ಅಭಿಮಾನಿಗಳಿಗೆ ಅಂಬರೀಶ್ ವಿಡಿಯೋ ಸಂದೇಶ
ಸಿಂಗಪುರ, ಮಾ.18: ಅನಾರೋಗ್ಯದಿಂದ ಬಳಲುತ್ತಿದ್ದ ವಸತಿ ಸಚಿವ ಅಂಬರೀಷ್ ಅವರ ದೇಹಾರೋಗ್ಯದ ಬಗ್ಗೆ ಇದ್ದ ಆತಂಕಗಳು ದೂರಾಗಿದೆ. ಸ್ವತಃ ಅಂಬರೀಷ್ ಅವರು ಕನ್ನಡದ ಸುದ್ದಿ ವಾಹಿನಿಗಳ ಮೂಲಕ ವಿಡಿಯೋ ಸಂದೇಶ ಕಳಿಸಿದ್ದಾರೆ. 'ನಾನು ಆರೋಗ್ಯವಾಗಿದ್ದೇನೆ, ಆತಂಕ ಪಡುವುದು ಬೇಡ' ಎಂದು ಅಭಿಮಾನಿಗಳು, ಬಂಧುಮಿತ್ರರಿಗೆ ಅಂಬರೀಷ್ ಹೇಳಿದ್ದಾರೆ.
ನಮಸ್ಕಾರ ಎಲ್ಲರಿಗೂ ನಿಮಗೆಲ್ಲಾ ತಿಳಿದಿರುವ ಹಾಗೆ ನನ್ನ ಆರೋಗ್ಯದಲ್ಲಿ ಏರುಪೇರಾಗಿ ನಾನು ಕೆಲಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಗಿ ಬಂತು. ನಿಮ್ಮೆಲ್ಲರ ಪ್ರೀತಿ ವಿಶ್ವಾಸ, ಅಭಿಮಾನದಿಂದ ನಾನು ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ನನ್ನ ಅಭಿಮಾನಿಗಳು, ನನ್ನ ಹಿರಿಯರು, ನನ್ನ ಮಿತ್ರರು ಅಪಾರ ಪ್ರೀತಿ ತೋರಿಸಿದ್ದಾರೆ. ಮೊದಲಿಗೆ ವಿಕ್ರಂ ಆಸ್ಪತ್ರೆ ವೈದ್ಯರ ಪ್ರೀತಿ ವಿಶ್ವಾಸ, ಧೈರ್ಯ ತುಂಬಿದರು.

ನಟ, ಸಚಿವ ಎನ್ನುವ ಕಾರಣಕ್ಕೆ ಸಿಂಗಪುರಕ್ಕೆ ಕಳಿಸಿಲ್ಲ. ಸರ್ಕಾರ ನನಗೆ ಬೆಂಬಲ ಸಹಕಾರ ನೀಡಿದರು. ಅಪಾರ ಕಾಳಜಿ ವಹಿಸಿದರು. ಇವತ್ತು ಅಭಿಮಾನಿಗಳು ಪೂಜೆ ಪುನಸ್ಕಾರ ಮಾಡಿದ್ದಾರೆ. ಅವರ ಪ್ರಾರ್ಥನೆಯಿಂದ ನಾನು ಗುಣಮುಖ ನಾಗಿದ್ದೇನೆ. ಅಭಿಮಾನಿಗಳೆ, ಆತಂಕ ಬೇಡ ಎಂದು ಮಾಧ್ಯಮಗಳ ಮೂಲಕ ಹೇಳಬಯಸುತ್ತೇನೆ.
ಸದ್ಯಕ್ಕೆ ವೈದ್ಯರ ಸಲಹೆಯಂತೆ ನಾನು ಊಟ, ವ್ಯಾಯಾಮ ಮಾಡಿಕೊಂಡಿದ್ದೇನೆ. ಕರ್ನಾಟಕಕ್ಕೆ ಮತ್ತೆ ಮರಳಲು ಇನ್ನೂ ಒಂದು ವಾರವಾದರೂ ಬೇಕಾಗುತ್ತದೆ. ಹೀಗಾಗಿ ತಕ್ಷಣ ನಾನು ವಾಪಸ್ ಬರಲು ಸಾಧ್ಯವಿಲ್ಲ. ನಿಮ್ಮ ರೆಬೆಲ್ ಸ್ಟಾರ್ ಆಗಿ ಮತ್ತೆ ಬರುತ್ತೇನೆ ಎಂದರು.
ಹೀಗಾಗಿ ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಶ್ ಅವರ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಇನ್ನು ಹತ್ತೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆಗಳಿವೆ ಎಂಬ ಸುದ್ದಿಗೆ ಅಂಬರೀಷ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಅಂಬರೀಷ್ ಹಾಗೂ ಅವರ ಕುಟುಂಬಸ್ಥರು ಮಲೇಷಿಯಾಗೆ ತೆರಳಿದ್ದಾರೆ. ಮಲೇಷಿಯಾದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದ ನಂತರ ಕರ್ನಾಟಕಕ್ಕೆ ಮರಳಲಿದ್ದಾರೆ.












Click it and Unblock the Notifications