ಚೀನಾದ ಹೂಡಿಕೆಯಿಲ್ಲ, ಭಾರತದಿಂದ ಅಧಿಕ ಸಹಾಯ: ಶ್ರೀಲಂಕಾ ಮಾಜಿ ಪ್ರಧಾನಿ
ಕೊಲಂಬೊ, ಏಪ್ರಿಲ್ 10: ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಭಾನುವಾರ ಅಧಿಕಾರದಲ್ಲಿರುವ ಸರ್ಕಾರವು "ಹಣಕಾಸು ಸವಾಲುಗಳನ್ನು ಎದುರಿಸುವಲ್ಲಿ ಅಸಮರ್ಥತೆ" ಅನ್ನು ಹೊಂದಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲೇ ಚೀನಾವು ಯಾವುದೇ ಹೂಡಿಕೆಯನ್ನು ಮಾಡಿಲ್ಲ. ಆದರೆ ಭಾರತ ಶ್ರೀಲಂಕಾಕ್ಕೆ ಗರಿಷ್ಠ ಮಟ್ಟದಲ್ಲಿ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಅಸಮರ್ಥತೆಯು ದೇಶವನ್ನು ಆಳವಾದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ದೂಡಿದೆ ಎಂದು ಆರೋಪ ಮಾಡಿದ ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಸರ್ಕಾರದ ಸಂಪೂರ್ಣ ವೈಫಲ್ಯವು ಪರಿಸ್ಥಿತಿಗೆ ಕಾರಣವಾಗಿದೆ ಎಂದು ದೂರಿದರು.
"ನಮ್ಮ ಕಾಲದಲ್ಲಿ ಇದು (ಆರ್ಥಿಕ ಬಿಕ್ಕಟ್ಟು) ಎಂದಿಗೂ ಸಂಭವಿಸಲಿಲ್ಲ. ನಮ್ಮ ಸರ್ಕಾರವು ಇಲ್ಲಿದ್ದಾಗ ಮೂಲಭೂತ ಅವಶ್ಯಕತೆಗಳನ್ನು ಖರೀದಿಸಲು ಜನರು ಸರತಿ ಸಾಲಿನಲ್ಲಿರಲಿಲ್ಲ. ಜನರು ಬೀದಿಗೆ ಬರಲು ಯಾವುದೇ ಕಾರಣವಿರಬಾರದು. ಆದರೆ ಅದು ದೇಶದಲ್ಲಿ ಗೋಟಬಯ ರಾಜಪಕ್ಸೆ ಸರ್ಕಾರದ ಅಸಮರ್ಥತೆಯಿಂದಾಗಿ ಎಲ್ಲವೂ ನಡೆಯುತ್ತಿದೆ," ಎಂದು ಮಾಜಿ ಪ್ರಧಾನಿ ವಿಕ್ರಮಸಿಂಘೆ ಎಎನ್ಐಗೆ ತಿಳಿಸಿದರು.

ಹಾಗೆಯೇ ವಿಕ್ರಮಸಿಂಘೆ ಅವರು 2019 ರಲ್ಲಿ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆಯು ಬಂಡವಾಳದ ಹೆಚ್ಚುವರಿಯೊಂದಿಗೆ ಆರೋಗ್ಯಕರ ಸ್ಥಿತಿಯಲ್ಲಿತ್ತು ಆದರೆ ಪ್ರಸ್ತುತ ಸರ್ಕಾರದ ಅಸಮರ್ಥತೆಯು ಜನರನ್ನು ಬೀದಿಗೆ ತಂದಿದೆ ಎಂದು ಹೇಳಿದರು.
ಹೆಚ್ಚುವರಿ ಬಜೆಟ್ ಇತ್ತು ಎಂದ ಮಾಜಿ ಸಿಎಂ
"ಭೀಕರ ಆರ್ಥಿಕ ಪರಿಸ್ಥಿತಿಯು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ, ಮತ್ತು ಏನಾಗುತ್ತಿದೆಯೋ ಅದು ದೇಶಕ್ಕೆ ವಿಪತ್ತಾಗಿದೆ. ಎರಡು ವರ್ಷಗಳ ಕಾಲ, ಈ ಸರ್ಕಾರವು ಆರ್ಥಿಕ ಸಮಸ್ಯೆಗಳ ಎಲ್ಲಾ ಲಕ್ಷಣಗಳನ್ನು ನಿರ್ಲಕ್ಷಿಸಿದೆ. ನಾನು 2019 ರಲ್ಲಿ ಕಚೇರಿಯನ್ನು ತೊರೆದಾಗ ಪರಿಸ್ಥಿತಿ ಹೇಗಿತ್ತು ಎಂಬುವುದು ನನಗೆ ನೆನಪಿದೆ. ಆ ಸಂದರ್ಭದಲ್ಲಿ ಹೆಚ್ಚುವರಿ ಬಜೆಟ್ ಮತ್ತು ಆಮದುಗಳಿಗೆ ಪಾವತಿಸಲು ಸಾಕಷ್ಟು ಹಣವಿತ್ತು," ಎಂದು ಹೇಳಿದರು.
ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಐಎಂಎಫ್ ಅನ್ನು ಸಂಪರ್ಕ ಮಾಡದಿರುವ ವಿಷಯದ ಬಗ್ಗೆ ಮಾತನಾಡಿದ ವಿಕ್ರಮಸಿಂಘೆ ಸಕಾಲಿಕ ಮಧ್ಯಸ್ಥಿಕೆಗಳನ್ನು ಮಾಡದ ಪ್ರಸ್ತುತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ಐಎಂಎಫ್ಗೆ ಮನವಿ ಮಾಡಿದರೂ ಯಾವುದೇ ಪರಿಹಾರ ಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಈ ನಡುವೆ ಶೀಘ್ರದಲ್ಲೇ ಐಎಂಎಫ್ಗೆ ನಿಯೋಗವನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ.
"ಸರ್ಕಾರವು ಮೀಸಲುಗಳಲ್ಲಿ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂದು ನಾನು ಭಾವಿಸುವುದಿಲ್ಲ. ಭಾರತವು ಶ್ರೀಲಂಕಾಕ್ಕೆ ಗರಿಷ್ಠ ಸಹಾಯ ಮಾಡಿದೆ. ಇನ್ನೂ ಆರ್ಥಿಕವಲ್ಲದ ರೀತಿಯಲ್ಲಿ ಸಹಾಯ ಮಾಡುತ್ತಿರುವಾಗ ನಾವು ಭಾರತದ ಬೆಂಬಲದ ಫಲಿತಾಂಶವನ್ನು ನೋಡಬೇಕಾಗಿದೆ," ಎಂದು ಹೇಳಿದ ಮಾಜಿ ಪ್ರಧಾನಿ ಈ ಸರ್ಕಾರದ ಅಡಿಯಲ್ಲಿ ಚೀನಾದ ಯಾವುದೇ ಹೂಡಿಕೆ ದೇಶಕ್ಕೆ ಬಂದಿಲ್ಲ ಎಂದು ಹೇಳಿದರು.












Click it and Unblock the Notifications