ಕುಲಭೂಷಣ್ ಜಾಧವ್ ರಿಂದ ಕ್ಷಮಾದಾನಕ್ಕೆ ಅರ್ಜಿ, ಪಾಕ್ ನಿಂದ ಹೊಸ ನಾಟಕ
ಇಸ್ಲಾಮಾಬಾದ್, ಜೂನ್ 22: ಪಾಕಿಸ್ತಾನ ಗುರುವಾರ ಮತ್ತೊಂದು ಸುತ್ತಿನ ನಾಟಕ ಶುರು ಹಚ್ಚಿಕೊಂಡಿದೆ. ಅಲ್ಲಿನ ಸೇನೆ ತಿಳಿಸಿದ ವಿಚಾರವೇ ನಂಬುವುದಾದರೆ ಭಾರತದ ನಿವೃತ್ತ ನೌಕಾ ಸೇನೆ ಅಧಿಕಾರಿ ಕುಲಭೂಷಣ್ ಜಾಧವ್ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಎದುರು ಕ್ಷಮಾದಾನಕ್ಕೆ ಅರ್ಜಿ ಹಾಕಿಕೊಂಡಿದ್ದಾರಂತೆ.
ಪಾಕಿಸ್ತಾನದ ವಿರುದ್ಧ ಗೂಢಚಾರಿಕೆ ಮಾಡಿದ ಆರೊಪದ ಮೇಲೆ ಕಳೆದ ಏಪ್ರಿಲ್ ನಲ್ಲಿ ಅಲ್ಲಿನ ಸೇನಾ ಕೋರ್ಟ್ ಜಾಧವ್ ಗೆ ಮರಣದಡನೆ ವಿಧಿಸಿತ್ತು. ಆ ತೀರ್ಪಿನ ವಿರುದ್ಧವಾಗಿ ಭಾರತವು ಅಂತರರಾಷ್ಟ್ರೀಯ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಶಿಕ್ಷೆಗೆ ತಾತ್ಕಾಲಿಕ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿತ್ತು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಲ್ಲಿನ ಸೇನೆ, ಬಲೂಚಿಸ್ತಾನದಲ್ಲಿ ವಿಧ್ವಂಸಕ ಕೃತ್ಯಕ್ಕೆ ಕುಮ್ಮಕ್ಕು ನೀಡುವಲ್ಲಿ ನನ್ನ ಪಾತ್ರವಿದೆ. ಅದಕ್ಕೆ ಕ್ಷಮಾದಾನ ನೀಡಬೇಕು ಎಂದು ಕುಲಭೂಷಣ್ ಜಾಧವ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಲಾಗಿದೆ.

ಪಾಕಿಸ್ತಾನದ ಪ್ರಕಾರ ಜಾಧವ್ ಅಲ್ಲಿನ ರಾಷ್ಟ್ರಪತಿ ಮುಂದೆ ಅಥವಾ ಹೈ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದೆ ಮನವಿ ಸಲ್ಲಿಸುವ ಅವಕಾಶ ಇದೆ. ಆದರೆ ಈ ಹಿಂದೆ ಮಿಲಿಟರಿ ಕೋರ್ಟ್ ಗೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿತ್ತು.
ಅಂದಹಾಗೆ, ಜಾಧವ್ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ಷಮೆ ಕೋರುವ ವ್ಯಕ್ತಿ ತಪ್ಪು ಮಾಡಿದ್ದಾನೆ ಅಂತಲೇ ಆಗುತ್ತದೆ. ಆದರೆ ಭಾರತದ ವಾದ ಏನೆಂದರೆ, ಆತ ತಪ್ಪಿತಸ್ಥನೇ ಅಲ್ಲ. ಆತನನ್ನು ಇರಾನ್ ನಿಂದ ಅಪಹರಿಸಿ, ಆರೋಪ ಹೊರಿಸಲಾಗುತ್ತಿದೆ ಎಂಬುದಾಗಿತ್ತು. ಅದಕ್ಕೇ ಆರಂಭದಲ್ಲೇ ಹೇಳಿದ್ದು ಪಾಕಿಸ್ತಾನ ಮತ್ತೊಂದು ಸುತ್ತಿನ ಬೃಹನ್ನಾಟಕ ಆರಂಭಿಸಿದೆ.












Click it and Unblock the Notifications