ಸಾರ್ವಜನಿಕರ ಮೇಲೆ ಗುಂಡು ಹಾರಿಸಲ್ಲ: ಶ್ರೀಲಂಕಾ ಸೇನಾ ಮುಖ್ಯಸ್ಥರ ಸ್ಪಷ್ಟನೆ
ಕೊಲಂಬೋ, ಮೇ 11: ಶ್ರೀಲಂಕಾದಲ್ಲಿ ಜನರನ್ನು ಕೆರಳಿಸಲು ಸೇನಾ ಪಡೆಗಳು ಗುಂಡಿನ ದಾಳಿಗೆ ಸಜ್ಜಾಗಿವೆ ಎಂಬ ಸುದ್ದಿಯನ್ನು ಅಲ್ಲಿನ ಸೇನಾ ಮುಖ್ಯಸ್ಥರು ತಳ್ಳಿಹಾಕಿದ್ದಾರೆ. ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಹೆಚ್ಚುತ್ತಿರುವುದನ್ನು ನಿಯಂತ್ರಣಕ್ಕೆ ತರಲು ಅಲ್ಲಿನ ಸೇನೆಗೆ ವಿಶೇಷಾಧಿಕಾರ ನೀಡಲಾಗಿದೆ.
ಪ್ರತಿಭಟನೆ ನಡೆಸುವವರು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸೇನೆ ಸೂಚಿಸಲಾಗಿದೆ ಎಂಬಂತಹ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಶ್ರೀಲಂಕಾದ ವಿಪಕ್ಷ ಫ್ರಂಟ್ಲೈನ್ ಸೋಷಿಯಲಿಸ್ಟ್ ಪಾರ್ಟಿ ಮುಖಂಡ ದುಮಿಂದಾ ನಾಗಮುವ ಇನ್ನೂ ಮುಂದುವರಿದು, ಜನರನ್ನು ಕೆಣಕಲೆಂದೇ ಲಂಕಾ ಸೇನೆ ಗುಂಡಿನ ದಾಳಿಗೆ ಸಜ್ಜಾಗಿದೆ. ಸೇನಾ ಮುಖ್ಯಸ್ಥರು ಅಧ್ಯಕ್ಷ ಗೋಟಾಬಯ ರಾಜಪಕ್ಸೆಯನ್ನು ತೃಪ್ತಿಪಡಿಸಲು ಜನರ ವಿರುದ್ಧ ಸೇನೆಯ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ಲಂಕಾ: ಹಿಂಸಾಚಾರಿಗಳಿಗೆ ಗುಂಡು ಹಾರಿಸುವಂತೆ ರಕ್ಷಣಾ ಸಚಿವಾಲಯ ಆದೇಶ
ಈ ಬಗ್ಗೆ ಸ್ಪಷ್ಟನೆ ನೀಡಿದ ಶ್ರಿಲಂಕಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹಾಗೂ ಸೇನಾ ಕಮಾಂಡರ್ ಜನರಲ್ ಶಾವೇಂದ್ರ ಸಿಲ್ವ, "ಲಂಕಾ ಸೇನೆ ಯಾವ ಸಂದರ್ಭ ಎದುರಾದರೂ ಅಮಾಯಕ ನಾಗರಿಕರ ಮೇಲೆ ಗುಂಡು ಹಾರಿಸುವ ಮಟ್ಟಕ್ಕೆ ಹೋಗುವುದಿಲ್ಲ" ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ದುಸ್ಥಿತಿಯಿಂದಾಗಿ ಅಲ್ಲಿನ ಜನಜೀವನ ಹೈರಾಣಗೊಂಡಿದೆ. ಕಳೆದ ಹಲವು ತಿಂಗಳಿಂದ ನಿರಂತರವಾಗಿ ಜನರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಕೂಡ ನೀಡಬೇಕಾಯಿತು. ಮೊನ್ನೆ ಆಡಳಿತ ಪಕ್ಷದ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ಮಧ್ಯೆ ಏರ್ಪಟ್ಟಿದ್ದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು.
ಲಂಕಾ ತೊರೆದ ಮಾಜಿ ಪ್ರಧಾನಿ ಕುಟುಂಬದೊಂದಿಗೆ ನೌಕಾನೆಲೆಗೆ ಪಲಾಯನ
ಹಲವು ಮಂದಿ ಗಾಯಗೊಂಡಿದ್ದರು. ಕೆಲ ಸಂಸದರ ಮನೆಗಳನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ ಘಟನೆಗಳು ವರದಿಯಾಗಿದ್ದವು. ಆಡಳಿತಾರೂಢ ಎಸ್ಎಲ್ಪಿಪಿ ಪಕ್ಷದ ನಾಯಕರ ಮನೆ ಮತ್ತು ಕಚೇರಿಗಳನ್ನು ಪ್ರತಿಭಟನಾಕಾರರು ಗುರಿ ಮಾಡಿದ್ದರು. ಪಕ್ಷದ ಸಂಸದರಾದ ಸನತ್ ನಿಶಾಂತ, ರಮೇಶ್ ಪದಿರಾಣ, ಮಹಿಪಾಲ ಹೇರಾತ್, ತಿಸ್ಸಾ ಕುಟ್ಟಿಯರಚಿ, ನಿಮಲ್ ಲಂಜಾ ಸೇರಿದಂತೆ ಹಲವರ ಮನೆಗಳಿಗೆ ಜನರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಭಟನೆಗಳನ್ನು ನಿಯಂತ್ರಣಕ್ಕೆ ತರಲು ಸರಕಾರ ತನ್ನ ಸೇನೆಯನ್ನು ಬಳಸಿಕೊಳ್ಳುತ್ತಿದೆ. ಸಾರ್ವಜನಿಕರ ಆಸ್ತಿಯನ್ನು ಲೂಟಿ ಮಾಡುವವರು ಮತ್ತು ಹಲ್ಲೆ ಮಾಡುವವರು ಕಂಡರೆ ಗುಂಡು ಹಾರಿಸಿ ಎಂದು ಲಂಕಾದ ಮೂರೂ ಸೇನಾ ಪಡೆಗಳಿಗೆ ಸೂಚನೆ ರವಾನೆಯಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ಹೇಳಿದ್ದವು.
ಜನರ ಪ್ರತಿಭಟನೆ ತಾರಕಕ್ಕೇರುತ್ತಿರುವಂತೆಯೇ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತವರ ಕುಟುಂಬದ ಕೆಲ ಸದಸ್ಯರು ಪ್ರಾಣಾಪಾಯದಿಂದ ಪಾರಾಗಲು ಬೇರೆಡೆ ಹೋಗಿರುವುದು ತಿಳಿದುಬಂದಿದೆ. ಲಂಕಾದ ಗೋಕರ್ಣ ಎಂದು ಖ್ಯಾತವಾಗಿರುವ ತಿರುಕೋಣಮಲೈ (Trincomalee) ನೌಕಾ ನೆಲೆಯಲ್ಲಿ ಬಿಗಿಭದ್ರತೆ ಮಧ್ಯೆ ಅವರಿದ್ದಾರೆ ಎಂಬ ವರದಿಗಳಿವೆ.
ಈ ಸುದ್ದಿಗೆ ಇಂಬು ಕೊಡುವಂತೆ ಕೊಲಂಬೋದಿಂದ ಕೆಲ ಹೆಲಿಕಾಪ್ಟರ್ಗಳು ಹೊರಗೆ ಹೋಗುತ್ತಿದ್ದುದು ಕಂಡು ಬಂದಿವೆ. ಈ ಹೆಲಿಕಾಪ್ಟರ್ಗಳಲ್ಲಿ ರಾಜಪಕ್ಸೆ ಕುಟುಂಬದ ಸದಸ್ಯರು ಪ್ರಯಾಣ ಮಾಡಿರಬಹುದು ಎಂದು ಶಂಕಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)