ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಗೆಲುವು ಸಂಭ್ರಮಿಸಿದವರ ವಿರುದ್ಧ ದೂರು ನೀಡಿದರೆ ಹುಷಾರ್!
ಇಸ್ಲಮಾಬಾದ್, ಅಕ್ಟೋಬರ್ 27: ಐಸಿಸಿ ವಿಶ್ವಕಪ್ ಟಿ-20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಮೊದಲ ಪಂದ್ಯ ಮುಗಿದು ಮೂರು ದಿನ ಕಳೆದರೂ ಈ ಪಂದ್ಯದ ಸುತ್ತಲಿನ ಚರ್ಚೆ ಇನ್ನೂ ಮುಂದುವರಿದಿದೆ.
ಅಕ್ಟೋಬರ್ 24ರಂದು ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಶ್ರೀನಗರ ವೈದ್ಯಕೀಯ ವಿದ್ಯಾರ್ಥಿ ವಿರುದ್ಧ ದೂರು ನೀಡಿದವರಿಗೆ ಯುನೈಟೆಡ್ ಲಿಬರೇಶನ್ ಫ್ರಂಟ್(ಯುಎಲ್ಎಫ್) ಉಗ್ರ ಸಂಘಟನೆ ಬೆದರಿಕೆ ಹಾಕಿದೆ.
ಪಾಕಿಸ್ತಾನದ ಗೆಲುವು ಸಂಭ್ರಮಿಸಿದ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದವರು 48 ಗಂಟೆಗಳಲ್ಲಿ ದೂರು ವಾಪಸ್ ಪಡೆದು ಕ್ಷಮೆಯಾಚಿಸಬೇಕು. "ಈ ಎಫ್ಐಆರ್ಗಳ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ನಾವು ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೇವೆ. ಸ್ಥಳೀಯರಲ್ಲದ ನೌಕರರು ಮತ್ತು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ," ಎಂದು ಉಗ್ರಗಾಮಿ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯ ಹೊಣೆಯನ್ನು ಇದೇ ಯುಎಲ್ಎಫ್ ಸಂಘಟನೆ ವಹಿಸಿಕೊಂಡಿತ್ತು.

ಜಮ್ಮು ಕಾಶ್ಮೀರದಲ್ಲಿ ಪಾಕ್ ಗೆಲುವಿನ ಸಂಭ್ರಮ:
ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದನ್ನು ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ ಜಯಘೋಷಣೆ ಕೂಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕೇಸ್:
ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಆಚರಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಶ್ರೀನಗರದ ಕರಣ್ ನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಎಸ್ಕೆಐಎಂಎಸ್ ಸೌರಾದಲ್ಲಿ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸಾಂಬಾ ಜಿಲ್ಲೆಯಲ್ಲೂ ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮಾನವೀಯತೆಯ ಆಧಾರದ ಮೇಲೆ ಯುಎಪಿಎ ಆರೋಪಗಳನ್ನು ಹಿಂಪಡೆಯುವಂತೆ ಜೆ-ಕೆ ವಿದ್ಯಾರ್ಥಿ ಸಂಘವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಒತ್ತಾಯಿಸಿತ್ತು.
ದೇಶದ ವಿರುದ್ಧ ಪಿತೂರಿ ಅಡಿ ಶಿಸ್ತುಕ್ರಮ:
"ನಮ್ಮ ಮಾತೃಭೂಮಿಯ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆಯನ್ನು ಉಂಟು ಮಾಡುವ ಯಾರೇ ಆಗಿದ್ದರೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಕಾಶ್ಮೀರ ಮತ್ತು ಇತರೆಡೆಗಳಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದವರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ದೇಶದ ವಿರುದ್ಧದ ಪಿತೂರಿಯಡಿ ಗಲಭೆ ಸೃಷ್ಟಿಸಿದವರನ್ನು ಗುರುತಿಸಲಾಗುತ್ತಿದೆ. ಪೊಲೀಸರು, ಸಿಐಡಿ ಮತ್ತು ಎನ್ಐಎ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲರನ್ನೂ ಜೈಲಿಗೆ ಹಾಕಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಹೇಳಿದ್ದಾರೆ.
ಪಾಕ್ ಗೆಲುವನ್ನು "ಇಸ್ಲಾಂ ವಿಜಯ" ಎಂದಿದ್ದ ಸಚಿವ ಶೇಖ್ ರಶೀದ್
ಐಸಿಸಿ ವಿಶ್ವಕಪ್ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧದ ಪಾಕಿಸ್ತಾನದ ಗೆಲುವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಣ್ಣಿಸಿದರು. ಪಾಕಿಸ್ತಾನದ ಸಚಿವ ಆಂತರಿಕ ಸಚಿವ ಶೇಖ್ ರಶೀದ್ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡಿತ್ತು. "ಭಾರತದ ವಿರುದ್ಧ ರಾಷ್ಟ್ರದ ಗೆಲುವು 'ಇಸ್ಲಾಂನ ವಿಜಯ' ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 10 ವಿಕೆಟ್ಗಳಿಂದ ಗೆಲುವು ಸಾಧಿಸಿದ ಬೆನ್ನಲ್ಲೇ ಸಚಿವ ರಶೀದ್ ಈ ರೀತಿ ಹೇಳಿಕೆ ನೀಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳುವಂತೆ ಭಾರತದಲ್ಲಿ ಮುಸ್ಲಿಮರು ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಮರು ಪಂದ್ಯದ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರು. "ಪಾಕಿಸ್ತಾನಕ್ಕೆ, ಇಂದಿನ ಭಾರತ-ಪಾಕಿಸ್ತಾನ ಪಂದ್ಯವೇ ಅಂತಿಮ" ಎಂದು ಹೇಳಿದ್ದರು.












Click it and Unblock the Notifications