ಪಂಜಾಬ್ ಮೂಲದ ಯುವಕ ಟೊರೆಂಟೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೆನಡಾದ ಟೊರೆಂಟೋದಲ್ಲಿನ ತನ್ನ ಮನೆಯ ಹೊರಭಾಗದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪಂಜಾಬ್ ನ ಯುವಕನೊಬ್ಬ ಪತ್ತೆಯಾಗಿದ್ದಾನೆ. ಆತ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಸಲುವಾಗಿ ಆ ದೇಶಕ್ಕೆ ತೆರಳಿದ್ದ. ಈ ಬಗ್ಗೆ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಯುವಕನ ಕುಟುಂಬದವರು ತಿಳಿಸಿದ್ದಾರೆ.
ಇಪ್ಪತ್ತೊಂದು ವರ್ಷದ ವಿಶಾಲ್ ಶರ್ಮಾನ ಸಾವು ನಭಾದಲ್ಲಿರುವ ಆತನ ಕುಟುಂಬದವರನ್ನು ಆಘಾತಕ್ಕೆ ಈಡು ಮಾಡಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಇನ್ನು ಮೂರು ದಿನದಲ್ಲಿ ಮಾಹಿತಿ ನೀಡುತ್ತೇವೆ ಎಂದು ಯುವಕನ ತಂದೆ ನರೇಶ್ ಶರ್ಮಾ ಅವರಿಗೆ ಕೆನಡಾ ಪೊಲೀಸರು ತಿಳಿಸಿದ್ದಾರೆ. ಆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ವಿಶಾಲ್ ನ ದೇಹ ಬಹಳ ಎತ್ತರದಲ್ಲಿ ತೂಗಾಡುತ್ತಿದೆ. ಆದ್ದರಿಂದ ಅವನನ್ನು ಯಾರಾದರೂ ಕೊಲೆ ಮಾಡಿರಬಹುದು ಎಂದು ವಿಶಾಲ್ ನ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. "ಅವನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣಗಳೇ ಇಲ್ಲ. ಅದೂ ಮನೆಯ ಹೊರಗೆ ಮರಕ್ಕೆ ನೇಣು ಹಾಕಿಕೊಂಡು ಏಕೆ ಸಾಯಬೇಕು ಎಂದು ಕುಟುಂಬದ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.

ವಿಶಾಲ್ ಕೆನಡಾದಲ್ಲಿ ಸಂತೋಷವಾಗಿದ್ದ. ಜುಲೈನಲ್ಲಿ ಕುಟುಂಬದವರೊಬ್ಬರ ಮದುವೆ ಸಲುವಾಗಿ ನಭಾಗೆ ಬಂದಿದ್ದವನು ಸೆಪ್ಟೆಂಬರ್ ನಲ್ಲಿ ವಾಪಸ್ ಹೋಗಿದ್ದ. ಅವನ ಜತೆ ಆಗಾಗ ಫೋನ್ ನಲ್ಲಿ ಮಾತನಾಡುತ್ತಾ ಇದ್ದೆವು. ಶನಿವಾರ ಹಾಗೂ ಭಾನುವಾರ ಕೂಡ ಮಾತನಾಡಿದ್ದೇವೆ. ಅವನ ಸೋದರ ಸಂಬಂಧಿಗಳ ಜತೆ ಮಾತನಾಡುತ್ತಿದ್ದ. ಅಲ್ಲೇನೂ ಸಮಸ್ಯೆಯಿಲ್ಲ ಎಂದಿದ್ದ. ಏನಾಯಿತು ಅನ್ನೋದು ನಮಗೆ ಗೊತ್ತಿಲ್ಲ ಎಂದು ನರೇಶ್ ಶರ್ಮಾ ಹೇಳಿದ್ದಾರೆ.
ವಿಶಾಲ್ ದೇಹವನ್ನು ದೇಶಕ್ಕೆ ತರಲು ನೆರವು ಮಾಡುವಂತೆ ಕುಟುಂಬದವರು ಸರಕಾರಕ್ಕೆ ಮನವಿ ಮಾಡಿದ್ದಾರೆ. ವಿಶಾಲ್ ಕೆನಡಾದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ. ಆತನ ಜತೆಗೆ ನಭಾ ಮೂಲದ ಮತ್ತೊಬ್ಬ ಯುವಕ ಇದ್ದ. ವಿಶಾಲ್ ತಂದೆ ನರೇಶ್ ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತೆ ಆಗಿದ್ದಾರೆ. ತಮ್ಮ ಮಗನನ್ನು ವಿದೇಶಕ್ಕೆ ಕಳುಹಿಸುವ ಸಲುವಾಗಿ 8 ಲಕ್ಷ ಶಿಕ್ಷಣ ಸಾಲ ತೆಗೆದುಕೊಂಡಿದ್ದಾರೆ.












Click it and Unblock the Notifications