ ಜಬೀಯುಲ್ಲ ಮುಜಾಹಿದ್, "ಅಫ್ಘಾನಿಸ್ತಾನದಲ್ಲಿ ಬಾಕಿ ಉಳಿದಿದ್ದ ಒಂದು ಪ್ರದೇಶವನ್ನೂ ಕೂಡಾ ನಾವು ನಮ್ಮ ವಶಕ್ಕೆ ಪಡೆದುಕೊಂಡಿದ್ದೇವೆ. ಈ ವಿಜಯದೊಂದಿಗೆ ನಮ್ಮ ದೇಶವನ್ನು ನಾವು ಸಂಪೂರ್ಣವಾಗಿ ನಮ್ಮ ತೆಕ್ಕೆಗೆ ಪಡೆದುಕೊಂಡಿದ್ದೇವೆ," ಎಂದಿದ್ದರು.
ಈ ನಡುವೆ ಈಗಾಗಲೇ ಎನ್ ಆರ್ ಎಫ್ನ ವಕ್ತಾರ ಫಾಹಿಮ್ ದಸ್ತಿ, ಗುಲ್ ಹೈದರ್ ಖಾನ್, ಮುನೀಬ್ ಅಮೀರಿ, ವಾವೂದ್ ಸೇರಿದಂತೆ ಹಲವಾರು ವಕ್ತಾರರನ್ನು ತಾಲಿಬಾನ್ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಇನ್ನು ಭಾನುವಾರ ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಪ್ರಂಟ್ ಆಫ್ ಅಫ್ಘಾನಿಸ್ತಾನ (ಎನ್.ಆರ್.ಎಫ್) ನಡುವಿನ ನಡೆದ ಭಾರೀ ಯುದ್ದದಲ್ಲಿ ಸುಮಾರು 600 ಮಂದಿ ತಾಲಿಬಾನಿಗಳನ್ನು ಹತ್ಯೆಗೈಯಲಾಗಿದೆ ಎಂದು ಎನ್ ಆರ್ ಎಫ್ ಹೇಳಿಕೊಂಡಿದೆ. ಆದರೆ ತಾಲಿಬಾನ್ ಮಾತ್ರ ಈ ಹೇಳಿಕೆಯನ್ನು ಅಲ್ಲಗಳೆದಿತ್ತು.
ಅಫ್ಘಾನಿಸ್ತಾನದ ಪಂಜ್ಶೀರ್ ಕಣಿವೆಯಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡರೆ, ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಕೂಡಾ ಇದೇ ಹೇಳಿಕೆಯನ್ನು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಎನ್ ಆರ್ ಎಫ್ ವಕ್ತಾರ ಫಾಹಿಮ್ ದಸ್ತಿ, "ಪಂಜ್ಶೀರ್ನ ವಿವಿಧ ಜಿಲ್ಲೆಗಳಲ್ಲಿ ಸುಮಾರು 600 ಕ್ಕೂ ಅಧಿಕ ಮಂದಿ ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದರು. ಆದರೆ ಈ ಬೆನ್ನಲ್ಲೇ ಎನ್ ಆರ್ ಎಫ್ನ ವಕ್ತಾರ ಫಾಹಿಮ್ ದಸ್ತಿ, ಗುಲ್ ಹೈದರ್ ಖಾನ್, ಮುನೀಬ್ ಅಮೀರಿ, ವಾವೂದ್ ಸೇರಿದಂತೆ ಹಲವಾರು ವಕ್ತಾರರನ್ನು ತಾಲಿಬಾನ್ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications