ಭಾರತದ ಆಣತಿಯಂತೆ ಷರೀಫ್ ಸೇನೆ ವಿರುದ್ಧ ಕೆಲಸ ಮಾಡುತ್ತಿದ್ದಾರೆ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಅಕ್ಟೋಬರ್ 2: ಭಾರತದ ಆಣತಿಯಂತೆ ಪಾಕಿಸ್ತಾನದ ಪ್ರಬಲ ಮಿಲಿಟರಿ ಘಟಕವನ್ನು ಗುರಿಯನ್ನಾಗಿಸುವ ಮೂಲಕ ಮಾಜಿ ಪ್ರಧಾನಿ ನವಾಜ್ ಷರೀಫ್ ಅಪಾಯಕಾರಿ ಆಟವಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್, 2018ರ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅಧಿಕಾರಕ್ಕೆ ಬರಲು ಪ್ರಭಾವಶಾಲಿ ಸೇನೆಯು ರಾಜಕೀಯ ಹಸ್ತಕ್ಷೇಪ ನಡೆಸಿ, ಮತಗಳನ್ನು ಕಸಿದುಕೊಂಡಿತ್ತು ಎಂದು ಆರೋಪಿಸಿದ್ದರು.
ಲಂಡನ್ನಿಂದ ವಿಡಿಯೋ ಭಾಷಣ ಮಾಡಿದ್ದ ಷರೀಫ್, ದೇಶದ ಆಡಳಿತವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಅಂದಾಜೇ ಇಲ್ಲ ಅಸಮರ್ಥ ಹುಚ್ಚನನ್ನು ಆಯ್ಕೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಗುರುವಾರ ಪಾಕಿಸ್ತಾನದ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್, 'ನವಾಜ್ ಷರೀಫ್ ಬಹಳ ಅಪಾಯಕಾರಿ ಆಟವಾಡುತ್ತಿದ್ದಾರೆ. ಅಲ್ತಾಫ್ ಹುಸೇನ್ ಕೂಡ ಇದೇ ರೀತಿಯ ಆಟವಾಡಿದ್ದರು. ನನಗೆ ಶೇ 100ರಷ್ಟು ಖಾತರಿಯಿದೆ, ಷರೀಫ್ಗೆ ಭಾರತ ಸಹಾಯ ಮಾಡುತ್ತಿದೆ' ಎಂದ ಆರೋಪಿಸಿದ್ದಾರೆ.
ತಮ್ಮ ಸರ್ಕಾರ ಮತ್ತು ಸೇನೆಯು ಇತಿಹಾಸದಲ್ಲಿಯೇ ಅತ್ಯುತ್ತಮವಾಗಿದೆ. ಏಕೆಂದರೆ ಪ್ರತಿ ಸಂಸ್ಥೆಗಳೂ ತಮ್ಮ ಪರಿಧಿಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಹೇಳಿದ್ದಾರೆ.
ತಾನು ಇನ್ನೇನು ಸತ್ತೇ ಹೋಗುತ್ತೇನೆ ಎಂದು ಜನರಿಗೆ ಎಲ್ಲಾ ರೀತಿಯ ಸುಳ್ಳುಗಳನ್ನು ಹೇಳುವ ಮೂಲಕ ನಾಚಿಕೆಯಿಲ್ಲದೆ ಸುಳ್ಳಿನ ಕಂತೆ ಬಿಚ್ಟಿಟ್ಟು ವಿದೇಶಕ್ಕೆ ಹೋಗಿ ಕುಳಿತಿದ್ದಾರೆ. ಷರೀಪ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸುವಂತೆ ಬ್ರಿಟನ್ ಸರ್ಕಾರಕ್ಕೆ ಕೇಳುತ್ತಿದ್ದೇವೆ. ಲಂಡನ್ನಲ್ಲಿ ವಿಭಿನ್ನ ಜನರನ್ನು ಭೇಟಿ ಮಾಡುತ್ತಿರುವ ಷರೀಫ್, ಸರ್ಕಾರದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications