ಉಗ್ರ ಹಫೀಜ್ ಗೆ ಜೀವ ಬೆದರಿಕೆ; ಪ್ರಕರಣ ಲಾಹೋರ್ ಗೆ ವರ್ಗಾವಣೆ
ಲಾಹೋರ್, ಸೆಪ್ಟೆಂಬರ್ 30: ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಹಫೀಜ್ ಸಯೀದ್ ನ ಮನವಿಯನ್ನು ಪುರಸ್ಕರಿಸಿ, ಆತನ ವಿರುದ್ಧದ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣವನ್ನು ಪಂಜಾಬ್ ಪ್ರಾಂತ್ಯದ ಗುಜ್ರನ್ ವಾಲಾ ಜಿಲ್ಲೆಯ ಭಯೋತ್ಪಾದನಾ ವಿರೋಧಿ ಕೋರ್ಟ್ ನಿಂದ ಲಾಹೋರ್ ಕೋರ್ಟ್ ಗೆ ವರ್ಗಾಯಿಸಲಾಗಿದೆ. "ಜೀವ ಬೆದರಿಕೆಯಿದೆ" ಎಂಬ ಹಿನ್ನೆಲೆಯಲ್ಲಿ ಆತ ಅರ್ಜಿ ಹಾಕಿಕೊಂಡಿದ್ದ.
ಕಳೆದ ಜುಲೈ ಹದಿನೇಳನೇ ತಾರೀಕು ಹಫೀಜ್ ಸಯೀದ್ ಲಾಹೋರ್ ನಿಂದ ಗುಜ್ರನ್ ವಾಲಾಗೆ ತೆರಳುತ್ತಿದ್ದ. ಆ ವೇಳೆ ಜಾಗತಿಕ ಭಯೋತ್ಪಾದಕ ಹಣೆಪಟ್ಟಿ ಹೊತ್ತಿರುವ ಆತನನ್ನು ಉಗ್ರ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಆತನ ಬಂಧನಕ್ಕೆ ಮುನ್ನ ಜಮಾತ್-ಉದ್-ದವಾದ ಇತರ ಹದಿಮೂರು ಮಂದಿ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದವು.
ಸರ್ಕಾರದ ಕಾನೂನು ಅಧಿಕಾರಿ ಅಧಿಕಾರಿಗಳು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ಕಾರಣಕ್ಕೆ ಲಾಹೋರ್ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸರ್ದಾರ್ ಶಮೀಮ್ ಮನವಿಯನ್ನು ಪುರಸ್ಕರಿಸಿದ್ದಾರೆ. ಲಾಹೋರ್ ನಿಂದ ಎಂಬತ್ತು ಕಿ.ಮೀ. ದೂರದ ಗುಜ್ರನ್ ವಾಲಾಗೆ ಪ್ರತಿ ಸಲ ಭಯೋತ್ಪಾದನಾ ವಿರೋಧಿ ಕೋರ್ಟ್ ಗೆ ತೆರಳಬೇಕಾಗುತ್ತದೆ. ಹಫೀಜ್ ಸಯೀದ್ ಗೆ ಜೀವ ಬೆದರಿಕೆ ಇದೆ ಎಂದು ಆತನ ಪರ ವಕೀಲರು ವಾದ ಮಂಡಿಸಿದ್ದರು.

ಲಾಹೋರ್ ಭಯೋತ್ಪಾದನಾ ವಿರೋಧಿ ಕೋರ್ಟ್ ನಲ್ಲಿ ಹಫೀಜ್ ಸಯೀದ್ ನ ವಿಚಾರಣೆ ನಡೆಸಲು ನ್ಯಾ. ಶಮೀಮ್ ಒಪ್ಪಿಕೊಂಡಿದ್ದಾರೆ. ಹಫೀಜ್ ಸಯೀದ್ ಪ್ರಕರಣವನ್ನು ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ನಡೆಸಲಿದೆ.
ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ನೂರಾ ಅರವತ್ತಾರು ಮಂದಿ ಸಾವಿಗೀಡಾಗಿದ್ದರು. ಈ ಘಟನೆಯ ಹಿಂದೆ ಜಮಾತ್- ಉದ್- ದವಾ ಸ್ಥಾಪಕ ಹಫೀಜ್ ಸಯೀದ್ ಇದ್ದ ಎಂದು ಆರೋಪಿಸಲಾಗಿದೆ.












Click it and Unblock the Notifications