ಪರಮಾಣು ಶಸ್ತ್ರಾಗಾರ ಮೇಲ್ವಿಚಾರಣೆ ಸಮಿತಿ ಸಭೆ ಕರೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್: ವರದಿ
ಭಾರತದ ಹಲವು ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದೇ ವೇಳೆ ಪ್ರಧಾನಿ ಶೆಹಬಾಜ್ ಷರೀಫ್ ಪರಮಾಣು ಶಸ್ತ್ರಾಗಾರ ಮೇಲ್ವಿಚಾರಣೆ ಸಮಿತಿಯ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ಸುದ್ದಿಸಂಸ್ಥೆ 'ರಾಯಟರ್ಸ್' ವರದಿ ಮಾಡಿದೆ. ಈ ಸಭೆಯಲ್ಲಿ ಪಾಕಿಸ್ತಾನದ ಉನ್ನತ ದರ್ಜೆ ಮಿಲಿಟರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ತುರ್ತು ಸಭೆಯಲ್ಲಿ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರ ಹಾಗೂ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರುತ್ತಿರುವ ಹೊತ್ತಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ.

ಡ್ರೋನ್ ಸೇರಿದಂತೆ ಇತರ ಯುದ್ಧಸಾಮಗ್ರಿಗಳ ಬಳಕೆಯನ್ನು ಎರಡೂ ದೇಶಗಳು ಈಗಾಗಲೇ ಮಾಡುತ್ತಿವೆ. ಇದು ಎರಡೂ ದೇಶಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಭಾರತ ಆರೋಪಿಸಿದೆ.
ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರವಾಗಿ ಶನಿವಾರ ಮುಂಜಾನೆ ಪಾಕ್ನ ಹಲವಾರು ವಾಯುಪಡೆ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ತನ್ನ ಮೂರು ವಾಯುಪಡೆಯ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಇವುಗಳಲ್ಲಿ ರಾವಲ್ಪಿಂಡಿಯಲ್ಲಿರುವ ಅತ್ಯಂತ ಸೂಕ್ಷ್ಮವಾದ ನೂರ್ ಖಾನ್ ವಾಯುನೆಲೆಯೂ ಸೇರಿದೆ ಎಂದು ಹೇಳಲಾಗಿದೆ. ನೂರ್ ಖಾನ್ ಜೊತೆಗೆ, ಚಕ್ವಾಲ್ ನಗರದಲ್ಲಿರುವ ಮುರಿದ್ ವಾಯುನೆಲೆ ಮತ್ತು ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆ ಕೂಡ ಸ್ಫೋಟಗಳಿಗೆ ಬಲಿಯಾಗಿವೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಜಮ್ಮು ಸೇರಿ ಹಲವು ನಗರಗಳ ಮೇಲೆ ಪಾಪಿಸ್ತಾನ ದಾಳಿ
ಜಮ್ಮು, ಶ್ರೀನಗರ, ಉಧಂಪುರ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳ ಶಬ್ದ ಶನಿವಾರ ಕೇಳಿಬಂದಿವೆ. ನಾಗರಿಕರನ್ನು ಗುರಿಯಾಗಿಸಿ ಪಾಕಿಸ್ತಾನವು ಅಪ್ರಚೋದಿತ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ಸೇನೆಯು ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿ ನಡೆಸಿದೆ ಎಂದು ಸ್ವತಃ ಪಾಕಿಸ್ತಾನ ಹೇಳಿದೆ.
ಈ ಘಟನೆಗಳ ನಡುವೆಯೇ ರಾಜೌರಿಯಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸಿದ್ದರಿಂದ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜಕುಮಾರ್ ಥಾಪಾ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಥಾಪಾ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಭಾರತವು ಆಪರೇಷನ್ ಸಿಂಧೂರ ಕೈಗೊಂಡ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications