ಶಾಂತಿಯ ಮಾತಾಡುವ ಪಾಕ್, ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಿದೆ; ಭಾರತ
ನ್ಯೂಯಾರ್ಕ್, ಅಕ್ಟೋಬರ್ 05: ವಿಶ್ವ ಸಂಸ್ಥೆಯ ತತ್ವಗಳನ್ನು ಪರಿಗಣಿಸದೇ ಪಾಕಿಸ್ತಾನ ಪದೇ ಪದೇ ಗಡಿಯಲ್ಲಿನ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಭಾರತ ಪಾಕಿಸ್ತಾನದ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸೋಮವಾರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಕಾರ್ಯಾಚರಣೆ ಸಲಹೆಗಾರ ಎ. ಅಮರನಾಥ್, 'ಪಾಕಿಸ್ತಾನದ ಪ್ರತಿನಿಧಿ ಇಲ್ಲಿ ಶಾಂತಿ, ಭದ್ರತೆ ಕುರಿತು ಮಾತನಾಡುತ್ತಾರೆ. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಒಸಾಮಾ ಬಿನ್ ಲಾಡೆನ್ನಂಥ ಜಾಗತಿಕ ಭಯೋತ್ಪಾದಕರನ್ನು ಹುತಾತ್ಮರೆಂಬಂತೆ ವೈಭವೀಕರಿಸುತ್ತಾರೆ' ಎಂದು ಟೀಕಿಸಿದರು.
ಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರ
ಪಾಕಿಸ್ತಾನ ಬಹುಪಕ್ಷೀಯ ವೇದಿಕೆಗಳಲ್ಲಿ ಯಾವಾಗಲೂ ಸುಳ್ಳು ಸುದ್ದಿ ಹರಡುವ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅವೆಲ್ಲವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮೂಹಿಕ ತಿರಸ್ಕಾರಕ್ಕೆ ಅರ್ಹವಾಗಿವೆ ಎಂದು ಹೇಳಿದರು.
'ಪಾಕಿಸ್ತಾನ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಸಂಬಂಧ ಭಾರತದ ವಿರುದ್ಧ ಹಲವು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ದೇಶದ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಅವು ಪ್ರತಿಕ್ರಿಯೆಗೆ ಅರ್ಹವಾದುವಲ್ಲ' ಎಂದು ಆರೋಪಿಸಿದರು.
'ಜಮ್ಮು ಹಾಗೂ ಕಾಶ್ಮೀರದ ಸಂಪೂರ್ಣ ಭೂಪ್ರದೇಶವು ಭಾರತದ ಅವಿಭಾಜ್ಯ ಹಾಗೂ ಎಂದಿಗೂ ಬೇರ್ಪಡಿಸಲಾಗದ ಭಾಗ ಎಂಬುದನ್ನು ನಾನು ಪುನರುಚ್ಚರಿಸುತ್ತಿದ್ದೇನೆ. ಇದು ಪಾಕಿಸ್ತಾನದ ಅಕ್ರಮ ಆಕ್ರಮಿತ ಪ್ರದೇಶಗಳನ್ನು ಒಳಗೊಂಡಿದೆ. ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಿ' ಎಂದು ಮತ್ತೊಮ್ಮೆ ಭಾರತೀಯ ರಾಜತಾಂತ್ರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನ ವಿಚಾರ ಪ್ರಸ್ತಾಪಿಸಿ ಎಚ್ಚರಿಕೆ ನೀಡಿದ ಮೋದಿ
ಅಂತರರಾಷ್ಟ್ರೀಯ ಸಮುದಾಯದ ಮೇಲೆ ಪರಿಣಾಮ ಬೀರುವ ನಿಶ್ಶಸ್ತ್ರೀಕರಣ, ಜಾಗತಿಕ ಸವಾಲುಗಳು ಹಾಗೂ ಶಾಂತಿಗೆ ಧಕ್ಕೆ ತರುವಂಥ ಅಂಶಗಳ ಮೇಲೆ ಮೊದಲ ಸಮಿತಿಯು ಬೆಳಕು ಚೆಲ್ಲಲಾಯಿತು. ಅಂತರರಾಷ್ಟ್ರೀಯ ಭದ್ರತೆಯಲ್ಲಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಯಿತು.
ಈಚೆಗಷ್ಟೆ ವಿಶ್ವ ಸಂಸ್ಥೆ ಸಭೆಯಲ್ಲಿ ಭಾರತೀಯ ಪ್ರತಿನಿಧಿ ಸ್ನೇಹಾ ದುಬೇ, ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದ್ದರು.
'ಪಾಕಿಸ್ತಾನದ ನಾಯಕರು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರು ಉಚಿತ ಪಾಸ್ನೊಂದಿಗೆ ಓಡಾಡಿಕೊಂಡಿರುವ ದೇಶವನ್ನು ದುಃಖಕರ ಸ್ಥಿತಿಯಂತೆ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುವುದು ಕೂಡ ಇದೇ ಮೊದಲಲ್ಲ' ಎಂದು ಹೇಳಿದ್ದರು.
ರಾಷ್ಟ್ರವ್ಯಾಪಿ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವುದು, ತರಬೇತಿ ನೀಡುವುದು, ಹಣಕಾಸು ಒದಗಿಸುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಒದಗಿಸುವ ವಿಷಯದಲ್ಲಿ ಜಾಗತಿಕವಾಗಿ ಗುರುತಿಸಲಾದ ದೇಶ ಪಾಕಿಸ್ತಾನ ಎಂಬುದು ಎಲ್ಲಾ ಸದಸ್ಯ ದೇಶಗಳಿಗೆ ತಿಳಿದಿದೆ. ಆದರೂ ನನ್ನ ದೇಶದ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ಮಾಡುತ್ತಲೇ ಇದ್ದಾರೆ. ಪಾಕಿಸ್ತಾನ ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತಕ್ಷಣವೇ ಹಿನ್ನಡೆಯಬೇಕು ಎಂದು ನಾವು ಹೇಳುತ್ತೇವೆ' ಎಂದು ದೃಢವಾದ ಸಂದೇಶ ರವಾನಿಸಿದ್ದರು.
ಈಚೆಗೆ ಪ್ರಧಾನಿ ಮೋದಿ ಕೂಡ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ರಾಜಕೀಯ ಷಡ್ಯಂತ್ರಗಳಿಗೆ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು ಎಂದು ಪಾಕಿಸ್ತಾನ ಹಾಗೂ ಚೀನಾದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅಫ್ಘಾನ್ ನೆಲ ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದರು.
ಯಾವ ದೇಶ ಭಯೋತ್ಪಾದನೆಯನ್ನು ರಾಜಕೀಯ ಗಾಳವಾಗಿ ಬಳಸುತ್ತಿದೆಯೋ ಆ ದೇಶಕ್ಕೆ ಭಯೋತ್ಪಾದನೆಯೇ ಅಪಾಯವಾಗಿ ಪರಿಣಮಿಸಲಿದೆ ಎನ್ನುವುದನ್ನು ಮರೆಯಬಾರದು. ಹೀಗಾಗಿ ಅಫ್ಘಾನಿಸ್ತಾನದ ನೆಲದಲ್ಲಿ ಯಾವುದೇ ಭಯೋತ್ಪಾದನೆ ಚಟುವಟಿಕೆಗಳು ನಡೆಯದಂತೆ ಹಾಗೂ ಭಯೋತ್ಪಾದನಾ ದಾಳಿಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಮೋದಿ ಹೇಳಿದ್ದರು. ಇದೀಗ ಸೋಮವಾರ ಮತ್ತೊಮ್ಮೆ ಪಾಕ್ಗೆ ಎಚ್ಚರಿಕೆ ರವಾನಿಸಲಾಗಿದೆ.