Operation Ajay; ಇಸ್ರೇಲ್ನಿಂದ ಹೊರಟ ಭಾರತೀಯರು ಇರುವ 4ನೇ ವಿಮಾನ
ನವದೆಹಲಿ, ಅಕ್ಟೋಬರ್ 15; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗ ಮುಂದುವರೆದಿದೆ. ಇಸ್ರೇಲ್ ದಾಳಿಯಲ್ಲಿ ಇದುವರೆಗೂ 2,200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ ಇಸ್ರೇಲ್ನ 1,300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ 'ಆಪರೇಷನ್ ಅಜಯ್' ಹೆಸರಿನ ಕಾರ್ಯಾಚರಣೆ ಆರಂಭಿಸಿದೆ.
ಶನಿವಾರ ಇಸ್ರೇಲ್ನಿಂದ 235 ಭಾರತೀಯರು ಇದ್ದ 2ನೇ ವಿಮಾನ ನವದೆಹಲಿಗೆ ಆಗಮಿಸಿತ್ತು. ಭಾನುವಾರ ಬೆಳಗ್ಗೆ 197 ಭಾರತೀಯರು ಇದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಯಿತು. ಕೇಂದ್ರ ಸಚಿವ ಕುಶಾಲ್ ಕಿಶೋರ್ ವಿಮಾನದಲ್ಲಿ ಬಂದವರನ್ನು ಸ್ವಾಗತಿಸಿದರು.

ಭಾನುವಾರ ಬೆಳಗ್ಗೆ ಇಸ್ರೇಲ್ನ ಟೆಲ್ ಅವೀವ್ನಿಂದ 274 ಭಾರತೀಯರು ಇರುವ 4ನೇ ವಿಮಾನ ಹೊರಟಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಈ ಮೂಲಕ 'ಆಪರೇಷನ್ ಅಜಯ್' ಅಡಿ ನಾಲ್ಕು ವಿಮಾನಗಳು ಇಸ್ರೇಲ್ನಿಂದ ಭಾರತಕ್ಕೆ ಆಗಮಿಸುತ್ತಿದೆ.
ಗುರುವಾರ ಕಾರ್ಯಾಚರಣೆ; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗದ ಬಳಿಕ ಭಾರತ ಸರ್ಕಾರ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು 'ಆಪರೇಷನ್ ಅಜಯ್' ಹೆಸರಿನ ರಕ್ಷಣಾ ಕಾರ್ಯಾಚರಣೆಯನ್ನು ಗುರುವಾರ ಆರಂಭಿಸಿತ್ತು.
ಮೊದಲ ತಂಡದಲ್ಲಿ 212 ಭಾರತೀಯರು ದೇಶಕ್ಕೆ ಆಗಮಿಸಿದ್ದರು. ಅವರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದರು. ಈ ತಂಡದಲ್ಲಿ ಐದು ಜನ ಕರ್ನಾಟಕ ಮೂಲದವರು ಸಹ ಇಸ್ರೇಲ್ನಿಂದ ಭಾರತಕ್ಕೆ ವಾಪಸ್ ಆಗಿದ್ದರು. ಭಾನುವಾರ 4ನೇ ವಿಮಾನ ಟೆಲ್ ಅವೀವ್ನಿಂದ ಹೊರಟಿದೆ.
ವಿಶ್ವಸಂಸ್ಥೆ ಕಳವಳ; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಉತ್ತರ ಗಾಜಾದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಇವರು 24 ಗಂಟೆಯೊಳಗೆ ಸ್ಥಳಾಂತರವಾಗಬೇಕು ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, "ಈ ಎಚ್ಚರಿಕೆ ಅತ್ಯಂತ ಕಳವಳಕಾರಿಯಾಗಿದೆ. ಯುದ್ಧಗಳು ಸಹ ನಿಯಮಗಳನ್ನು ಒಳಗೊಂಡಿರುತ್ತದೆ. 24 ತಾಸಿನೊಳಗೆ ಲಕ್ಷಾಂತರ ಜನರು ಸ್ಥಳಾಂತರ ಮಾಡುವುದು ಕಷ್ಟಸಾಧ್ಯ" ಎಂದು ಹೇಳಿದ್ದಾರೆ.
ಇಸ್ರೇಲ್ ನೀಡಿರುವ ಎಚ್ಚರಿಕೆ ಪ್ರಕಾರ 24 ಗಂಟೆಯಲ್ಲಿ 10 ಲಕ್ಷ ಜನರನ್ನು ದಕ್ಷಿಣ ಗಾಜಾಕ್ಕೆ ಸ್ಥಳಾಂತರ ಮಾಡಬೇಕು. ಶಾಲೆ, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಸಹ ಇದು ಅನ್ವಯವಾಗಲಿದೆ ಎಂದು ಹೇಳಿದೆ. ಆದರೆ ವಸತಿ, ನೀರು, ಆಹಾರ ವ್ಯವಸ್ಥೆ ಇಲ್ಲದೇ ಇಷ್ಟು ಜನರನ್ನು ಸ್ಥಳಾಂತರ ಮಾಡುವುದು ಅಸಾಧ್ಯ ಎಂದು ವಿಶ್ವಸಂಸ್ಥೆ ಹೇಳಿದೆ.
ಏರ್ ಇಂಡಿಯಾ ವಿಮಾನ ಸ್ಥಗಿತ; ಕಳೆದ ಶನಿವಾರ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಕಾಳಗ ಆರಂಭವಾಯಿತು. ಭಾರತದ ಏರ್ ಇಂಡಿಯಾ ಇಸ್ರೇಲ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಅಕ್ಟೋಬರ್ 14ರ ತನಕ ಸ್ಥಗಿತಗೊಳಿಸಿ ಭಾನುವಾರ ಆದೇಶಿಸಿತು.
ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣ ಇಸ್ರೇಲ್ ರಾಜಧಾನಿ ಟೆಲ್ ಅವೀವ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನವನ್ನು ಅಕ್ಟೋಬರ್ 14ರ ತನಕ ರದ್ದುಗೊಳಿಸಲಾಗಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ 2023ರ ಅಕ್ಟೋಬರ್ 14ರ ತನಕ ಟೆಲ್ ಅವೀವ್ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಏರ್ ಇಂಡಿಯಾ ಹೇಳಿತ್ತು.












Click it and Unblock the Notifications