ಕರ್ತರ್ ಪುರ್ ಕಾರಿಡಾರ್ ವಿಚಾರದಲ್ಲಿ ಭಾರತದ ಪ್ರತಿಕ್ರಿಯೆ 'ಬಾಲಿಶ': ಪಾಕ್
ಕರ್ತರ್ ಪುರ್ ಕಾರಿಡಾರ್ ನ ಆರಂಭಕ್ಕೆ ಸಂಬಂಧಿಸಿದಂತೆ ಒಪ್ಪಂದ ಅಂತಿಮಗೊಳಿಸುವ ವಿಚಾರದಲ್ಲಿ ಭಾರತದ ಪ್ರತಿಕ್ರಿಯೆ 'ಬಾಲಿಶ' ಎಂದು ಗುರುವಾರ ಪಾಕಿಸ್ತಾನ ಹೇಳಿದೆ. ಇಸ್ಲಾಮಾಬಾದ್ ನ ಪ್ರತಿಕ್ರಿಯೆ 'ಪ್ರಬುದ್ಧ'ವಾಗಿರಲಿದೆ ಎಂದು ಕೂಡ ಸೇರಿಸಿದೆ.
ವಿದೇಶಾಂಗ ಕಚೇರಿ ವಕ್ತಾರ ಮುಹಮ್ಮದ್ ಫೈಸಲ್ ಮಾತನಾಡಿ, ಸಂಪೂರ್ಣವಾದ ಪ್ರಸ್ತಾವದೊಂದಿಗೆ ಒಪ್ಪಂದದ ಕರಡನ್ನು ಪಾಕಿಸ್ತಾನವು ಭಾರತದ ಅಧಿಕಾರಿಗಳೊಂದಿಗೆ ಹಂಚಿಕೊಂಡಿತ್ತು. ಮತ್ತು ಭಾರತದ ನಿಯೋಗವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿ, ಒಪ್ಪಂದದ ಬಗ್ಗೆ ಚರ್ಚಿಸಿ, ಅಂತಿಮಗೊಳಿಸುವಂತೆ ಕೇಳಿತ್ತು.
ಪಾಕಿಸ್ತಾನದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸದೆ, ಪಾಕಿಸ್ತಾನಿ ನಿಯೋಗವನ್ನೇ ನವದೆಹಲಿಗೆ ಭಾರತವು ಆಹ್ವಾನಿಸಿದೆ. ಫೆಬ್ರವರಿ ಇಪ್ಪತ್ತಾರು ಹಾಗೂ ಮಾರ್ಚ್ ಏಳರಂದು ಸಂಭವನೀಯ ದಿನಾಂಕವನ್ನು ಕೂಡ ಚರ್ಚೆಗಾಗಿ ಹೇಳಿದೆ ಎಂದು ಫೈಸಲ್ ಹೇಳಿದ್ದಾರೆ.

ಭಾರತದಂತೆ ಅಲ್ಲದೆ ಪಾಕಿಸ್ತಾನವು ತುಂಬ ಪ್ರಬುದ್ಧ ಹಾಗೂ ಒಪ್ಪಬಹುದಾದ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ತುಂಬ ಮುಖ್ಯವಾದ ಈ ವಿಚಾರದಲ್ಲಿ ಭಾರತದ ನಡೆಗೆ ಶೀಘ್ರವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ. ಭಾರತವು ಕಳೆದ ವರ್ಷ 2300 ಕದನ ವಿರಾಮ ಉಲ್ಲಂಘನೆ ಮಾಡಿದೆ. ಈಗಲೂ ಆ ಉಲ್ಲಂಘನೆ ಮುಂದುವರಿಯುತ್ತಲೇ ಇದೆ ಎಂದು ಆರೋಪಿಸಿದ್ದಾರೆ.
ಭಾರತದ ಅಪ್ರಚೋದಿತ ಗುಂಡಿನ ದಾಳಿಗೆ ಪಾಕಿಸ್ತಾನ ಕೂಡ ಗಡಿ ನಿಯಂತ್ರಣ ರೇಖೆಯಲ್ಲಿ ತಕ್ಕ ಉತ್ತರ ನೀಡಿದೆ. ಭಾರತದ ರೀತಿಯಲ್ಲೇ ಪಾಕಿಸ್ತಾನ ಕೂಡ ಪ್ರತಿಕ್ರಿಯಿಸುತ್ತದೆ. ಶಾಂತಿಯ ಭಾಷೆಯಲ್ಲಿ ಮಾತನಾಡಿದರೆ ಶಾಂತಯುತವಾಗಿಯೂ, ಗುಂಡಿನ ಭಾಷೆಯಲ್ಲಿ ಮಾತನಾಡಿದರೆ, ಬಂದೂಕಿನ ಮೂಲಕವೇ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.
ಪಾಕಿಸ್ತಾನದ ಜಲ ಗಡಿಯೊಳಗೆ ಪದೇಪದೇ ಭಾರತದ ಮೀನುಗಾರಿಕೆ ದೋಣಿಗಳು ನುಸುಳುತ್ತಿವೆ. ಇವು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.












Click it and Unblock the Notifications