ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಮಗಳು ಮರ್ಯಾಮ್ ಬಂಧನ
Recommended Video
ಲಾಹೋರ್ (ಪಾಕಿಸ್ತಾನ), ಜುಲೈ 13: ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಮಗಳು ಮರ್ಯಾಮ್ ನವಾಜ್ ರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ (ಎನ್ ಎಬಿ) ಅಧಿಕಾರಿಗಳು ಶುಕ್ರವಾರ ರಾತ್ರಿ ಇಲ್ಲಿನ ಅಲ್ಮಾ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದರು.
ಆ ನಂತರ ಇಸ್ಲಾಮ್ ಬಾದ್ ಗೆ ಸಣ್ಣ ಚಾರ್ಟರ್ಡ್ ವಿಮಾನದಲ್ಲಿ ಇಬ್ಬರನ್ನೂ ಕರೆದೊಯ್ಯಲಾಯಿತು. ಇಸ್ಲಾಮ್ ಬಾದ್ ನಲ್ಲಿ ನವಾಜ್ ಹಾಗೂ ಮರ್ಯಮ್ ರನ್ನು ಅದಿಯಾಲಾ ಅಥವಾ ಅಟೋಕ್ ಜೈಲಿಗೆ ಕರೆದೊಯ್ಯಲಾಗುತ್ತದೆ. ಲಂಡನ್ ನಿಂದ ತೆರಳಿದ್ದ ಅವರಿಬ್ಬರು ಅಬುಧಾಬಿಯಿಂದ ಲಾಹೋರ್ ಗೆ ಹೊರಡುವ ಹೊತ್ತಿಗೆ ಪಾಕಿಸ್ತಾನದ ಸಮಯ ಸಂಜೆ ಆರು ಗಂಟೆ ಆಗಿತ್ತು.
ಪಾಕ್ ಚುನಾವಣೆ ಸಭೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ 85 ಮಂದಿ ಸಾವು
ನಿರೀಕ್ಷೆ ಪ್ರಕಾರ ನವಾಜ್ ಹಾಗೂ ಮರ್ಯಾಮ್ ಸಂಜೆ 6.15ಕ್ಕೆ ಲಾಹೋರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ ಮೂರು ಗಂಟೆ ತಡವಾಗಿ (ರಾತ್ರಿ 8.45ಕ್ಕೆ) ವಿಮಾನ ಲಾಹೋರ್ ತಲುಪಿತು. ಮಾಹಿತಿ ಪ್ರಕಾರ, ಹತ್ತಾರು ಮಂದಿ ರಕ್ಷಣಾ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿದ್ದಾರೆ. ಉಳಿದ ಪ್ರಯಾಣಿಕರಿಗೆ ತೆರಳುವಂತೆ ಸೂಚಿಸಿ, ಅಪ್ಪ-ಮಗಳ ಪಾಸ್ ಪೋರ್ಟ್ ವಶಕ್ಕೆ ಪಡೆದಿದ್ದಾರೆ.
ಹತ್ತು ಹಾಗೂ ಏಳು ವರ್ಷ ಜೈಲು ಶಿಕ್ಷೆ
ಉತ್ತರಾದಾಯಿತ್ವ (ಅಕೌಂಟಬಿಲಿಟಿ) ಕೋರ್ಟ್ ನಲ್ಲಿ ನವಾಜ್ ಹಾಗೂ ಮರ್ಯಾಮ್ ಗೆ ಅವೆನ್ ಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಕ್ರಮವಾಗಿ ಹತ್ತು ಹಾಗೂ ಏಳು ವರ್ಷ ಜೈಲು ಶಿಕ್ಷೆಯಾಗಿದೆ. ಗಳಿಕೆ ಮೀರಿ ಆಸ್ತಿ ಸಂಪಾದಿಸಿದ ಅಪರಾಧ ಪ್ರಕರಣ ನವಾಜ್ ಷರೀಫ್ ಮೇಲಿದೆ. ತಂದೆ ತಪ್ಪಿಗೆ ಪ್ರೋತ್ಸಾಹ ನೀಡಿದ ಹಾಗೂ ಸಹಕರಿಸಿದ, ತಪ್ಪನ್ನು ಮುಚ್ಚಿಹಾಕಲು ಪಿತೂರಿ ಮಾಡಿದ ಅಪರಾಧ ಮರ್ಯಾಮ್ ಮೇಲೆ ಹೊರಿಸಲಾಗಿದೆ.ಕೋರ್ಟ್ ತೀರ್ಪು ಬಂದ ನಂತರ, ಪಾಕಿಸ್ತಾನಕ್ಕೆ ಹಿಂತಿರುಗುವುದಾಗಿ ಮತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ನವಾಜ್ ಷರೀಫ್ ಹಾಗೂ ಮರ್ಯಾಮ್ ಹೇಳಿದ್ದರು. ಅಂದಹಾಗೆ ಅಪ್ಪ-ಮಗಳು ತಮ್ಮ ಪಾಲಿನ ಶಿಕ್ಷೆಯನ್ನು ಅದಿಯಾಲ ಜೈಲಿನಲ್ಲಿ ಕಳೆಯಬೇಕಾಗಬಹುದು. ಅದಕ್ಕೆ ಎಲ್ಲ ಸಿದ್ಧತೆ ನಡೆದಿದೆ.
ವಿಮಾನ ನಿಲ್ದಾಣಕ್ಕೆ ತೆರಳದಂತೆ ಬಂದೋಬಸ್ತ್
ನವಾಜ್ ಷರೀಫ್ ಹಾಗೂ ಮರ್ಯಾಮ್ ಸ್ವಾಗತಕ್ಕೆ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರು ಲಾಹೋರ್ ನಲ್ಲಿ ಭಾರೀ ಸಿದ್ಧತೆ ನಡೆಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ತೆರಳದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ವತಃ ನವಾಜ್ ಷರೀಫ್ ಸೋದರ ಶಬಾಜ್ ಷರೀಫ್ ಕಾರ್ಯಕರ್ತರ ಗುಂಪಿನ ನೇತೃತ್ವ ವಹಿಸಿದ್ದರು. ಅಬುಧಾಬಿಯಲ್ಲಿ ಫೋನ್ ಮೂಲಕ ವಿವಿಧ ಮಾಧ್ಯಮಗಳ ಜತೆ ಮಾತನಾಡಿದ ನವಾಜ್ ಷರೀಫ್, ವಿಮಾನ ಏಕೆ ತಡವಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಎಂದೂ ತಡವಾಗದ ವಿಮಾನ ಇಂದೇಕೆ ತಡವಾಗಿದೆ ಎಂದರು.
ಪಾಕಿಸ್ತಾನದ ಹಣೆಬರಹ ಬದಲಾಗಬೇಕಿದೆ
ಇಂಥ ಉದ್ವಿಗ್ನ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಮರಳುವುದು ಒಳ್ಳೆ ಆಲೋಚನೆಯೇ ಎಂದು ಕೇಳಿದ ಪ್ರಶ್ನೆಗೆ, ದೇಶದಲ್ಲಿ ಎಂಥ ಸ್ಥಿತಿ ಇದೆ ಅಂತ ನನಗೆ ಗೊತ್ತಿದೆ. ನನಗೆ ಹತ್ತು ವರ್ಷ ಹಾಗೂ ಮರ್ಯಾಮ್ ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ದೇಶದ ಹಣೆಬರಹ ಬದಲಾಗಬೇಕಿದೆ. ಅದಕ್ಕೆ ನಾವು ವಾಪಸ್ ಆಗ್ತಿದ್ದೇವೆ. ನಾವು ಇದನ್ನು ಬದಲಿಸಬೇಕು ಎಂದು ಉತ್ತರಿಸಿದ್ದಾರೆ.
ನನಗೇನೂ ಹೆದರಿಕೆ ಇಲ್ಲ
ನನಗೇನೂ ಹೆದರಿಕೆ ಇಲ್ಲ. ಹಾಗಿದ್ದರೆ ನಾನೇಕೆ ವಾಪಸ್ ಬರ್ತಿದ್ದೆ? ಈ ದೇಶ ಕ್ಲಿಷ್ಟ ಪರಿಸ್ಥಿತಿಯಲ್ಲಿದೆ. ನನ್ನಿಂದ ಏನು ಮಾಡಲು ಸಾಧ್ಯವೋ ಅದು ಮಾಡಿದೆ. ನನಗೆ ಗೊತ್ತು ಹತ್ತು ವರ್ಷ ಜೈಲು ಶಿಕ್ಷೆ ಆಗಿದೆ. ಪಾಕಿಸ್ತಾನಕ್ಕೆ ಬರುತ್ತಿದ್ದಂತೆ ಸೀದಾ ಜೈಲಿಗೇ ಕರೆದುಕೊಂಡು ಹೋಗ್ತಾರೆ. ಆದರೆ ಪಾಕಿಸ್ತಾನಿ ಜನರಿಗೆ ಗೊತ್ತಾಗಬೇಕು, ನಾನು ಇದೆಲ್ಲ ಅವರಿಗಾಗಿ ಮಾಡಿದೆ ಎಂದಿದ್ದಾರೆ ನವಾಜ್ ಷರೀಫ್.