ಉಕ್ರೇನ್ ಮೇಲೆ ದಾಳಿ ಬಳಿಕ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು?
ಮಾಸ್ಕೋ, ಫೆಬ್ರವರಿ 25: ಉಕ್ರೇನ್ ಮೇಲೆ ದಾಳಿ ನಡೆಸುವುದು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಉಕ್ರೇನ್ ಮೇಲೆ ದಾಳಿ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉಕ್ರೇನ್ ಮೇಲೆ ಆಕ್ರಮಣ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ತಮ್ಮ ಸೈನ್ಯವು ಉಕ್ರೇನ್ ಮೇಲೆ ದಾಳಿ ಮಾಡಿದ ಕೆಲವು ಗಂಟೆಗಳ ಬಳಿಕ ಮಾತನಾಡಿದ್ದಾರೆ.
ತಮ್ಮ ದೇಶವು ವಿಶ್ವ ಆರ್ಥಿಕತೆಯ ಭಾಗವಾಗಿ ಉಳಿಯಲು ಬಯಸಿದರೆ ಮತ್ತು ಅದಕ್ಕೆ ಹಾನಿ ಮಾಡುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ, ರಷ್ಯಾ ವಿಶ್ವ ಆರ್ಥಿಕತೆಯ ಭಾಗವಾಗಿಯೇ ಉಳಿದಿದೆ ಎಂದರು.

ಈಗ ಏನಾಗುತ್ತಿದೆಯೋ ಅದನ್ನು ಬಿಟ್ಟು ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲಮ ನಮಗೆ ಮುಂದುವರೆಯಲು ಬೇರೆ ಮಾರ್ಗವಿಲ್ಲ. ನಮ್ಮ ಪಾಲುದಾರರು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮನ್ನು ಈ ವ್ಯವಸ್ಥೆಯಿಂದ ಹೊರಗೆ ತಳ್ಳುವ ಕೆಲಸವನ್ನು ಮಾಡಬಾರದು ಎಂದಿದ್ದಾರೆ.
ನಾವು ಭಾಗವಾಗಿರುವ ವಿಶ್ವ ಆರ್ಥಿಕ ವ್ಯವಸ್ಥೆಯನ್ನು ನಾವು ಹಾನಿಗೊಳಿಸುವುದಿಲ್ಲ, ಅಲ್ಲದೆ, ರಷ್ಯಾವನ್ನು ಅಂತಾರಾಷ್ಟ್ರೀಯ ಆರ್ಥಿಕ ಸಮುದಾಯದಿಂದ ಹೊರಗಿಡಲು ನಾವು ಬಯಸುವುದಿಲ್ಲ ಎಂದರು.
ರಷ್ಯಾ ತನ್ನ ದೇಶದ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋದಲ್ಲಿ, ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದೆ. ಈವರೆಗೆ ಸೈನಿಕರು ಸೇರಿದಂತೆ 137 ಜನರು ಹತರಾಗಿದ್ದು, ಇನ್ನೂ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಒಡೆಸಾ ಪ್ರದೇಶದ ಜ್ಮಿನಿ ದ್ವೀಪದಲ್ಲಿರುವ ಎಲ್ಲ ಭದ್ರತಾ ಪಡೆಯ ಸಿಬ್ಬಂದಿಯನ್ನು ರಷ್ಯಾ ಹೊಡೆದುರುಳಿಸಿದೆ. ಅಲ್ಲದೇ ಆ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆದಿದೆ. ಯುದ್ಧದಲ್ಲಿ ಮೃತಪಟ್ಟ ಸೈನಿಕರನ್ನು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹುತಾತ್ಮರು ಎಂದು ಕರೆದಿದ್ದಾರೆ.
ಇನ್ನು ತನ್ನ ದೇಶದ ಮೇಲೆ ದಾಳಿ ಮಾಡಿದ್ದ ರಷ್ಯಾ ವಿರುದ್ಧ ಏಕಾಂಗಿಯಾಗಿ ಹೋರಾಡಲಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ. ಇತರೆ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿದರೂ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ವೊಲೊಡಿಮಿರ್ ಜೆಲೆನ್ಸ್ಕಿ ತನ್ನ ಶತ್ರು ರಾಷ್ಟ್ರವನ್ನು ಒಂಟಿಯಾಗಿ ಎದುರಿಸಲಿದೆ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ ಭಾರತದ ಜೊತೆ ಮಾತುಕತೆ ನಡೆಸಲಾಗುವುದು, ಈ ಕುರಿತ ವಿಚಾರ ಇನ್ನೂ ಬಗೆಹರಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಭಾರತವು ಅಮೆರಿಕದ ರಕ್ಷಣಾ ವಲಯದ ದೊಡ್ಡ ಭಾಗಿದಾರ ದೇಶವಾಗಿದೆ. ಉಕ್ರೇನ್ ವಿಚಾರದಲ್ಲಿ ಭಾರತ ಸಂಪೂರ್ಣವಾಗಿ ನಿಮ್ಮೊಂದಿಗೆ ಇದೆಯೇ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಬೈಡನ್, ಈ ಕುರಿತ ವಿಚಾರಗಳು ಇನ್ನೂ ಬಗೆಹರಿದಿಲ್ಲ, ನಾವು ಭಾರತದ ಜೊತೆಗೆ ಇಂದು ಮಾತುಕತೆ ನಡೆಸುತ್ತೇವೆ ಎಂದರು.
ಉಕ್ರೇನ್ ಮೇಲಿನ ರಷ್ಯಾ ದಾಳಿಯು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಯುದ್ಧವಾಗಿದೆ. ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಲಾಗುವುದು ಎಂದು ಬೈಡನ್ ಇದಕ್ಕೂ ಮುನ್ನ ತಿಳಿಸಿದರು.
ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯುದ್ಧವನ್ನು ನಿಲ್ಲಿಸುವಂತೆ ಕೋರಿದ್ದಾರೆ. ಅಲ್ಲದೇ, ಹಿಂಸಾಚಾರವನ್ನು ನಿಲ್ಲಿಸಿ, ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ವಿದೇಶಾಂಗ ಸಚಿವರ ಮಾತುಕತೆ: ಈ ಮಧ್ಯೆಯೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಉಕ್ರೇನ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ಕುರಿತು ಮಾತುಕತೆ ನಡೆಸಿದ್ದಾರೆ.












Click it and Unblock the Notifications