ರಷ್ಯಾಗೆ ಪ್ರಧಾನಿ ನರೇಂದ್ರ ಮೋದಿ ಹೋಗೋದೇ ಡೌಟ್!
ನವದೆಹಲಿ, ಡಿಸೆಂಬರ್ 09: ರಷ್ಯಾ ಮತ್ತು ಭಾರತದ ನಡುವೆ ನಡೆಯುವ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಈ ವರ್ಷ ರಷ್ಯಾಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ ತೀರಾ ವಿರಳ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಈ ವರ್ಷ ಪ್ರಧಾನಿ ಮೋದಿಯವರ ಕೊನೆಯ ವಿದೇಶ ಪ್ರವಾಸವಾಗಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಭಾರತದಲ್ಲಿ ನಡೆದ ಕೊನೆಯ ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರು ಗಂಟೆಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದರು.
ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾಗವಹಿಸದಿರಲು ಕಾರಣವೇನು?
ಈ ವರ್ಷ ಅದೇ ರೀತಿ ಶೃಂಗಸಭೆಯನ್ನು ರಷ್ಯಾ ಆಯೋಜಿಸುತ್ತಿದೆ. ಆದರೆ ಈಗ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಬಗ್ಗೆ ಅಸಮಾಧಾನವನ್ನು ಹೊಂದಿರುವ ಕಾರಣಕ್ಕೆ ಗೈರು ಹಾಜರಾಗುವ ನಿರೀಕ್ಷೆಗಳು ಹೆಚ್ಚಾಗಿವೆ. ಇದರ ಮಧ್ಯೆ 12ನೇ ತಿಂಗಳಾಗಿದ್ದರೂ ಶೃಂಗಸಭೆಯ ನಡೆಸುವ ಬಗ್ಗೆ ಯಾವುದೇ ದಿನಾಂಕವು ಘೋಷಣೆಯಾಗಿಲ್ಲ.
ಎರಡನೇ ಬಾರಿ ಭಾರತಕ್ಕೆ ಪುಟಿನ್ ವಿಸಿಟ್:
ಕಳೆದ ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಅದು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಅವರು ಭಾರತಕ್ಕೆ ನೀಡಿದ ಎರಡನೇ ಭೇಟಿ ಆಗಿತ್ತು. ಈ ಬೆಳವಣಿಗೆಯು ಭಾರತದ ಸಂಬಂಧವನ್ನು ರಷ್ಯಾ ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ಸಾರಿ ಹೇಳುವಂತಿತ್ತು. ಆದಾಗ್ಯೂ, ಉಕ್ರೇನ್ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದೊಂದಿಗಿನ ತನ್ನ ಸಂಬಂಧವನ್ನು ಮರು ಮೌಲ್ಯಮಾಪನ ಮಾಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಭಾರತದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಲೇ ಇವೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡ ನಿರ್ವಹಣೆ:
ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡವನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದೆ. ರಷ್ಯಾದೊಂದಿಗಿನ ತನ್ನ ಐತಿಹಾಸಿಕ ಸಂಬಂಧಗಳನ್ನು ಭಾರತವು ಒತ್ತಿ ಹೇಳಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಫೆಬ್ರವರಿಯಲ್ಲಿ ಶೇ.2ಕ್ಕಿಂತ ಕಡಿಮೆಯಿದ್ದ ತನ್ನ ಇಂಧನ ಆಮದನ್ನು ಅಕ್ಟೋಬರ್ನ ಹೊತ್ತಿಗೆ ಶೇ.22ಕ್ಕೆ ಹೆಚ್ಚಿಸಿತು. ಆದರೆ ಭಾರತದ ಹೆಚ್ಚುತ್ತಿರುವ ಅಸಮಾಧಾನದ ಸಂಕೇತವಾಗಿ ಸೆಪ್ಟೆಂಬರ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗಸಭೆಯ ಬದಿಯಲ್ಲಿ ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ದ್ವಿಪಕ್ಷೀಯ ಸಭೆಗಾಗಿ ಇಬ್ಬರೂ ಭೇಟಿಯಾದಾಗ ಇದು "ಯುದ್ಧದ ಯುಗವಲ್ಲ" ಎಂದು ಪ್ರಧಾನಿ ಮೋದಿ ಅಧ್ಯಕ್ಷ ಪುಟಿನ್ಗೆ ಹೇಳಿದರು. .
ಮೋದಿ ಹೇಳಿಕೆಗೆ ಜಾಗತಿಕ ಮೆಚ್ಚುಗೆ:
ಇದು "ಯುದ್ಧದ ಯುಗವಲ್ಲ" ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಸ್ವಾಗತಿಸಿದವು. ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಉಲ್ಲೇಖವನ್ನು ಸಹ ಮಾಡಲಾಗಿತ್ತು, ಆದರೆ ಉಕ್ರೇನ್ ಅನ್ನು ಸಮಾಧಾನಪಡಿಸಲಿಲ್ಲ. "ನಮ್ಮ ದುಃಖದ ಕಾರಣದಿಂದ ನೀವು ಪ್ರಯೋಜನವನ್ನು ಪಡೆದರೆ, ನಿಮ್ಮ ಹೆಚ್ಚಿನ ಸಹಾಯವನ್ನು ನಮಗೆ ತಿಳಿಸುವುದು ಒಳ್ಳೆಯದು," ಎಂದು ಡಿಮಿಟ್ರೋ ಕುಲೆಬಾ ಹೇಳಿದರು.