ಪೋಲೆಂಡ್-ಬೆಲಾರಸ್ ಗಡಿಯಲ್ಲಿ ರಷ್ಯಾ, ಉಕ್ರೇನ್ ನಡುವೆ 2ನೇ ಸುತ್ತಿನ ಮಾತುಕತೆ
ಕೀವ್, ಫೆಬ್ರವರಿ 28: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ. ಸೋಮವಾರ ಮೊದಲ ಸುತ್ತಿನ ಶಾಂತಿ ಮಾತುಕತೆ ನಡೆಸಲಾಗಿದೆ. ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಷ್ಯಾ ತನ್ನ ಯೋಧರನ್ನು ವಾಪಸ್ ಕರೆಸಿಕೊಳ್ಳುವಂತೆ ಉಕ್ರೇನ್ ಪ್ರಸ್ತಾಪಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಪೋಲೆಂಡ್-ಬೆಲಾರಸ್ ಗಡಿಯಲ್ಲಿ ನಡೆಯಲಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಇದಕ್ಕೂ ಮೊದಲು ಉಕ್ರೇನ್ನೊಂದಿಗಿನ ಶಾಂತಿ ಮಾತುಕತೆಯಲ್ಲಿ ಎರಡೂ ಕಡೆಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಒಪ್ಪಂದಕ್ಕೆ ಬರಲು ರಷ್ಯಾ ಆಸಕ್ತಿ ಹೊಂದಿದೆ ಎಂದು ರಷ್ಯಾದ ಸಮಾಲೋಚಕ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದರು.
ಉಕ್ರೇನ್ ನೆಲದಲ್ಲಿ ಯುದ್ಧ ನಡೆಸುತ್ತಿರುವ ರಷ್ಯಾ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನದಲ್ಲಿ ಕರೆ ನೀಡಲಾಗಿದೆ. ರಷ್ಯಾ ನಡೆಸುತ್ತಿರುವ ಯುದ್ಧದ ಬೆನ್ನಲ್ಲೇ ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 11ನೇ ತುರ್ತು ಅಧಿವೇಶನ ನಡೆಸಲಾಯಿತು. ವಿಶೇಷ ಅಧಿವೇಶನದಲ್ಲಿ ಎಲ್ಲಾ ಪಕ್ಷಗಳು ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಕರೆ ನೀಡಿದವು. ಸಂಯಮ ಕಾಯ್ದುಕೊಂಡು ಮಾತುಕತೆ ಪ್ರಾರಂಭಿಸಲು ಸಲಹೆ ನೀಡಲಾಯಿತು.
ಐದು ದಿನದಲ್ಲಿ 16 ಮಕ್ಕಳು ಸೇರಿ 352 ಮಂದಿ ಸಾವು:
ರಷ್ಯಾ ನಡೆಸಿದ ನಿರಂತರ ದಾಳಿಯಲ್ಲಿ 16 ಅಮಾಯಕ ಮಕ್ಕಳು ಸೇರಿದಂತೆ ಒಟ್ಟು 352 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಸಂಖ್ಯೆಯು ನಿರಂತರವಾಗಿ ಏರಿಕೆ ಆಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ರಷ್ಯಾ ಸೇನೆಯು ಶೆಲ್ ದಾಳಿಯನ್ನು ಮುಂದುವರಿಸುತ್ತಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ಅಧಿವೇಶನದಲ್ಲಿ ಉಕ್ರೇನ್-ರಷ್ಯಾ ಸಂಘರ್ಷದ ಬಗ್ಗೆ ಉಕ್ರೇನ್ ಪ್ರತಿನಿಧಿ ವಿವರಿಸಿದ್ದಾರೆ. ಅಲ್ಲದೇ ಯುದ್ಧದಿಂದ ರಷ್ಯಾದ ಪಡೆಗಳು ನರಳುತ್ತಿದ್ದು, ಈಗಾಗಲೇ 1000 ಸೈನಿಕರನ್ನು ಕಳೆದುಕೊಂಡಿದೆ. ಉಕ್ರೇನ್ ವಿರುದ್ಧದ ಈ ಆಕ್ರಮಣವನ್ನು ಇಲ್ಲಿಗೆ ನಿಲ್ಲಿಸಿ. ಬೇಷರತ್ತಾಗಿ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವಂತೆ ನಾವು ರಷ್ಯಾವನ್ನು ಒತ್ತಾಯಿಸುತ್ತೇವೆ. ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸಂಪೂರ್ಣ ಅನುಸರಣೆಗೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
36 ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ರಷ್ಯಾ ನಿರ್ಬಂಧ:
ಉಕ್ರೇನ್ ಆಕ್ರಮಣದ ನಂತರ ಹಲವಾರು ರಾಷ್ಟ್ರಗಳು ರಷ್ಯಾವನ್ನು ತನ್ನ ವಾಯುಪ್ರದೇಶದಿಂದ ನಿಷೇಧಿಸಿದೆ. ಇದರ ಬೆನ್ನಲ್ಲೇ ರಷ್ಯಾ ಸರ್ಕಾರವು 36 ದೇಶಗಳಿಂದ ವಿಮಾನಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ.