ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಪಾಕ್ ಮುಂದಿರುವ ಪ್ರಶ್ನೆಗಳು
ಇಸ್ಲಾಮಾಬಾದ್, ನ.03: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿಯಾಗಿದೆ. ಕಾಲಿಗೆ ಗುಂಡು ತಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದಿದ್ದೇನು?. ಗುಂಡು ಹಾರಿಸಿ ಬಂಧನಕ್ಕೆ ಒಳಗಾಗಿರುವ ಆರೋಪಿ ಹೇಳಿದ್ದೇನು? ಜೊತೆಗೆ ಪಾಕಿಸ್ತಾನದಲ್ಲಿ ಮುಂದೇನಾಗಲಿದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧದ "ಲಾಂಗ್ ಮಾರ್ಚ್" ಭಾಗವಾಗಿ 70 ವರ್ಷದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಹೊಸ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಟ್ರಕ್ ಮೇಲೆ ನಿಂತಿದ್ದಾಗ ಶೂಟರ್ ಗುಂಡು ಹಾರಿಸಿದ್ದಾನೆ. ಆರೋಪಿ ಶೂಟರ್ನನ್ನು ಬಂಧಿಸಲಾಗಿದೆ. ನಾನು ಇಮ್ರಾನ್ ಖಾನ್ರನ್ನು ಕೊಲ್ಲಲು ಬಂದಿದೆ ಎಂದು ಬಂಧಿತ ಹೇಳಿಕೆ ನೀಡಿದ್ದಾರೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಚಾನೆಲ್ ಜಿಯೋ ನ್ಯೂಸ್ ವರದಿ ಮಾಡಿದೆ.

ಮಾಜಿ ಪ್ರಧಾನಿ ಬಲಗಾಲಿಗೆ ತಾಗಿದ ಗುಂಡು
ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಮ್ರಾನ್ ಖಾನ್ ಅವರ ಪ್ರತಿಭಟನಾ ರ್ಯಾಲಿಯಲ್ಲಿ ಅಪರಿಚಿತ ಬಂದೂಕುಧಾರಿಯು ಮಾಜಿ ಪ್ರಧಾನಿಯನ್ನು ಕರೆದುಕೊಂಡು ಹೋಗುತ್ತಿದ್ದ ಟ್ರಕ್ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಅವರಿಗೆ ಬುಲೆಟ್ ತಾಗಿದ್ದು, ಖಾನ್ ಅವರ ಬಲಗಾಲಿಗೆ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಪ್ರಕಾರ ಇತರ ಮೂವರು ನಾಯಕರು ಗಾಯಗೊಂಡಿದ್ದಾರೆ.

ಜನರನ್ನು ದಿಕ್ಕು ತಪ್ಪಿಸುತ್ತಾರೆ ಎಂದ ಗುಂಡು ಹಾರಿಸಿ ಆರೋಪಿ
ಇಮ್ರಾನ್ ಖಾನ್ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಹೀಗಾಗಿ ಅವರನ್ನು ಕೊಲ್ಲಲು ಬಂದಿದ್ದೇನೆ. ಎಂದು ಗುಂಡು ಹಾರಿಸಿದ ಆರೋಪಿ ಹೇಳಿದ್ದಾನೆ.
ಲಾಹೋರ್ನಿಂದ 70 ಕಿಮೀ ದೂರದಲ್ಲಿರುವ ಗುಜ್ರಾನ್ವಾಲಾ ಬಳಿಯ ವಜೀರಾಬಾದ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಲಿಗೆ ಗಾಯವಾಗಿರುವ ಇಮ್ರಾನ್ ಖಾನ್ ಅಪಾಯದಿಂದ ಪಾರಾಗಿದ್ದಾರೆ.
"ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೇನೆ. ಅವರು ಜನರನ್ನು ದಾರಿ ತಪ್ಪಿಸುತ್ತಿದ್ದರಿಂದ ನಾನು ಹೀಗೆ ಮಾಡಿದ್ದೇನೆ. ನನಗೆ ಇದನ್ನು ಸಹಿಸಲಾಗಲಿಲ್ಲ. ಅವರು ರ್ಯಾಲಿ ಪ್ರಾರಂಭಿಸಿದ ದಿನವೇ ನಾನು ಕೊಲೆ ಮಾಡಲು ನಿರ್ಧರಿಸಿದ್ದೆ. ನಾನು ಏಕಾಂಗಿ, ನನ್ನ ಹಿಂದೆ ಯಾರೂ ಇರಲಿಲ್ಲ" ಎಂದು ಆರೋಪಿ ಹೇಳಿದ್ದು, ಪೊಲೀಸರು ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.

ಪ್ರತಿಭಟನಾ ರ್ಯಾಲಿ ನಡೆಸಲು ಕಾರಣವೇನು?
ಪಂಜಾಬ್ನ ವಜೀರಾಬಾದ್ನ ಅಲ್ಲಾವಾಲಾ ಚೌಕ್ ಬಳಿ ಈ ಘಟನೆ ನಡೆದಿದೆ. ಲಾಹೋರ್ನಿಂದ ಅಕ್ಟೋಬರ್ 28 ರಂದು ಲಾಂಗ್ ಮಾರ್ಚ್ ಪ್ರಾರಂಭವಾಗಿದ್ದು, ನವೆಂಬರ್ 4 ರಂದು ರಾಜಧಾನಿ ಇಸ್ಲಾಮಾಬಾದ್ ಅನ್ನು ತಲುಪುವ ನಿರೀಕ್ಷೆಯಿದೆ. ಒಂದು ವಾರದ ಅವಧಿಯಲ್ಲಿ ಸುಮಾರು 380 ಕಿ.ಮೀ. ತಲುಪುತ್ತಿದೆ.
ಈ ಪ್ರತಿಭಟನಾ ರ್ಯಾಲಿಯನ್ನು ಪಾಕಿಸ್ತಾನದ ದೊಡ್ಡ ಸ್ವಾತಂತ್ರ್ಯ ಚಳುವಳಿ ಎಂದು ಇಮ್ರಾನ್ ಖಾನ್ ಹೇಳಿದ್ದು, ತಕ್ಷಣವೇ ಚುನಾವಣೆಗಳನ್ನು ಘೋಷಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ಮೆರವಣಿಗೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ವಿದೇಶಿ ನಾಯಕರಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಖಾನ್ ಅವರನ್ನು ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ.

ಪಾಕ್ನಲ್ಲಿ ಹೆಚ್ಚಾಗಲಿದೆ ರಾಜಕೀಯ ಕೆಸರೆರಚಾಟ
ದಾಳಿಯಲ್ಲಿ ಇಮ್ರಾನ್ಗೆ ಹೆಚ್ಚು ಗಾಯವಾಗಿಲ್ಲ ಎಂಬುದನ್ನು ಅವರ ಪಕ್ಷ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದಲ್ಲಿ ಇಮ್ರಾನ್ ಖಾನ್ ಮುಖದಲ್ಲಿ ನಗು ಕಾಣಿಸಿಕೊಂಡಿತುದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.
ಆದರೆ ಈ ದಾಳಿಯು ಪಾಕಿಸ್ತಾನದಲ್ಲಿ ಈಗಾಗಲೇ ಇರುವ ಘರ್ಷಣೆಯನ್ನು ಅಪಾಯಕಾರಿಯಾಗಿ ಹೆಚ್ಚಿಸಲಿದೆ. ಹೊಸ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಲಿದ್ದಾರೆ. ಈ ಘಟನೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳಲಿದ್ದಾರೆ.
ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗಬಹುದು ಎನ್ನಲಾಗಿದೆ.












Click it and Unblock the Notifications