ರಾಜಧಾನಿಯನ್ನೇ ಬದಲಿಸಿದ ಇಂಡೋನೇಷ್ಯಾ: ಏಕೆ ಈ ನಿರ್ಧಾರ? ಹೊಸ ರಾಜಧಾನಿಯ ವಿಶೇಷತೆ ಏನು? ಇಲ್ಲಿದೆ ಮಾಹಿತಿ
ನುಸಂತಾರಾ (ಇಂಡೋನೇಷ್ಯಾ), ಜನವರಿ 10: ಇಂಡೋನೇಷ್ಯಾವು ತನ್ನ ರಾಜಧಾನಿಯನ್ನು ಜಕಾರ್ತದಿಂದ ನುಸಂತಾರಾಕ್ಕೆ ಸ್ಥಳಾಂತರಿಸುತ್ತಿದೆ. ಜಾವಾ ದ್ವೀಪದಲ್ಲಿರುವ ಜಕಾರ್ತದಿಂದ ಸ್ಥಳಾಂತರಿಸುವ ಮಸೂದೆಯನ್ನು ಸಂಸತ್ತು ಈಗಾಗಲೇ ಅನುಮೋದಿಸಿದೆ. ಹೊಸ ರಾಜಧಾನಿಯು ಬೋರ್ನಿಯೊ ದ್ವೀಪದಲ್ಲಿದೆ. ಇದಕ್ಕೆ 'ನುಸಂತಾರಾ' ಎಂದು ಹೆಸರಿಸಲಾಗುವುದು.
ಬೊರ್ನಿಯೊ ದ್ವೀಪದ ಮೇಲೆ ಹೊಸ ರಾಜಧಾನಿಯನ್ನು ನಿರ್ಮಿಸುವ ಕಲ್ಪನೆಯನ್ನು ಅಧ್ಯಕ್ಷ ಜೋಕೊ ವಿಡೋಡೊ ಅವರು 2019 ರಲ್ಲಿ ಮೊದಲು ಪ್ರಸ್ತಾಪಿಸಿದರು. ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ಮಸೂದೆ ಅನುಮೋದನೆಗೆ ವಿಳಂಬವಾಯಿತು. ಪ್ರಸ್ತುತ ಜಕಾರ್ತಾ ಎದುರಿಸುತ್ತಿರುವ ಬೃಹತ್ ಪರಿಸರ ಸವಾಲುಗಳನ್ನು ನಿವಾರಿಸಲು ಮತ್ತು ಸಂಪತ್ತನ್ನು ಮರುಹಂಚಿಕೆ ಮಾಡಲು ಈ ಬದಲಾವಣೆಯು ಅವಶ್ಯವಾಗಿದೆ ಎಂದು ಜೋಕೊ ವಿಡೋಡೊ ಅಭಿಪ್ರಾಯಪಟ್ಟಿದ್ದಾರೆ.
ಏಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದ್ವೀಪವಾದ ಜಕಾರ್ತದಲ್ಲಿ ಪರಿಸರ ಸಮಸ್ಯೆಗಳು ಹೆಚ್ಚುತ್ತಿವೆ. ಅಂತರ್ಜಲವು ಅತಿಯಾಗಿ ಬಳಸಲ್ಪಟ್ಟಿದೆ. ಇದು ಕಲುಷಿತಗೊಂಡಿದ್ದು, ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದೆ. 10 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಈಗಿನ ರಾಜಧಾನಿ ಜಕಾರ್ತವು ಜಾವಾ ದ್ವೀಪದ ಜೌಗು ಭೂಮಿಯಲ್ಲಿದೆ. ರಾಜಧಾನಿ ಜಕಾರ್ತಾ ನಗರವು ಆರ್ಥಿಕ ಅಸಮಾನತೆಯನ್ನು ಅನುಭವಿಸುತ್ತಿದೆ ಎಂದು ವರದಿಯಾಗಿದೆ.
ಸುಮಾರು 11 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರದಲ್ಲಿ ವಾಯು ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ. ಜಕಾರ್ತಾದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದೆ. ಇದರಿಂದ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
2050 ರ ವೇಳೆಗೆ ನಗರದ ಹಲವು ಭಾಗಗಳು ಮುಳುಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ದೀರ್ಘಕಾಲದ ದಟ್ಟಣೆ, ಪ್ರವಾಹ ಮತ್ತು ವಾಯುಮಾಲಿನ್ಯ ಸೇರಿದಂತೆ ಜಕಾರ್ತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ಸರ್ಕಾರ ಆಶಿಸುತ್ತಿದೆ.
ಹೊಸ ಬಂಡವಾಳ ಹೂಡಿಕೆ ಮತ್ತು ಅದರ ಸವಾಲುಗಳು
ಬೋರ್ನಿಯೊ ದ್ವೀಪವು ಕೇವಲ 3.7 ಮಿಲಿಯನ್ ಜನರಿಗೆ ನೆಲೆಯಾಗಿದೆ. ಖನಿಜ-ಸಮೃದ್ಧವಾಗಿದೆ. ಪೂರ್ವ ಕಾಲಿಮಂಟನ್ ಕಾಡುಗಳು ಮತ್ತು ಒರಾಂಗುಟಾನ್ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಹೊಸ ರಾಜಧಾನಿ ರಾಷ್ಟ್ರದ ಗುರುತಿನ ಸಂಕೇತವಾಗಿದೆ. ಜೊತೆಗೆ ಆರ್ಥಿಕ ಗುರುತ್ವಾಕರ್ಷಣೆಯ ಹೊಸ ಕೇಂದ್ರವಾಗಿದೆ ಎಂಬುದು ಸರ್ಕಾರದ ವಾದ.
ಪೂರ್ವ ಕಾಲಿಮಂಟನ್ನಲ್ಲಿ ಹೊಸ ನಗರದ ನಿರ್ಮಾಣವು ತಾಳೆ ಎಣ್ಣೆ ತೋಟಗಳ ವಿಸ್ತರಣೆಗೆ ಕಾರಣವಾಗುತ್ತದೆ. ಈ ನಿರ್ಮಾಣವು ವೈವಿಧ್ಯಮಯ ವನ್ಯಜೀವಿಗಳು ಮತ್ತು ಸೊಂಪಾದ ಮಳೆಕಾಡುಗಳಿಂದ ಸಮೃದ್ಧವಾಗಿರುವ ಪ್ರದೇಶದಲ್ಲಿ ಹಲವು ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂದು ಅವರು ಪರಿಸರವಾದಿಗಳು ಹೇಳಿತ್ತಿದ್ದಾರೆ.
ಸರ್ಕಾರದ ಈ ಕ್ರಮದಿಂದ ಬೊರ್ನಿಯೊದ ಸ್ಥಳೀಯ ಜನರು ತಮ್ಮ ಪರಿಸರ ಮತ್ತು ಸಂಸ್ಕೃತಿಗೆ ಅಪಾಯ ಉಂಟಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಹೊಸ ರಾಜಧಾನಿಯ ಹೆಸರು: ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ
ಹೊಸ ರಾಜಧಾನಿಯ ಹೆಸರು 'ನುಸಂತರಾ' ಘೋಷಣೆಯು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚರ್ಚೆಗಳನ್ನು ಹುಟ್ಟುಹಾಕಿದೆ. ನುಸಂತಾರಾ ಎಂಬುದು ಹಳೆಯ ಜಾವಾನೀಸ್ ಪದವಾಗಿದ್ದು, ದ್ವೀಪಸಮೂಹ ರಾಷ್ಟ್ರವನ್ನು ಉಲ್ಲೇಖಿಸಲು ಬಳಸಲಾಗುವ ಹೊಸ ಹೆಸರು ಗೊಂದಲಕ್ಕೆ ಈಡು ಮಾಡಬಹುದು ಎಂದು ಕೆಲವರು ಹೇಳುತ್ತಾರೆ.
ಹೊಸ ರಾಜಧಾನಿಯನ್ನು ನಿರ್ಮಿಸಲು ಅಂದಾಜು 466 ಟ್ರಿಲಿಯನ್ ರೂಪಾಯಿ ವೆಚ್ಚವಾಗಲಿದೆ ಮತ್ತು ಇದು ಜಗತ್ತಿನ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ರಾಜಧಾನಿ ಬದಲಿಸಿದ ದೇಶಗಳಿವು
ಬ್ರೆಜಿಲ್ ತನ್ನ ರಾಜಧಾನಿಯನ್ನು ರಿಯೊ ಡಿ ಜನೈರೊದಿಂದ ಬ್ರೆಸಿಲಿಯಾಕ್ಕೆ 1960 ರಲ್ಲಿ ಬದಲಾಯಿಸಿತು.
ನೈಜೀರಿಯಾ ತನ್ನ ರಾಜಧಾನಿ ಲಾಗೋಸ್ ಅನ್ನು ಅಬುಜಾಗೆ 1991 ರಲ್ಲಿ ಬದಲಾಯಿಸಿತು.
ಕಝಾಕಿಸ್ತಾನ್ ತನ್ನ ರಾಜಧಾನಿಯನ್ನು ಅಲ್ಮಾಟಿಯಿಂದ ನೂರ್ ಸುಲ್ತಾನ್ಗೆ 1997 ರಲ್ಲಿ ಸ್ಥಳಾಂತರಿಸಿತು.
ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಸ್ಥಳಾಂತರಿಸುವ ಆಗ್ನೇಯ ಏಷ್ಯಾದ ಮೂರನೇ ರಾಷ್ಟ್ರವಾಗಿದೆ.
ಮಲೇಷ್ಯಾ ತನ್ನ ಆಡಳಿತ ರಾಜಧಾನಿಯನ್ನು ಕೌಲಾಲಂಪುರದಿಂದ ಪುತ್ರಜಯಕ್ಕೆ 2003ರಲ್ಲಿ ಸ್ಥಳಾಂತರಿಸಿತು.