ಓಮಿಕ್ರಾನ್ ಮಕ್ಕಳಿಗೆ ಹೆಚ್ಚು ಅಪಾಯಕಾರಿಯೇ?: WHO ವಿಜ್ಞಾನಿ ಹೇಳಿದ್ದಿಷ್ಟು..
ಕೊರೊನಾ ವೈರಸ್ನ ಹೊಸ ರೂಪಾಂತರ ಓಮಿಕ್ರಾನ್ ಮೊದಲ ಬಾರಿಗೆ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳ ಬಗ್ಗೆ ಅಧಿಕ ಆತಂಕ ಮೂಡುತ್ತಿರುವ ನಡುವೆ ಡೆಲ್ಟಾಗಿಂತ ಅಧಿಕ ಸಾಂಕ್ರಾಮಿಕ ಎಂದು ಹೇಳಲಾಗುವ ಈ ಓಮಿಕ್ರಾನ್ ಮಕ್ಕಳಿಗೆ ಅಪಾಯಕಾರಿಯೇ ಎಂಬ ಪ್ರಶ್ನೆಯು ಉದ್ಭವಿಸಿದೆ. ಕೊರೊನಾ ವೈರಸ್ ಸೋಂಕು ಬಂದವರಿಗೆ ಓಮಿಕ್ರಾನ್ ಮತ್ತೆ ತಗುಲುವ ಸಾಧ್ಯತೆಗಳು ಅಧಿಕ ಎಂದು ಕೂಡಾ ಹೇಳಲಾಗುತ್ತಿದೆ.
ಈ ಬಗ್ಗೆ ಸೋಮವಾರ ಪ್ರಮುಖ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್, "ಈ ಓಮಿಕ್ರಾನ್ ಸೋಂಕಿಗೆ ಮಕ್ಕಳು ಹಾಗೂ ಲಸಿಕೆ ಹಾಕದವರು ಅಧಿಕವಾಗಿ ಬಲಿಯಾಗುತ್ತಾರೆ," ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
'ಓಮಿಕ್ರಾನ್' ಭಾರತಕ್ಕೆ ಎಚ್ಚರಿಕೆ ಗಂಟೆಯಾಗಬಹುದು; ಸೌಮ್ಯ
ಮಕ್ಕಳಿಗೆಯೂ ಕೊರೊನಾ ಲಸಿಕೆಯನ್ನು ನೀಡುವ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿದ ಡಾ. ಸೌಮ್ಯ ಸ್ವಾಮಿನಾಥನ್, "ಕೆಲವು ದೇಶಗಳು ಈಗಾಗಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವುದನ್ನು ಆರಂಭ ಮಾಡಿದೆ. ಇನ್ನು ಕೆಲವು ದೇಶಗಳು ಇನ್ನೂ ಕೂಡಾ ಮಕ್ಕಳಿಗೆ ಲಸಿಕೆಯನ್ನು ನೀಡುವ ಕಾರ್ಯವನ್ನು ಆರಂಭ ಮಾಡಿಲ್ಲ. ನಾವು ಮಕ್ಕಳ ಮೇಲೆ ಓಮಿಕ್ರಾನ್ ರೂಪಾಂತರದ ಪ್ರಭಾವವನ್ನು ತೀರ್ಮಾನಿಸಲು ಡೇಟಾಕ್ಕಾಗಿ ಕಾಯುತ್ತಿದ್ದೇವೆ," ಎಂದು ಹೇಳಿದರು. ಹಾಗೆಯೇ
ಕೊರೊನಾ ವೈರಸ್ ಈಗಾಗಲೇ ತಗುಲಿರುವ ಜನರಿಗೆ 90 ದಿನಗಳ ಬಳಿಕ ಡೆಲ್ಟಾಗಿಂತ ಓಮಿಕ್ರಾನ್ ತಗುಲುವ ಸಾಧ್ಯತೆಯು ಮೂರು ಪಟ್ಟು ಅಧಿಕವಾಗಿದೆ. ಈ ನಡುವೆ ನಾವು ಈಗಲೂ ಮಕ್ಕಳಿಗೆ ಓಮಿಕ್ರಾನ್ ಹೆಚ್ಚು ಪರಿಣಾಮ ಬೀರುತ್ತದೆಯೇ ಎಂದು ಸಂಶೋಧನೆ ಮಾಡುವುದರಲ್ಲೇ ತೊಡಗಿದ್ದೇವೆ," ಎಂದು ತಿಳಿಸಿದ್ದಾರೆ.
"ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣಗಳು ಓಮಿಕ್ರಾನ್ ರೂಪಾಂತರದೊಂದಿಗೆ ವೇಗವಾಗಿ ಏರುತ್ತಿದೆ. ಆ ದೇಶದಲ್ಲಿ ಹೆಚ್ಚಿನ ಮಕ್ಕಳು ಈ ರೂಪಾಂತರದ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಅಧಿಕ ಓಮಿಕ್ರಾನ್ ಪ್ರಕರಣಗಳು ಕೂಡಾ ದಾಖಲು ಆಗುತ್ತಿದೆ," ಎಂದು ತಿಳಿಸಿದರು.
"ಕೊರೊನಾವೈರಸ್ ಹಾಗೂ ಅದರ ರೂಪಾಂತರ ಓಮಿಕ್ರಾನ್ ಬಗ್ಗೆ ಆಧಿಕ ಡೇಟಾವು ನಮಗೆ ಬೇಕಾಗಿದೆ. ಈ ಡೇಟಾವನ್ನು ನಮಗೆ ಒದಗಿಸುವ ದೇಶಗಳನ್ನು ನಾವು ಬೆಂಬಲಿಸಬೇಕಾಗಿದೆ. ಯಾವುದೇ ಸಾಕ್ಷ್ಯಗಳು ಇಲ್ಲದೆ ಅಂದಾಜು ಮಾಡಿ ಹೇಳುವುದನ್ನು ನಾವು ತಪ್ಪಿಸಬೇಕಾದರೆ ನಮಗೆ ಬೇರೆ ದೇಶಗಳ ನಡುವೆ ಸಂಘಟಿತ ಒಪ್ಫಂದ ಮಾಡುವ ಅಗತ್ಯವಿದೆ," ಎಂದರು.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಹೆಚ್ಚಳ: ಮಕ್ಕಳ ಆರೋಗ್ಯದ್ದೇ ಚಿಂತೆ
"ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ 90 ದಿನಗಳ ನಂತರ ಮರು ಸೋಂಕು ಡೆಲ್ಟಾಕಿಂತ ಓಮಿಕ್ರಾನ್ನಲ್ಲಿ ಮೂರು ಪಟ್ಟು ಅಧಿಕವಾಗಿದೆ. ಇದು ಆರಂಭದಲ್ಲೇ ತಿಳಿದು ಬಂದಿದೆ. ಇದರಿಂದಾಗಿ ಪ್ರಕರಣದ ಹೆಚ್ಚಳ ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣದ ಹೆಚ್ಚಳವು ಕೊಂಚ ವಿಳಂಬವಿದೆ. ಈ ಕಾಯಿಲೆ ಎಷ್ಟು ತೀವ್ರವಾಗಿದೆ ಎಂದು ತಿಳಿಯಲು ನಾವು ಆಸ್ಪತ್ರೆಗೆ ದಾಖಲಾದ ದರಗಳನ್ನು ಅಧ್ಯಯನ ಮಾಡಲು ಎರಡು ಮೂರು ವಾರಗಳವರೆಗೆ ಕಾಯಬೇಕು," ಎಂದು ಹೇಳಿದರು.
ಭಾರತಕ್ಕೆ ಎಚ್ಚರಿಕೆ ನೀಡಿದ್ದ ಸೌಮ್ಯ ಸ್ವಾಮಿನಾಥನ್
"ಕೋವಿಡ್ -19ನ ಹೊಸ ರೂಪಾಂತರವು ಭಾರತದಲ್ಲಿ ಕೋವಿಡ್ ಸೂಕ್ತ ನಡವಳಿಕೆ ಕುರಿತು ಎಚ್ಚರಿಸುವ ಕರೆಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕಿ ಡಾ. ಸೌಮ್ಯ ಸ್ವಾಮಿನಾಥನ್ ಈ ಹಿಂದೆ ಎಚ್ಚರಿಕೆ ನೀಡಿದ್ದರು. "ಕೋವಿಡ್ ವಿರುದ್ಧ ನಾವು ಜಾಗೃತವಾಗಿರಬೇಕು. ಮಾಸ್ಕ್ ಧರಿಸುವುದನ್ನು ಮುಂದುವರೆಸಬೇಕು. ಮಾಸ್ಕ್ ಧರಿಸುವುದು ನಮ್ಮ ಜೇಬಿನಲ್ಲಿ ಲಸಿಕೆಗಳು ಇದ್ದಂತೆ. ವಿಶೇಷವಾಗಿ ಒಳಾಂಗಣಗಳಲ್ಲಿ ಮಾಸ್ಕ್ ಧರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ" ಎಂದು ತಿಳಿಸಿದ್ದಾರೆ. "ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆದಿರುವುದು, ಗುಂಪು ಸೇರುವುದನ್ನು ತಡೆಯುವುದು, ಅನಿಯಮಿತ ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಓಮಿಕ್ರಾನ್ ವಿರುದ್ಧ ಹೋರಾಡಲು ವಿಜ್ಞಾನಿಗಳು ನೀಡಿರುವ ಸಲಹೆಗಳಾಗಿದೆ" ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
Recommended Video