ಕೆನಡಾದಲ್ಲಿ ಗಾಂಧಿ ಪ್ರತಿಮೆಗೆ ಹಾನಿ; ಸುರಕ್ಷಿತ ದೇಶದಲ್ಲಿ ಇಂಥದ್ದು ಇದೇ ಮೊದಲಲ್ಲ, ಕೊನೆಯಲ್ಲ
ನವದೆಹಲಿ, ಜುಲೈ 14: ಕೆನಡಾದ ಆಂಟೇರಿಯೋ ಪ್ರಾಂತ್ಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ರಿಚ್ಮಂಡ್ ಹಿಲ್ ನಗರದಲ್ಲಿ ಬುಧವಾರ ಆದ ಈ ಘಟನೆಯನ್ನು ಭಾರತ ಬಲವಾಗಿ ಖಂಡಿಸಿದೆ.
ರಿಚ್ಮಂಡ್ ಹಿಲ್ ನಗರದ ಯಾಂಗೆ ಸ್ಟ್ರೀಟ್ ಪ್ರದೇಶದ ವಿಷ್ಣು ಮಂದಿರದಲ್ಲಿರುವ ಗಾಂಧಿ ಪ್ರತಿಮೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವುದು ತಿಳಿದುಬಂದಿದೆ. ಕೆನಡಾ ಪೊಲೀಸರು ತನಿಖೆ ನಡೆಸುತ್ತಿದ್ದು ಇದನ್ನು ದ್ವೇಷ ಘಟನೆಯಾಗಿ ಪರಿಗಣಿಸಲಾಗಿದೆ.
"ರಿಚ್ಮಂಡ್ ಹಿಲ್ನ ವಿಷ್ಣು ಮಂದಿರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ಬಹಳ ನೋವು ತಂದಿದೆ. ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆ ಈ ಘಟನೆಯಿಂದ ಘಾಸಿಗೊಂಡಿದೆ. ಈ ದ್ವೇಷ ಅಪರಾಧದ ತನಿಖೆ ನಡೆಸಲು ಕೆನಡಾ ಆಡಳಿತದ ಜೊತೆ ನಾವು ಸಂಪರ್ಕದಲ್ಲಿದ್ದೇವೆ" ಎಂದು ಕೆನಡಾದ ಟೊರಂಟೋ ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಟ್ವೀಟ್ ಆಗಿದೆ.

ಘಟನೆ ಆಗಿದ್ದೇನು?
ದುಷ್ಕರ್ಮಿಗಳು ಗಾಂಧಿ ಪ್ರತಿಮೆಗೆ ಘಾಸಿ ಮಾಡಿಲ್ಲ. ಆದರೆ, ಆಕ್ಷೇಪಾರ್ಹ ಪದಗಳನ್ನು ಪ್ರತಿಮೆ ಮೇಲೆ ಬರೆದಿದ್ದಾರೆ. 'ರೇಪಿಸ್ಟ್', 'ಖಾಲಿಸ್ತಾನ್' ಇತ್ಯಾದಿ ಪದಗಳನ್ನು ಗಾಂಧಿ ಪ್ರತಿಮೆ ಮೇಲೆ ಬರೆದು ವಿರೂಪಗೊಳಿಸಲಾಗಿದೆ. ಸ್ಥಳೀಯ ಪೊಲೀಸರು ಇದು ದ್ವೇಷ ಕಾರ್ಯ ಮತ್ತು ಪೂರ್ವಗ್ರಹ ಘಟನೆ ಎಂದು ಪರಿಗಣಿಸಿದ್ದಾರೆ.
"ಯಾವುದೇ ರೀತಿಯ ದ್ವೇಷ ಕೃತ್ಯಗಳನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ" ಎಂದು ಯಾರ್ಕ್ ಪ್ರಾದೇಶಿಕ ಪೊಲೀಸ್ ವಕ್ತಾರರು ಹೇಳಿಕೆ ನೀಡಿದ್ದಾರೆ.
"ಜನಾಂಗ, ರಾಷ್ಟ್ರೀಯತೆ, ಭಾಷೆ, ವರ್ಣ, ಧರ್ಮ, ವಯಸ್ಸು, ಲಿಂಗ, ಲಿಂಗ ಅಭಿವ್ಯಕ್ತಿ ಇತ್ಯಾದಿ ಯಾವುದೇ ಗುರುತಿನ ಆಧಾರದ ಮೇಲೆ ಯಾರ ಮೇಲಾದರೂ ದೌರ್ಜನ್ಯ ಎಸಗಿದವರಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾದಲ್ಲಿ ಭಾರತೀಯರ ಮೇಲೆ ದಾಳಿ ಹೊಸದಲ್ಲ
ರಿಚ್ಮಂಡ್ ಹಿಲ್ ನಗರದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ದಾಳಿ ಮಾಡಿದ್ದು ಕೇವಲ ಆ ಪ್ರತಿಮೆ ಮೇಲಿನ ಸಿಟ್ಟಿನಂದಲ್ಲ, ಅದು ಭಾರತೀಯ ಸಮುದಾಯವನ್ನು ಗುರಿಯಾಗಿಸಿ ಮಾಡಲಾಗಿರುವ ಅವಮಾನ ಎಂದು ಪರಿಗಣಿಸಲಡ್ಡಿ ಇಲ್ಲ.
ಜನಸಂಖ್ಯೆ ತೀರಾ ಕಡಿಮೆ ಇರುವ ಕೆನಡಾ ಸಂಪೂರ್ಣವಾಗಿ ಸುರಕ್ಷಿತ ದೇಶ ಎಂಬುದು ಸಾಮಾನ್ಯವಾಗಿರುವ ನಂಬಿಕೆ. ಆದರೆ, ಭಾರತೀಯ ಸಮುದಾಯದವರನ್ನು ಗುರಿಯಾಗಿಸಿ ಹಿಂದೆ ಅನೇಕ ಬಾರಿ ದಾಳಿಗಳಾಗಿರುವ ಘಟನೆಗಳು ಇತಿಹಾಸ ಪುಟದ ಭಾಗಗಳಾಗಿವೆ.

ಪಾರ್ಕಿಂಗ್ ವಿಚಾರಕ್ಕೆ ಜನಾಂಗೀಯ ನಿಂದನೆ
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಅಬ್ಬಾಟ್ಸ್ಫೋರ್ಡ್ ಎಂಬಲ್ಲಿ ಆರು ವರ್ಷಗಳ ಹಿಂದೆ ನಡೆದ ಒಂದು ಘಟನೆ ದೊಡ್ಡ ಸದ್ದು ಮಾಡಿತ್ತು. ಟ್ರಕ್ ಪಾರ್ಕ್ ಮಾಡುವ ವಿಚಾರಕ್ಕೆ ಭಾರತೀಯ ಮೂಲದ ರವಿ ದುಹ್ರಾ ಎಂಬುವವರ ಮೇಲೆ ಸ್ಥಳೀಯ ಬಿಳಿಯ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದರು. ಇಂಡಿಯನ್, ಪಾಕಿಸ್ತಾನೀ, ಹಿಂದೂ ಇತ್ಯಾದಿ ಪದಗಳಿಗೆ ಆಕ್ಷೇಪಾರ್ಹ ಪದಗಳನ್ನು ಸೇರಿಸಿ ನಿಂದಿಸಿದ್ದರೆನ್ನಲಾಗಿದೆ.
ಟ್ವಿಟ್ಟರ್ ಬಳಕೆದಾರರೊಬ್ಬರು ಆ ವಿಡಿಯೋವನ್ನು ಟ್ವೀಟ್ ಮಾಡಿದ್ದರು. 2016 ಅಕ್ಟೋಬರ್ ತಿಂಗಳಲ್ಲಿ ಆ ಘಟನೆ ಆಗಿತ್ತು. ರವಿ ದುಹ್ರ ಕೆನಡಾದ ಟಿವಿ ವಾಹಿನಿಯೊಂದರಲ್ಲೂ ಈ ಘಟನೆ ಬಗ್ಗೆ ಮಾತನಾಡಿ, "ಕೆನಡಾದಲ್ಲಿ ಜನಾಂಗೀಯ ನಿಂದನೆ ಇದೇ ಮೊದಲಲ್ಲ, ಇದೇ ಕೊನೆಯೂ ಅಲ್ಲ" ಎಂದು ಮಾರ್ಮಿಕ ಸತ್ಯವನ್ನು ಬಿಚ್ಚಿಟ್ಟಿದ್ದರು.

ವಿದ್ಯಾರ್ಥಿ ಕಾರ್ತಿಕ್ ಹತ್ಯೆ
ವಿದ್ಯಾಭ್ಯಾಸಕ್ಕೆಂದು ಕೆನಡಾಗೆ ಹೋಗಿದ್ದ 21 ವರ್ಷದ ಕಾರ್ತಿಕ್ ವಾಸುದೇವ್ ಅವರನ್ನು 2022ರ ಏಪ್ರಿಲ್ ತಿಂಗಳಲ್ಲಿ ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಘಾಜಿಯಾಬಾದ್ ಮೂಲದ ಕಾರ್ತಿಕ್ನನ್ನು ಸೇಂಟ್ ಜೇಮ್ಸ್ ನಗರದ ರೈಲ್ವೆ ನಿಲ್ದಾಣದ ಬಳಿ ಕೊಲ್ಲಲಾಗಿತ್ತು.
ಈ ಕೊಲೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು 39 ವರ್ಷದ ಆರೋಪಿ ರಿಚರ್ಡ್ ಜೋನಾತನ್ ಎಡ್ವಿನ್ ಎಂಬಾತನನ್ನು ಬಂಧಿಸಿದ್ದರು.

ಪಂಜಾಬೀ ಯುವತಿ ಕೌರ್ ಹತ್ಯೆ
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ 25 ವರ್ಷದ ಹರ್ಮಾನ್ದೀಪ್ ಕೌರ್ ಎಂಬ ಯುವತಿ ಮೇಲೆ ಹಲ್ಲೆ ಮಾಡಿ ಕೊಲ್ಲಲಾಗಿತ್ತು. 2022, ಫೆಬ್ರವರಿ ಕೊನೆಯ ವಾರದಲ್ಲಿ ಈ ಘಟನೆ ಸಂಭವಿಸಿತ್ತು. ಹತ್ಯೆಯಾದ ಹರ್ಮಾನ್ದೀಪ್ ಕೌರ್ ಪಂಜಾಬ್ನ ಕಪೂರ್ಥಲ ಮೂಲದವರು.
ಆರು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕೆಂದು ಕೆನಡಾಗೆ ಹೋದವರು ಇತ್ತೀಚೆಗಷ್ಟೇ ಕೆನಡಾ ಪೌರತ್ವ ಪಡೆದು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.
ಹರ್ಮನ್ದೀಪ್ ಕೌರ್ ಮತ್ತು ಕಾರ್ತಿಕ್ ಹತ್ಯೆಗಳಿಗೆ ನಿಖರ ಕಾರಣ ತಿಳಿದಿಲ್ಲ. ಇದು ಸ್ಥಳೀಯ ಕ್ರಿಮಿನಲ್ ಅಪರಾಧಿಗಳು ಎಸಗಿದ ಕೃತ್ಯದಂತೆ ಭಾಸವಾದರೂ ಜನಾಂಗೀಯ ದ್ವೇಷದ ವಾಸನೆ ಇಲ್ಲದಿಲ್ಲ.
ಇನ್ನೂ ವಿಚಿತ್ರವೆಂದರೆ ಕೆನಡಾದಲ್ಲಿರುವ ಖಲಿಸ್ತಾನೀ ಬೆಂಬಲಿಗರು ಇತರ ಭಾರತೀಯ ಸಮುದಾಯದವರ ಮೇಲೆ ದಾಳಿ ಮಾಡಿರುವ ಘಟನೆ ಇತ್ತೀಚೆಗೆ ಹೆಚ್ಚಿದೆ.
ಕೆನಡಾ ಮಾತ್ರವಲ್ಲ ಬೇರೆ ದೇಶಗಳಲ್ಲೂ ಭಾರತೀಯ ಸಮುದಾಯದವರ ಮೇಲೆ ಸಾಕಷ್ಟು ದೌರ್ಜನ್ಯಗಳಾಗುತ್ತಿರುವುದು ಹೌದು. ಆಫ್ರಿಕಾದ ಇಥಿಯೋಪಿಯಾದಲ್ಲಿ ಅತಿ ಹೆಚ್ಚು ಘಟನೆಗಳು ಬೆಳಕಿಗೆ ಬಂದಿವೆ. ನಂತರದ ಸ್ಥಾನ ಅಮೆರಿಕದ್ದು. ಐರ್ಲೆಂಡ್ನಲ್ಲೂ ಭಾರತೀಯರ ಮೇಲೆ ದಾಳಿಯಾದ ಹಲವು ಘಟನೆಗಳು ವರದಿಯಾಗಿವೆ.
(ಒನ್ಇಂಡಿಯಾ ಸುದ್ದಿ)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications