ಗಡಿಯಲ್ಲಿ ಚೀನಾ ಗಾಂಚಾಲಿ: ಶ್ರೀನಗರದ ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್!
ನವದೆಹಲಿ, ಆಗಸ್ಟ್.31: ಭಾರತ-ಚೀನಾ ಪೂರ್ವ ಗಡಿ ಪ್ರದೇಶ ಲಡಾಖ್ ನಲ್ಲಿ ಪ್ರಚೋದನಾತ್ಮಕ ಸೇನಾ ಚಟುವಟಿಕೆ ಬೆನ್ನಲ್ಲೇ ಶ್ರೀನಗರ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
Recommended Video
ಭದ್ರತಾ ದೃಷ್ಟಿಯಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಶ್ರೀನಗರ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ರಸ್ತೆಯಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಸಿಬ್ಬಂದಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಲಡಾಖ್ ಗಡಿಯಲ್ಲಿ ಭಾರತವನ್ನು ಕೆರಳಿಸಿದ ಚೀನಾ ಸೇನೆ
ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿರುವುದು ಗೊತ್ತಾಗಿದೆ. ಕಳೆದ ಜೂನ್.15ರಿಂದ ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನಾಪಡೆಗಳು ಅಲರ್ಟ್ ಆಗಿವೆ.
ಚೀನಾ ಬಗ್ಗೆ ಭಾರತದ ಕರ್ನಲ್ ಆನಂದ್ ನೀಡಿದ ಮಾಹಿತಿ
ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ಪೂರ್ವಭಾವಿಯಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.
ಶಾಂತಿ ಮಾತುಕತೆ ಬಗ್ಗೆ ಉಲ್ಲೇಖಿಸಿದ ಕರ್ನಲ್
ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಸೃಷ್ಟಿಯಾಗಿರುವ ಸಂದಿಗ್ಧ ಪರಿಸ್ಥಿತಿ ನಿವಾರಣೆಗೆ ಶಾಂತಿ ಮಾತುಕತೆ ನಡೆಸಲಾಗುತ್ತಿದೆ. ಶಾಂತಿ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಭಾರತವು ಬದ್ಧವಾಗಿದೆ. ಇದರ ಜೊತೆಗೆ ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳುವುದಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಲಾಗುತ್ತದೆ. ಚುಶುಲ್ ಪ್ರದೇಶದಲ್ಲಿ ಬ್ರಿಗೇಟ್ ಕಮಾಂಡರ್ ಹಂತದಲ್ಲಿ ಶಾಂತಿ ಮಾತುಕತೆ ನಡೆಸಲಾಗುತ್ತಿದೆ ಎಂದು ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.
ಭಾರತೀಯ ಸೇನೆ ಅನುಕೂಲಕ್ಕಾಗಿ ಗೌಪ್ಯ ಮಾರ್ಗ
ಈಗಾಗಲೇ ಲಡಾಖ್ ನಲ್ಲಿ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಹೊಸ ರಸ್ತೆ ಮಾರ್ಗ ನಿರ್ಮಾಣಕ್ಕೆ ಭಾರತವು ಮುಂದಾಗಿದೆ. ಮನಾಲಿಯಿಂದ ಲೇಹ್ ವರೆಗೂ ನಿರ್ಮಾಣವಾಗಲಿರುವ ಈ ರಸ್ತೆ ಮಾರ್ಗವು ಕೇಂದ್ರಾಡಳಿತ ಪ್ರದೇಶದ ಅತಿ ಎತ್ತರದ ಗುಡ್ಡಗಾಡು ಪ್ರದೇಶದ ಮಾರ್ಗ ಎನಿಸಲಿದೆ. ವ್ಯೂಹಾತ್ಮಕವಾಗಿ ಮುಖ್ಯವಾಗಿರುವ ದೌಲತ್ ಬೇಗ್ ಓಲ್ದಿ ಮತ್ತು ಇತರ ಭಾಗಗಳಿಗೆ ಪರ್ಯಾಯ ಸಂಪರ್ಕ ಕಲ್ಪಿಸಲು ಮೂರು ವರ್ಷಗಳಿಂದ ಭಾರತವು ಕೆಲಸ ಮಾಡುತ್ತಿದೆ. ಖರ್ದುಂಗ್ ಲಾ ಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಶುರುವಾಗಿದೆ.
ಮನಾಲಿಯಿಂದ ಲೇಹ್ ವರೆಗೂ ಗೌಪ್ಯ ರಸ್ತೆ
ನಿಮು-ಪದಂ-ಡರ್ಚಾ ಮಾರ್ಗದ ಮೂಲಕ ಮನಾಲಿಯಿಂದ ಲೇಹ್ ವರೆಗೂ ಸಂಪರ್ಕ ಸಾಧಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ಸಮಯ ಉಳಿತಾಯ ಆಗುತ್ತದೆ. ಮುಖ್ಯವಾಗಿ ಭಾರತೀಯ ಸೇನಾ ನಿಯೋಜನೆ ಮತ್ತು ಸೇನಾ ಚಲನವಲನಗಳ ಮೇಲೆ ಅನ್ಯರಾಷ್ಟ್ರಗಳು ನಿಗಾ ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಲಡಾಖ್ ಪ್ರದೇಶಕ್ಕೆ ಇತರೆ ಭಾಗಗಳಿಂದ ಬೃಹತ್ ಟ್ಯಾಂಕರ್ ಮತ್ತು ಫಿರಂಗಿಗಳನ್ನು ಸಾಗಿಸಿದರೂ ಶತ್ರುರಾಷ್ಟ್ರಗಳಿಗೆ ಅದನ್ನು ಪತ್ತೆ ಮಾಡುವುದಕ್ಕೆ ಆಗುವುದಿಲ್ಲ. ಪ್ರಸ್ತುತ ಕಾರ್ಗಿಲ್ ಮಾರ್ಗವಾಗಿ ಲೇಹ್ ಮೂಲಕ ಸರಕು ಮತ್ತು ಯೋಧರನ್ನು ಸಾಗಿಸಲಾಗುತ್ತಿದೆ. ಈ ಹಿಂದೆ 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಯೋಧರು ಈ ಮಾರ್ಗದ ಮೇಲೆಯೇ ದಾಳಿ ನಡೆಸಿದ್ದರು ಎನ್ನಲಾಗಿದೆ.