ಕುಲಭೂಷಣ್ ಬಗ್ಗೆ ಕಥೆ ಕಟ್ಟುತ್ತಿದೆಯಾ ಪಾಕ್, ಏಜೆಂಟರು ಹೇಗಿರ್ತಾರೆ ಗೊತ್ತಾ?
ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಕಥೆ ಕಟ್ಟುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಏಕೆ ಅನುಮಾನ ಎಂದು ತಿಳಿಯುವುದಕ್ಕೆ ಈ ವರದಿ ಓದಿ.
ಬೆಂಗಳೂರು, ಏಪ್ರಿಲ್ 13: ಗುಪ್ತಚರ ಇಲಾಖೆಯಲ್ಲಾಗಲಿ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ನಲ್ಲಾಗಲೀ ಒಂದು ಸರಳ ನಿಯಮ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಏಜೆಂಟನ ಗುರುತು ಬಯಲಾಯಿತು ಅಂದರೆ ಜೀವಕ್ಕೆ ಅತನೇ ಹೊಣೆ. ಯವುದೇ ಏಜೆಂಟ್ ನ ಬೇರೆ ದೇಶಕ್ಕೆ ಗುಪ್ತ ಕಾರ್ಯಾಚರಣೆಗೆ ಕಳುಹಿಸಿದರೆ, ಒಂದು ವೇಳೆ ಸಿಕ್ಕಿಬಿದ್ದರೆ ತಾನು ಯಾರಿಗೆ ಕೆಲಸ ಮಾಡ್ತೀನಿ ಅನ್ನೋದು ಬಾಯಿ ಬಿಡುವ ಹಾಗಿಲ್ಲ.
ಈ ಷರತ್ತಿಗೆ ಒಪ್ಪಿಕೊಂಡೇ ಆ ಏಜೆಂಟ್ ಕೆಲಸಕ್ಕೆ ಒಪ್ಪಿಕೊಂಡಿರ್ತಾನೆ. ಇದು ಹೇಗೆಂದರೆ ಡೆತ್ ವಾರಂಟ್ ಗೆ ಸಹಿ ಹಾಕಿದಂತೆಯೇ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಯಾವುದೇ ವ್ಯಕ್ತಿಯನ್ನು ತನಿಖಾ ಸಂಸ್ಥೆಗಳು ಆಯ್ಕೆ ಮಾಡಿಕೊಂಡ ನಂತರ ವಿವಿಧ ಹಂತದಲ್ಲಿ ಆ ವ್ಯಕ್ತಿಯ ಹಿನ್ನೆಲೆ ಬಗ್ಗೆ ಪರೀಕ್ಷೆಗಳು ನಡೆಯುತ್ತವೆ.[ಜಾಧವ್ ಬಿಡುಗಡೆಗೆ ಭಾರತ ಕಂಡುಕೊಂಡ 2 ಹೊಸ ಮಾರ್ಗ]
ಆ ನಂತರ ಆ ವ್ಯಕ್ತಿ ಕಾರ್ಯಾಚರಣೆಗೆ ಅರ್ಹ ಅನಿಸಿದ ನಂತರವಷ್ಟೇ ಆಯ್ಕೆ ಮಾಡಲಾಗುತ್ತದೆ. ಆದರೆ ತುಂಬ ಮುಖ್ಯವಾದ ನಿಯಮ ಏನೆಂದರೆ, ಒಂದು ವೇಳೆ ಆತ ಸಿಕ್ಕಿಬಿದ್ದರೆ ಯಾವ ಕಾರಣಕ್ಕೂ ಯಾರಿಗಾಗಿ ತಾನು ಕೆಲಸ ಮಾಡ್ತಿದೀನಿ ಎಂದು ಬಾಯಿ ಬಿಡೋ ಹಾಗಿಲ್ಲ.
ನಂಬುವುದು ಕಷ್ಟ
ಇಂಥ ಕಠಿಣ ನಿಯಮಗಳಿರುವಾಗ ಕುಲಭೂಷಣ್ ಜಾಧವ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂಬುದನ್ನು ನಂಬೋದು ಕಷ್ಟ. ವಿಡಿಯೋದಲ್ಲಿ ಆತ ತಾನು 'ರಾ' ಏಜೆಂಟ್ ಎಂದು ಒಪ್ಪಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಬಲೂಚಿಸ್ತಾನ ಕಾರ್ಯಾಚರಣೆಯ ಮಾಹಿತಿಯನ್ನು ಕೂಡ ಹೇಳುತ್ತಾನೆ.
ಮಾತುಗಳನ್ನು ತುರುಕಲಾಗಿದೆ
ವಿಡಿಯೋ ನಕಲಿ ಎಂಬುದನ್ನು ಪರೀಕ್ಷಿಸುವ ಅಗತ್ಯವೇ ಕಂಡುಬರುವುದಿಲ್ಲ. ಏಕೆಂದರೆ ಆತನ ಮಾತಿಗೂ ತುಟಿಯ ಚಲನೆಗೂ ತಾಳೆಯೇ ಆಗುತ್ತಿಲ್ಲ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಯಾವ ವಿಡಿಯೋ ಬಗ್ಗೆ ಹೇಳುತ್ತಿದ್ದಾರೋ ಅದರಲ್ಲಿ ಮಾತುಗಳನ್ನು ತುರುಕಲಾಗಿದೆ ಎಂಬುದು ಗೊತ್ತಾಗುತ್ತದೆ.
ಬಾಯಿ ಬಿಡುತ್ತಿರಲಿಲ್ಲ
ಅದಕ್ಕಿಂತ ಮುಖ್ಯವಾಗಿ ಆತನನ್ನು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನೇಮಿಸಿದ್ದರೆ ತುಂಬ ಪರೀಕ್ಷೆ ನಂತರವೇ ಕಾರ್ಯಾಚರಣೆಗೆ ಕಳುಹಿಸುತ್ತಿತ್ತು. ಒಂದು ವೇಳೆ ಆತ ಏಜೆಂಟ್ ಆಗಿದ್ದರೆ, ಅದೆಂಥ ಚಿತ್ರಹಿಂಸೆ ನೀಡಿದ್ದರೂ ಆತ ಬಾಯಿ ಬಿಡುತ್ತಿರಲಿಲ್ಲ. ಇನ್ನೊಂದು ವಿಚಾರ ಏನೆಂದರೆ ತಾನು ಸೇವೆ ಸಲ್ಲಿಸುವುದಾಗಿ 2010 ಮತ್ತು 2012ರಲ್ಲಿ ಆತ ತನಿಖಾ ದಳಕ್ಕೆ ಮನವಿ ಮಾಡಿದ್ದರು. ಆದರೆ ನಂಬಿಕಸ್ತ ಅಲ್ಲ ಅನ್ನೋ ಕಾರಣಕ್ಕೆ ಮನವಿ ತಿರಸ್ಕೃತವಾಗಿತ್ತು.
ಮಾತುಕತೆಯಿಂದ ತಪ್ಪಿಸಲು ಷಡ್ಯಂತ್ರ
ಪಠಾಣ್ ಕೋಟ್ ದಾಳಿಯ ತನಿಖೆ ನಡೆಯುತ್ತಿರುವಾಗ ಜಾಧವ್ ಪಾಕಿಸ್ತಾನದ ಪಾಲಿಗೆ ಗುರಾಣಿಯಂತೆ ಸಿಕ್ಕಿದ್ದಾರೆ. ಜಾಧವ್ ಮರಣದಂಡನೆ ವಿಚಾರ ಭಾರತದೊಂದಿಗಿನ ಮಾತುಕತೆಯಿಂದ ತಪ್ಪಿಸಿಕೊಳ್ಳಲು ಸಿಕ್ಕಿರುವ ಅವಕಾಶ. ಆದ್ದರಿಂದಲೇ ಭಾರತವು ನೇಪಾಳದಲ್ಲಿ ಸಿಕ್ಕಿದ್ದ ಪಾಕ್ ಏಜೆಂಟನನ್ನು ಹಾಗೇ ಬಿಟ್ಟಿತ್ತು.