ನಾನು ಚೀನಾದವನಲ್ಲ, ಭಾರತೀಯ ಅಂದ್ರೂ ಯಹೂದಿಯನ್ನು ಬಿಡಲಿಲ್ಲ
ಜೆರುಸಲೇಮ್, ಮಾರ್ಚ್ 17: ಇಬ್ಬರು ಯುವಕರು ಸೇರಿ ಭಾರತ ಮೂಲದ ಯಹೂದಿಯನ್ನು ಚೀನಾದವರೆಂದುಕೊಂಡು 'ಕೊರೊನಾ'ಕೊರೊನಾ' ಎಂದು ಅಮಾನವೀಯವಾಗಿ ಥಳಿಸಿರುವ ಘಟನೆ ಇಸ್ರೇಲ್ನ ಟಿಬೆರಿಯಾಸ್ ನಗರದಲ್ಲಿ ನಡೆದಿದೆ.
ಆಮ್ ಶಾಲೆಂ ಸಿಂಗ್ಸನ್ 28 ಥಳಿತಕ್ಕೊಳಗಾದ ಯಹೂದಿಯಾಗಿದ್ದಾರೆ. ಅವರು ಮಣಿಪುರ ಹಾಗೂ ಮಿಜೋರಾಂ ರಾಜ್ಯಗಳನ್ನುಸುತ್ತಾಡಿಕೊಂಡು ಇಸ್ರೇಲ್ಗೆ ಬಂದಿದ್ದರು. ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಅಲ್ಲಿಯ ಪೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಘಟನೆ ನಡೆದ ಬಳಿಕ ಯಹೂದಿ ಪೊಲೀಸರಿಗೆ ದೂರು ನೀಡಿದ್ದು ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿ ದಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. 'ನಾನು ಚೀನಾದವನಲ್ಲ , ನನಗೆ ಕೊರೊನಾ ಕೂಡ ಇಲ್ಲ ಎಂದು ಎಷ್ಟು ಹೇಳಲು ಪ್ರಯತ್ನಿಸಿದರೂ ಮಾತನಾಡಲು ಅವಕಾಶ ನೀಡದೆ ಥಳಿಸಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಘಟನೆ ಶನಿವಾರ ನಡೆದಿದೆ. ಅವರು ಕಳೆದ ಮೂರು ವರ್ಷಗಳ ಹಿಂದೆ ಕುಟುಂಬದ ಜೊತೆ ಭಾರತದಿಂದ ಇಸ್ರೇಲ್ಗೆ ಹೋಗಿ ನೆಲೆಸಿದ್ದರು. ಈ ಘಟನೆ ನಡೆದಿರುವ ಬಗ್ಗೆ ಹೇಳಲು ಯಾರೂ ಪ್ರತ್ಯಕ್ಷದರ್ಶಿಗಳಿಲ್ಲ. ಆ ಪ್ರದೇಶದಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಬೇಕಿದೆ.
ಈ ರೀತಿ ಯಹೂದಿಯೊಬ್ಬರ ಮೇಲೆ ನಗರದಲ್ಲಿ ಹಲ್ಲೆ ನಡೆಯುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶೇವೈ ಇಸ್ರೇಲ್ನ ಸಂಸ್ಥಾಪಕ ಮೈಕೆಲ್ ತಿಳಿಸಿದ್ದಾರೆ. ಆದಷ್ಟು ಬೇಗ ಆ ದುಷ್ಕರ್ಮಿಗಳನ್ನು ಹುಡುಕಿ ಅವರಿಗೆ ಶಿಕ್ಷೆ ನೀಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಹೂದಿ ಮೆನಾಶೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ.












Click it and Unblock the Notifications