Israel War: ಹಲೋ ಬೆಂಜಮಿನ್ ನೆತನ್ಯಾಹು.. ನಾನು ಪುಟಿನ್ ಮಾತಾಡ್ತಿರೋದು...
ಹಮಾಸ್ ಬಂಡುಕೋರರ ನಾಶಕ್ಕೆ ತೊಡೆತಟ್ಟಿ ನಿಂತಿರುವ ಇಸ್ರೇಲ್ ಮನಸ್ಸಿಗೆ ಬಂದ ರೀತಿ ದಾಳಿ ನಡೆಸುತ್ತಿದೆ. ಒಂದ್ಕಡೆ ಅಮೆರಿಕ, ಈ ಯುದ್ಧದಲ್ಲಿ ಇಸ್ರೇಲ್ ಸೇನೆ ಪರ ನಿಂತಿದ್ದರೆ. ಪ್ಯಾಲೆಸ್ತೀನ್ ಪರವಾಗಿ ಮಾತನಾಡುತ್ತಾ ಹಮಾಸ್ ಬಂಡುಕೋರರಿಗೆ ರಷ್ಯಾ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಆರೋಪವೂ ಇದೆ. ಈ ಮೂಲಕ ಇಸ್ರೇಲ್ ಮತ್ತು ರಷ್ಯಾ ನಡುವೆ ಸಂಬಂಧ ಹಳಸಿ ಹೋಗುತ್ತಿದೆ ಎನ್ನುವಾಗಲೇ ಪುಟಿನ್, ಇಸ್ರೇಲ್ಗೆ ಕಾಲ್ ಮಾಡಿದ್ದಾರೆ.
ಹೌದು, ಜಗತ್ತಿನಲ್ಲಿ ಇಂದು ಮಹತ್ವದ ಘಟನೆ ಘಟಿಸಿದೆ. ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಫೋನ್ ಮಾಡಿ ಮಾತನಾಡಿದ್ದಾರೆ ಅಂತ ಹೇಳಲಾಗಿದೆ. ರಷ್ಯಾ ವಿರುದ್ಧ ಇಸ್ರೇಲ್ ಈಗ ಮುನಿಸಿಕೊಂಡಿದೆ ಎಂಬ ಆರೋಪ ಎಲ್ಲೆಡೆ ಹಬ್ಬಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಹಾಗಾದ್ರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಜತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಚರ್ಚೆ ಮಾಡಿದ ವಿಚಾರ ಯಾವ್ದು? ಹಮಾಸ್ ವಿರುದ್ಧದ ವಾರ್ನ ಬಗ್ಗೆ ಪುಟಿನ್ ಹೇಳಿದ್ದೇನು? ಮುಂದೆ ಏನಾಗುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಪುಟಿನ್ ಇರುವಾಗ ಟೆನ್ಷನ್ ಬೇಡ!
ಅಮೆರಿಕ ಜೊತೆಗೆ ಅದೆಷ್ಟೇ ಮುನಿಸು ಇದ್ದರೂ ಉಕ್ರೇನ್ ಜೊತೆಗೆ ಭೀಕರ ಯುದ್ಧ ಇದೀಗ ನಡೆಯುತ್ತಿದ್ದರೂ ರಷ್ಯಾ ತನ್ನ ಶಕ್ತಿ ಕಳೆದುಕೊಂಡಿಲ್ಲ. ಅದ್ರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಮಾತಿಗೆ ಒಂದು ಬೆಲೆ ಇದೆ. ಹೀಗಾಗಿ ಇಸ್ರೇಲ್ ಮತ್ತು ಹಮಾಸ್ ಸಂಘರ್ಷ ಕೊನೆಗೊಳಿಸಲು ನೆರವಾಗಲು ನಾನು ಸಿದ್ಧ ಎಂದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾಗಿ ಅವರ ಅಧಿಕೃತ ನಿವಾಸ ಕ್ರೆಮ್ಲಿನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಹಲವು ಪ್ರಮುಖ ನಿರ್ಣಗಳಿಗೆ ಸಾಕ್ಷಿಯಾಗಿತ್ತು. ಈಗ ಹಮಾಸ್ ಹಾಗೂ ಇಸ್ರೇಲ್ ಯುದ್ಧ ನಿಲ್ಲಿಸುವುದಕ್ಕೆ ಕೂಡ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಪ್ಯಾಲೆಸ್ತೀನ್ ಜೊತೆಗೂ ಪುಟಿನ್ ಮಾತುಕತೆ
ಹಾಗೇ ಇನ್ನೊಂದು ಕಡೆ ಪರಿಸ್ಥಿತಿ ತಿಳಿಗೊಳಿಸಲು, ಹಿಂಸಾಚಾರ ಮತ್ತಷ್ಟು ಉಲ್ಬಣವಾಗುವ ಪರಿಸ್ಥಿತಿ ನಿಭಾಯಿಸಲು ರಷ್ಯಾ ಹಲವು ಕ್ರಮ ಕೈಗೊಂಡಿದೆ. ಅಲ್ಲದೆ ಗಾಜಾ ಪಟ್ಟಿಯಲ್ಲೂ ಮಾನವೀಯ ದುರಂತ ತಡೆಯಲು ರಷ್ಯಾ ಕ್ರಮ ಕೈಗೊಳ್ಳುತ್ತಿರುವುದಾಗಿ, ನೆತನ್ಯಾಹು ಅವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ ಎಂದು ಕ್ರೆಮ್ಲಿನ್ ಅಧಿಕಾರಿಗಳು ಹೇಳಿದ್ದಾರೆ. ಪುಟಿನ್ ಈಗಾಗಲೇ ಇರಾನ್, ಈಜಿಪ್ಟ್, ಸಿರಿಯಾ ಸೇರಿ ಪ್ಯಾಲೆಸ್ತೀನ್ ನಾಯಕರ ಜೊತೆಗೆ ನಿನ್ನೆಯಷ್ಟೇ ಚರ್ಚೆ ನಡೆಸಿದ್ದಾರೆ. ಇಂದು ದಿಢೀರ್ ಇಸ್ರೇಲ್ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿದ್ದಾರೆ.

ವಿಶ್ವಸಂಸ್ಥೆ ಕೂಡ ಎಚ್ಚರಿಕೆ ನೀಡಿತ್ತು
ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 4000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನು ಒಂದ್ಕಡೆ 1400 ಇಸ್ರೇಲ್ ನಾಗರಿಕರು ಮೃತಪಟ್ಟಿದ್ದರೆ, ಗಾಜಾಪಟ್ಟಿ ಭಾಗದಲ್ಲಿ ಸುಮಾರು 2,750 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಪೈಕಿ 289 ಇಸ್ರೇಲ್ ಸೈನಿಕರು ಮೃತಪಟ್ಟಿರುವ ಬಗ್ಗೆ ಇಸ್ರೇಲ್ ತಿಳಿಸಿತ್ತು. ವಿಶ್ವಸಂಸ್ಥೆ ಎರಡೂ ದೇಶದ ಸಾಮಾನ್ಯರ ರಕ್ಷಣೆಗೆ ಮುಂದಾಗಿದೆ. ಇದರ ಮಧ್ಯೆ ಪುಟಿನ್ ಕೂಡ ಸಂಧಾನ ಮಾಡಿ ಯುದ್ಧ ನಿಲ್ಲಿಸುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಲು ಯತ್ನಿಸಬೇಕಿದೆ.
ಒಟ್ನಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಂತು ಅಮಾಯಕ ಜನರ ಜೀವ ಉಳಿಯಲಿ ಎಂಬುದೇ ಎಲ್ಲರ ಆಶಯ. ಆದರೆ ಇದು ನಡೆಯುತ್ತಾ? ಪುಟಿನ್ ಮಾತಿಗೆ ಇಸ್ರೇಲ್ & ಹಮಾಸ್ ಬೆಲೆ ನೀಡಿ ಸೈಲೆಂಟ್ ಆಗುತ್ತವಾ? ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಗಾಜಾಪಟ್ಟಿಯ ಜನರಿಗೆ ಇದರಿಂದ ಮುಕ್ತಿ ಸಿಗುತ್ತಾ? ಹೀಗೆ ಎಲ್ಲವೂ ಪ್ರಶ್ನಾರ್ಥಕವಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಉತ್ತರ ಸಿಗಲು ಒಂದಷ್ಟು ದಿನ ಕಾಯಬೇಕಿದೆ. ಆದರೆ ಅಲ್ಲಿಯವರೆಗೂ ಮತ್ತಷ್ಟು ಜನರ ಜೀವ ಹೋಗುವ ಅಪಾಯ ಇದೆ.












Click it and Unblock the Notifications