Video: ಶ್ರೀಲಂಕಾದ ಎಸ್ಜೆಬಿ ಸಂಸದ ರಜಿತಾ ಸೇನಾರತ್ನೆ ಮೇಲೆ ಹಲ್ಲೆ
ಕೊಲಂಬೋ, ಜುಲೈ 9: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ರಾಷ್ಟ್ರ ರಾಜಧಾನಿ ರಸ್ತೆಗೆ ಇಳಿದಿರುವ ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಕೆರಳಿದ ಪ್ರತಿಭಟನಾಕಾರರ ಕಿಚ್ಚಿಗೆ ಎಸ್ಜೆಬಿ ಸಂಸದ ರಜಿತಾ ಸೇನಾರತ್ನೆ ಸಿಲುಕಿಗೊಂಡ ಘಟನೆಯು ಶನಿವಾರ ವರದಿಯಾಗಿದೆ. ಕೆರಳಿ ರಸ್ತೆಗೆ ಇಳಿದ ಪ್ರತಿಭಟನಾಕಾರರು ಎಸ್ಜೆಬಿ ಸಂಸದ ರಜಿತಾ ಸೇನಾರತ್ನೆ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
Colombo | In a viral video, SJB MP Rajitha Senaratne attacked by protesters as agitation erupts on the streets amid the ongoing economic crisis.
— ANI (@ANI) July 9, 2022
Sri Lankan President Gotabaya Rajapaksa has reportedly fled the country pic.twitter.com/A09tBsPmi7
ಕೊಲಂಬೋ ನಡುರಸ್ತೆಯಲ್ಲೇ ಎಸ್ಜೆಬಿ ಸಂಸದ ರಜಿತಾ ಸೇನಾರತ್ನೆ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೊಂದು ವಿಡಿಯೋ ಇಂದಿಗೆ ದ್ವೀಪರಾಷ್ಟ್ರದ ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ಸಾರಿ ಹೇಳುವಂತಿದೆ.
ದೇಶ ಬಿಟ್ಟು ಓಡಿ ಹೋದರೆ ರಾಜಪಕ್ಸೆ?:
ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದೆ. ಶುಕ್ರವಾರ ಘೋಷಿಸಿದ ಕರ್ಫ್ಯೂ ಹೊರತಾಗಿಯೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಕೊಲಂಬೋಗೆ ಲಗ್ಗೆ ಇಟ್ಟಿದ್ದಾರೆ.
ಕೊಲಂಬೋದಲ್ಲಿ ಇರುವ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವುದಕ್ಕೆ ಮುಂದಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಪರಿಸ್ಥಿತಿ ಸೂಕ್ಷ್ಮತೆಯನ್ನು ಅರಿತುಕೊಂಡ ರಾಜಪಕ್ಸೆ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದಾರೆ ಎಂದು ಗೊತ್ತಾಗಿದೆ. ಕೆಲವು ಜಾಗತಿಕ ಮತ್ತು ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ದೇಶವನ್ನೇ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ.
ಆಹಾರ ಮತ್ತು ಇಂಧನ ಕೊರತೆ:
ಶ್ರೀಲಂಕಾದಲ್ಲಿ ಪ್ರಮುಖ ಸರಕುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯ ನಂತರದಲ್ಲಿ ಹಣಕಾಸಿನ ಬಿಕ್ಕಟ್ಟು ಸೃಷ್ಟಿಯಾಗಿದೆ. ಆಹಾರ ಮತ್ತು ಇಂಧನ ಕೊರತೆಯಿದೆ. ದೇಶದಲ್ಲಿ ಈಗಾಗಲೇ ವಿರಳವಾದ ಪೆಟ್ರೋಲ್ ಸರಬರಾಜಿನಿಂದ ಪರಿತಪಿಸುವಂತಾ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಪ್ರಮುಖ ವಿರೋಧ ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿರುವ ಪ್ರತಿಭಟನಾಕಾರರು ಖಾಸಗಿ ಬಸ್ಸುಗಳನ್ನು ಬಾಡಿಗೆ ಪಡೆದುಕೊಂಡು ರಾಜಧಾನಿ ಕೊಲಂಬೋ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಇದು ದೇಶದಲ್ಲಿ ಇಂಧನ ಕೊರತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡುವ ಆತಂಕವಿದೆ.