ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು
ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಾಧವ್ ಅವರಿಗೆ ಕೊಂಚ ನಿರಾಳ; ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಭಾರತದ ಮನವಿಗೆ ಪುರಸ್ಕಾರ; ಶಿಕ್ಷೆಗೆ ತಾತ್ಕಾಲಿಕ ತಡೆ.
ಹೇಗ್ (ಹಾಲೆಂಡ್), ಮೇ 18: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯೊಡ್ಡಿದೆ. ಅಲ್ಲದೆ ಮುಂದಿನ ತನ್ನ ತೀರ್ಪು ಪ್ರಕಟವಾಗುವವರೆಗೆ ಕುಲಭೂಷಣ್ ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದೂ ಪಾಕಿಸ್ತಾನಕ್ಕೆ ನ್ಯಾಯಾಲಯ ತಾಕೀತು ಮಾಡಿದೆ.
ಗುರುವಾರ (ಮೇ 18) ಪ್ರಕರಣದ ಮಧ್ಯಂತರ ತೀರ್ಪು ನೀಡಿದ ನ್ಯಾಯಾಲಯ, ಗಲ್ಲು ಶಿಕ್ಷೆಗೆ ತಡೆ ನೀಡಿ ಆದೇಶ ನೀಡಿತು.[ಕುಲಭೂಷಣ್ ಬಗ್ಗೆ ಕಥೆ ಕಟ್ಟುತ್ತಿದೆಯಾ ಪಾಕ್, ಏಜೆಂಟರು ಹೇಗಿರ್ತಾರೆ ಗೊತ್ತಾ?]
ಕೋರ್ಟ್ ಹೇಳಿದ್ದೇನು?: ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಸರಿಯಾಗಿ ಆರಂಭವಾದ ಕೋರ್ಟ್ ಕಲಾಪದಲ್ಲಿ ನ್ಯಾ. ರೋನಿ ಅಬ್ರಹಾಂ ಅವರು ಮಧ್ಯಂತರ ತೀರ್ಪಿನ ಪ್ರತಿ ಓದಲಾರಂಭಿಸಿದರು.
ಈ ತೀರ್ಪಿಗೆ ಕಾರಣವಾದ ಅಂಶಗಳನ್ನು ಎಳೆಎಳೆಯಾಗಿ ವಿವರಿಸಿದ ನ್ಯಾಯಮೂರ್ತಿ ಅಬ್ರಹಾಂ, ಕುಲಭೂಷಣ್ ವಿಚಾರದಲ್ಲಿ ಪಾಕಿಸ್ತಾನದ ನಡೆಗಳು ಆಕ್ಷೇಪಾರ್ಹ ಎಂದು ಸ್ಪಷ್ಟವಾಗಿ ಹೇಳಿದರು.
ಮೊದಲನೆಯದಾಗಿ, ಜಾಧವ್ ಗೂಢಚಾರಿನೆಂಬ ವಿಚಾರ ಸಾಬೀತಾಗಿಲ್ಲ. ಜಾಧವ್ ಗೂಢಚಾರಿ ಎಂದು ಹೇಳುತ್ತಿರುವ ಪಾಕಿಸ್ತಾನ ನ್ಯಾಯಾಲಯಕ್ಕೆ ಒದಗಿಸಿರುವ ಸಾಕ್ಷ್ಯಾಧಾರಗಳು ಆರೋಪಕ್ಕೆ ಪೂರಕವಾಗಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.[ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?]
ವಿಯೆನ್ನಾ ಒಪ್ಪಂದಡಿ ಭಾರತವು ಜಾಧವ್ ಅವರನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೂ ಮನವಿ ಸಲ್ಲಿಸಿದೆ. ಆದರೆ, ಪಾಕಿಸ್ತಾನ ಈ ಪ್ರಕರಣದಲ್ಲಿ ತನ್ನ ಮನಸೋ ಇಚ್ಛೆ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಕುಲಭೂಷಣ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲು ಅಥವಾ ಆತನನ್ನು ಭೇಟಿ ಮಾಡಲು ಭಾರತ ಸರ್ಕಾರ ರಾಜತಾಂತ್ರಿಕವಾಗಿ ಸುಮಾರು 16 ಬಾರಿ ಪ್ರಯತ್ನ ಪಟ್ಟರೂ ಅದನ್ನು ಪಾಕಿಸ್ತಾನ ಪದೇ ಪದೇ ತಳ್ಳಿ ಹಾಕಿದ್ದು ಸರಿಯಲ್ಲ. ಇದನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ. ಪಾಕಿಸ್ತಾನವು ಭಾರತಕ್ಕೆ ಕುಲಭೂಷಣ್ ಅವರನ್ನು ಭೇಟಿಯಾಗಲು ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಅವಕಾಶವನ್ನು ನೀಡಬೇಕಿತ್ತು ಎಂದು ನ್ಯಾಯಮೂರ್ತಿ ಹೇಳಿದರು. [ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ]
''ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿದ ನ್ಯಾಯಾಲಯವು ತನ್ನ ಮುಂದಿನ ಆದೇಶ ನೀಡುವವರೆಗೆ ಜಾಧವ್ ಅವರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸದಂತೆ ಆದೇಶಿಸುತ್ತದೆ ಹಾಗೂ ಮುಂದಿನ ತೀರ್ಪು ಬರುವವರೆಗೂ ಜಾಧವ್ ಅವರ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಪಾಕಿಸ್ತಾನ ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತದೆ'' ಎಂದು ನ್ಯಾಯಮೂರ್ತಿ ತಿಳಿಸಿದರು.
ತೀರ್ಪಿಗೂ ಮುನ್ನ ಕ್ಯಾತೆ: ನ್ಯಾಯಾಧೀಶರು ತೀರ್ಪು ಓದಲು ಶುರು ಮಾಡುವ ಮುನ್ನವೇ ಪಾಕಿಸ್ತಾನ ಪರ ವಕೀಲರು ಕೋರ್ಟ್ ಆವರಣದಲ್ಲೇ ಕ್ಯಾತೆ ತೆಗೆದರು. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಪಾಕಿಸ್ತಾನದೊಳಗಿನ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರವಿಲ್ಲ ಎಂಬ ವಾದವನ್ನು ಮಂಡಿಸಿತು. ಆದರೆ, ನ್ಯಾಯಾಲಯದ ಇದನ್ನು ತಿರಸ್ಕರಿಸಿತು.
ಭಾರತದಲ್ಲಿ ಸಂಭ್ರಮಾಚರಣೆ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರವಾಗಿ ಮಧ್ಯಂತರ ತೀರ್ಪು ಹೊರಬೀಳುತ್ತಿದ್ದಂತೆ ದೇಶದ ಹಲವಾರು ನಗರಗಳಲ್ಲಿ ಸಂಭ್ರಮ ಮನೆ ಮಾಡಿತು.[ಕುಲಭೂಷಣ್ ಪರ ತೀರ್ಪಿಗೆ ದೇಶಾದ್ಯಂತ ಪ್ರಾರ್ಥನೆ]
ಗುರುವಾರ (ಮೇ 18) ಬೆಳಗ್ಗೆಯಿಂದಲೇ ದೇಶದ ನಾನಾ ನಗರಗಳಲ್ಲಿ ಕುಲಭೂಷಣ್ ಗಲ್ಲು ಶಿಕ್ಷೆ ರದ್ದಾಗುವಂತೆ ಕೋರುತ್ತಾ ಹಲವಾರು ದೇಗುಲಗಳಲ್ಲಿ ಜನರು ಪ್ರಾರ್ಥನೆ ಸಲ್ಲಿಸಿದ್ದರು. ಹಾಗಾಗಿ, ನ್ಯಾಯಾಲಯ ನೀಡಿದ ತೀರ್ಪು ಎಲ್ಲರಿಗೂ ಖುಷಿ ತಂದಿತು.
ಮುಂಬೈನಲ್ಲಿರುವ ಜಾಧವ್ ನಿವಾಸದ ಮುಂದೆ ಜಮಾಯಿಸಿದ ಜನ, ಪಟಾಕಿ ಸಿಡಿಸಿ ಸಂಭ್ರಮಿಸಿದರು.