'ಒಂದೇ ಒಂದು ಚಾನ್ಸ್ ಕೊಡಿ' ಮೋದಿ ಬಳಿ ಗೋಗರೆದರೇ ಇಮ್ರಾನ್ ಖಾನ್?
Recommended Video

ಇಸ್ಲಾಮಾಬಾದ್, ಫೆಬ್ರವರಿ 25: "ಶಾಂತಿಗೆ ಒಂದು ಅವಕಾಶ ಕೊಡಿ... ನಾನು ಕೊಟ್ಟ ಮಾತನ್ನು ಖಂಡಿತ ಉಳಿಸಿಕೊಳ್ಳುತ್ತೇನೆ" ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದು, ಭಾರತದ ಯುದ್ಧ ಸಾರಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ಇದೀಗ ಅಂಗಲಾಚುವ ಸ್ಥಿತಿಗೆ ಬಂದು ನಿಂತಿದೆ.

ಇಷ್ಟು ದಿನ ಈ ದಾಳಿಗೂ, ತನಗೂ ಸಂಬಂಧವೇ ಇಲ್ಲ, ಸಾಕ್ಷಿ ಕೊಡಿ ಎಂದೆಲ್ಲ ಕೇಳುತ್ತಿದ್ದ ಪಾಕಿಸ್ತಾನ ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳು ತನ್ನ ವಿರುದ್ಧ ನಿಂತಿರುವುದರಿಂದ ಭೀತಿಗೊಳಗಾಗಿದೆ. ವಿಶ್ವಸಂಸ್ಥೆಯಿಂದಲೂ ಛೀಮಾರಿ ಹಾಕಿಸಿಕೊಂಡಮೇಲೆ ಬೇರೆ ದಾರಿ ಕಾಣದೆ ಭಾರತದ ಬಳಿ ಗೋಗರೆಯುವುದಕ್ಕೆ ಆರಂಭಿಸಿದೆ.

ಇಮ್ರಾನ್ ಖಾನ್ ಹೇಳಿದ್ದೇನು?
"ನಾನು ಪ್ರಧಾನಿಯಾದಾಗ ನರೇಂದ್ರ ಮೋದಿ ಅವರಿಗೆ ಮಾತು ಕೊಟ್ಟಿದ್ದೆ. ಬಡತನ ಮತ್ತು ಅನಕ್ಷರಸ್ಥತೆಯ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಶಾಂತಿಗೆ ಒಂದು ಅವಕಾಶ ನೀಡಿ. ಪುಲ್ವಾಮಾ ದಾಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ" ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಮೋದಿ ಮಾತಿನಿಂದ ಭೀತಿ?
ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಾರ್ವಜನಿಕವಾಗಿ ಪಾಕಿಸ್ತಾನವನ್ನು ಹಳಿಯುತ್ತಿದ್ದಾರೆ. ರಾಜಸ್ಥಾನದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, 'ಭಯೋತ್ಪಾದನೆಯ ಬಗ್ಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರನ್ನು ಶಿಕ್ಷಿಸಲು ನಾವು ಬಲವಾದ ಹೋರಾಟ ಮಾಡುತ್ತೇವೆ. ಈ ಬಾರಿ ಸುಮ್ಮನೆ ಬಿಡುವುದಿಲ್ಲ. ಇದು ಬದಲಾದ ಭಾರತ, ನೋವನ್ನು ನಾವು ಸಹಿಸಿಕೊಂಡಿರುವುದಿಲ್ಲ. ಭಯೋತ್ಪಾದನೆಯನ್ನು ಹೇಗೆ ಹೊಸಕಿಹಾಕಬೇಕು ಎಂಬುದು ನಮಗೆ ಗೊತ್ತು' ಎಂದಿದ್ದರು.

ಖಾನ್ ಮಾತು ನೆನಪಿಸಿದ ಮೋದಿ
ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಮ್ರಾನ್ ಖಾನ್ ಅವರಿಗೆ ಮೋದಿ ಕರೆ ಮಾಡಿ ಶುಭಾಶಯ ಕೋರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಖಾನ್, 'ನಾನು ಪಠಾಣ್ (ಪಠಾಣ್ ಎಂದರೆ ಇರಾನಿನ ಒಂದು ಜನಾಂಗ. ಇವರು ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಸರಾದವರು) ಪುತ್ರ. ನಾನು ಕೊಟ್ಟ ಮಾತನ್ನು ಎಂದಿಗೂ ಮರೆಯುವುದಿಲ್ಲ. ಬಡತನ ಮತ್ತು ನಿರಕ್ಷರತೆಯ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ' ಎಂದಿದ್ದರು. ಈ ಮಾತನ್ನು ಮತ್ತೊಮ್ಮೆ ನೆನಪಿಸಿದ ಮೋದಿ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನೀವು, ಈಗಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಸವಾಲೆಸೆದಿದ್ದರು.

ಆತಂಕದಲ್ಲಿ ಪಾಕಿಸ್ತಾನ
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ ಒಟ್ಟು 44 ಯೋಧರು ಹುತಾತ್ಮರಾಗಿದ್ದರು. ಜೈಷ್ ಸಂಘಟನೆ ಪಾಕ್ ಮೂಲದ್ದಾಗಿರುವುದರಿಂದ ಇಡೀ ವಿಶ್ವವೂ ಈ ಘಟನೆಗೆ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪಾಕಿಸ್ತಾನ್ ಜೈಷ್ ಕೇಂದ್ರ ಕಚೇರಿಯನ್ನು ತನ್ನ ವಶಕ್ಕೆ ಪಡೆದಿದ್ದಲ್ಲದೆ, 2008ರ ಮುಂಬೈ ಮೇಲಿನ ಭಯೊತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಹಾಗೂ ಅದರ ದತ್ತಿ ಸಂಸ್ಥೆಯಾದ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ನನ್ನು ಇತ್ತೀಚೆಗಷ್ಟೇ ಪಾಕಿಸ್ತಾನ ನಿಷೇಧಿಸಿದೆ.












Click it and Unblock the Notifications