ಪ್ರತಿಭಟನೆ ಹತ್ತಿಕ್ಕಲು, ಲೆಬನಾನ್ ಸೇನೆಗೆ ಫುಲ್ ಪವರ್ ಕೊಟ್ಟ ಸಂಸತ್ತು!
ಬೈರುತ್ ಬ್ಲಾಸ್ಟ್ ನಂತರ ಮಹತ್ವದ ಬೆಳವಣಿಗೆಯೊಂದರಲ್ಲಿ ಲೆಬನಾನ್ ಪಾರ್ಲಿಮೆಂಟ್ ತುರ್ತುಪರಿಸ್ಥಿತಿ ಹೇರುವ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಲ್ಲದೆ ಲೆಬನಾನ್ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ಮೂಲಕ ಲೆಬನಾನ್ ನಲ್ಲಿ ಭುಗಿಲೆದ್ದಿರುವ ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಸ್ ಮುಂದುವರಿದಿದೆ.
ಆಗಸ್ಟ್ 4ರಂದು ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿತ್ತು. ಸ್ಫೋಟದಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟು, 6000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ಬಳಿಕ ಲೆಬನಾನ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮೊಳಗಿತ್ತು. ಅಲ್ಲದೆ ಈ ಹೋರಾಟ ಹಿಂಸಾತ್ಮಕ ರೂಪ ಪಡೆದ ಪರಿಣಾಮ ಲೆಬನಾನ್ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡಿತ್ತು.
ಹೋರಾಟ ಹತ್ತಿಕ್ಕಲು ಹೋರಾಟಗಾರರ ಮೇಲೆ ದಾಳಿ ಮಾಡಿದ್ದ ಲೆಬನಾನ್ ಭದ್ರತಾ ಸಿಬ್ಬಂದಿ, ಹಲವು ಹೋರಾಟಗಾರರ ಸಾವಿಗೂ ಕಾರಣರಾಗಿದ್ದರು. ಪರಿಸ್ಥಿತಿ ಅರ್ಥಮಾಡಿಕೊಂಡು ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ಜಾಗ ಖಾಲಿ ಮಾಡಿ, ಮನೆ ಕಡೆ ನಡೆದಿದ್ದರು. ಪ್ರಧಾನಿ ದಿಯಾಬ್ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಲೆಬನಾನ್ ಪಾರ್ಲಿಮೆಂಟ್ ಸೇನೆಗೆ ಅಧಿಕಾರ ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋರಾಟಗಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದೆ. ಇದು ಲೆಬನಾನ್'ನ ಹೋರಾಟಗಾರರನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆ ಇದ್ದು, ಲೆಬನಾನ್ ಮತ್ತೆ ಹೊತ್ತಿ ಉರಿಯಲು ವೇದಿಕೆ ಸಿದ್ಧವಾಗಿದೆ.

ಪೊಲೀಸ್ ರಾಜ್ಯ..?
ಬೈರುತ್ ಬ್ಲಾಸ್ಟ್ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನದಲ್ಲೇ ಲೆಬನಾನ್ ಪಾರ್ಲಿಮೆಂಟ್ ತರಾತುರಿಯ ನಿರ್ಧಾರ ಕೈಗೊಂಡಿದೆ. ಇನ್ನು ಪ್ರತಿಭಟನೆ ಹತ್ತಿಕ್ಕಲು ಲೆಬನಾನ್ ಸರ್ಕಾರ ಸೇನೆಗೆ ಸಂಪೂರ್ಣ ಅಧಿಕಾರ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆಗಳು ಪ್ರತಿಭಟಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಸೇನೆ ತನಗೆ ನೀಡಿರುವ ಅಧಿಕಾರ ಬಳಸಿಕೊಂಡು ಹೋರಾಟ ಹತ್ತಿಕ್ಕಲು ಮುಂದಾಬಹುದು. ಹಾಗೇ ಪ್ರತಿಭಟನೆಗಳು ನಡೆಯದಂತೆ ಕರ್ಫ್ಯೂ ಹೇರುವ ಸಾಧ್ಯತೆ ಇದೆ.

ಮಾಧ್ಯಮಗಳ ಮೇಲೆ ಕೂಡಾ ಸೇನೆ ಕಂಟ್ರೋಲ್
ಇನ್ನುಳಿದಂತೆ ಲೆಬನಾನ್ ಮಾಧ್ಯಮಗಳನ್ನೂ ಸೇನೆ ಕಂಟ್ರೋಲ್ ಮಾಡುವ ಸಾಧ್ಯತೆಗಳಿವೆ ಎಂಬುದು ತಜ್ಞರ ಆತಂಕ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಲೆಬನಾನ್ ಸಂಸತ್, ಪ್ರತಿಭಟನೆಗಳು ನಡೆಯದಂತೆ ತಡೆಗಟ್ಟಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಿದೆ. ಆದರೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎನ್ನುತ್ತಿದೆ ಲೆಬನಾನ್ ಪಾರ್ಲಿಮೆಂಟ್. ಇದು ಲೆಬನಾನ್ ಪೊಲೀಸ್ ರಾಜ್ಯವಾಗುವ ಸುಳಿವು ಕೊಟ್ಟಿದೆ.

ಉದ್ಯೋಗವೂ ಇಲ್ಲ, ಸೂರು ಸಿಗುತ್ತಿಲ್ಲ
ಲೆಬನಾನ್ ಸ್ಥಿತಿ ಹೇಗಾಗಿದೆ ಎಂದರೆ ಅತ್ತ 200ಕ್ಕೂ ಹೆಚ್ಚು ಮಂದಿ ಸ್ಫೋಟಕ್ಕೆ ಬಲಿಯಾಗಿದ್ದರೆ, ಮತ್ತೊಂದ್ಕಡೆ 3 ಲಕ್ಷ ಮಂದಿಗೆ ಮನೆಯೇ ಇಲ್ಲ. ಎಲ್ಲವನ್ನೂ ಬೈರುತ್ ಸ್ಫೋಟದಲ್ಲಿ ಕಳೆದುಕೊಂಡಿರುವ ಲಕ್ಷಾಂತರ ಮಂದಿ ಸೂರು ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಈ ನಡುವೆ ಉದ್ಯೋಗವೂ ಇಲ್ಲದಾಗಿದೆ. ಹೀಗಾಗಿ ತುತ್ತು ಅನ್ನಕ್ಕಾಗಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಲ್ಲಿ ಜನರ ಬಗ್ಗೆ ಯೋಚಿಸದ ಲೆಬನಾನ್ ಜನಪ್ರತಿನಿಧಿಗಳು, ಪರಿಸ್ಥಿತಿ ನಿಯಂತ್ರಣದ ಹೆಸರಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಜನರ ಮೇಲೆ ದೌರ್ಜನ್ಯದಿಂದ ಪ್ರತಿಭಟನೆಗಳನ್ನು ಹತ್ತಿಕ್ಕುವ ಯತ್ನ ನಡೆದಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನ ಕಾದು ನೋಡಬೇಕು.

ಧನದಾಹಕ್ಕೆ ನೂರಾರು ಜನ ಬಲಿ
200ಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಬೈರುತ್ ಬ್ಲಾಸ್ಟ್ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ. 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಕ್ಕೆ ಹಡಗು ಮಾಲೀಕನ ದುರಾಸೆ ಕಾರಣ ಎಂಬುದು ಬಯಲಾಗಿದೆ. ಜಾರ್ಜಿಯಾ ರಾಜಧಾನಿ ಬಟುಮಿ ನಗರದಿಂದ ಮೊಜಾಂಬಿಕ್ಗೆ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ಹಡಗು ಹಲವು ಬಂದರುಗಳನ್ನು ದಾಟಿ ಬೈರುತ್ಗೆ ಬಂದಿತ್ತು. ಆದರೆ ಲೆಬನಾನ್ ರಾಜಧಾನಿ ಬೈರುತ್ಗೆ ಈ ಡೆಡ್ಲಿ ಹಡಗು ಬರಲು ಬಲವಾದ ಕಾರಣವೊಂದಿತ್ತು. ಅದೇ ಹಡಗು ಮಾಲೀಕನ ದುರಾಸೆ.












Click it and Unblock the Notifications