ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತವಾಗಿದೆಯೇ?
ನವದೆಹಲಿ, ಸೆಪ್ಟೆಂಬರ್ 03: ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತವಾಗಿದೆ ಹಾಗೂ ಸಿಬ್ಬಂದಿಗೆ ವೇತನ ಕೂಡ ದೊರೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಣ ಡ್ರಾ ಮಾಡಿಕೊಳ್ಳಲು ರಾಯಭಾರಿ ಸಿಬ್ಬಂದಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಹಲವು ಭಾರತೀಯರು ಕಾಬೂಲ್ನಿಂದ ವಾಪಸ್ ಆಗಿದ್ದಾರೆ. ಅಲ್ಲಿರುವ ನಮ್ಮ ಸಿಬ್ಬಂದಿ ಏರ್ಲಿಫ್ಟ್ಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಕಾಬೂಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ವಿಮಾನಗಳ ಹಾರಾಟವನ್ನು ತಾಲಿಬಾನ್ಗಳು ರದ್ದು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 3: ಅಫ್ಘಾನಿಸ್ತಾನದಲ್ಲಿ ಇಂದೇ ತಾಲಿಬಾನ್ ಸಂಘಟನೆ ಸರ್ಕಾರ ರಚನೆ
ತಾಲಿಬಾನ್ ಆಡಳಿತಕ್ಕೆ ಸಜ್ಜಾಗಿರುವ ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿ ಭಾರತೀಯ ರಾಯಭಾರಿ ಕಚೇರಿ ಇದ್ದು, ರಾಯಭಾರಿ ಕಚೇರಿ ಸುರಕ್ಷಿತವಾಗಿದ್ದು, ರಾಯಭಾರಿ ಕಚೇರಿ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಭಾರತದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾಬೂಲ್ನಲ್ಲಿರುವ ರಾಯಭಾರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದೆ. ಅಲ್ಲಿರುವ ನಮ್ಮ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಫ್ಘಾನ್ನಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದ ಅಲ್ಲಿನ ಬ್ಯಾಂಕುಗಳ ಸೇವೆ ಸ್ಥಗಿತವಾಗಿದೆ.
ಉಳಿದವರನ್ನು ಕರೆ ತರುವ ಕುರಿತು ನಿರ್ಧಾರ
ಉಳಿದವರನ್ನು ಕರೆತರಲು ತಾಲಿಬಾನ್ ಸರ್ಕಾರದ ಜೊತೆ ಭಾರತ ಹೇಗೆ ವ್ಯವಹಾರ ನಡೆಸುತ್ತೆ ಎಂಬುದರ ಮೇಲೆ ಮುಂದಿನ ನಿರ್ಧಾರವಾಗುತ್ತೆ ಎಂದು ಮೂಲಗಳು ತಿಳಿಸಿವೆ.
550 ಮಂದಿಯನ್ನು ಸ್ಥಳಾಂತರಿಸಲಾಗಿದೆ
ಕಾಬೂಲ್, ದುಶಾಂಬೆ ವಿಮಾನ ನಿಲ್ದಾಣದ ಮೂಲಕ ಈವರೆಗೆ 550 ಮಂದಿಯನ್ನು ಕೇಂದ್ರ ಸರ್ಕಾರ ಸ್ಥಳಾಂತರಿಸಿದೆ. ಇದರಲ್ಲಿ 260 ಮಂದಿ ಭಾರತೀಯ ಇದ್ದಾರೆ. ಇತರ ದೇಶಗಳ ಏಜೆನ್ಸಿಗಳ ಮೂಲಕವೂ ಭಾರತೀಯರನ್ನು ಏರ್ಲಿಫ್ಟ್ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಅಮೆರಿಕಾ, ತಜಿಕಿಸ್ತಾನ ಸೇರಿದಂತೆ ಇತರ ದೇಶಗಳ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರರು ಈ ಹಿಂದೆ ತಿಳಿಸಿದ್ದರು.
ಕಾಬೂಲ್ನಲ್ಲಿ ಸಿಲುಕಿರುವ ಉಳಿದ ಭಾರತೀಯರನ್ನು ವಾಪಸ್ ಕರೆ ತರಲು ಮತ್ತೆ ಸ್ಥಳಾಂತರ ಕಾರ್ಯಾಚರಣೆ ಶೀಘ್ರವೇ ಆರಂಭಿಸುವ ಸಾಧ್ಯತೆ ಇದೆ. ಈ ವಿಚಾರವಾಗಿ ಸರ್ಕಾರ ಕಾಬೂಲ್ ಹಾಗೂ ಅಲ್ಲಿನ ರಾಯಭಾರಿ ಸಿಬ್ಬಂದಿ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಪ್ರಸ್ತುತ ಎಷ್ಟು ಮಂದಿ ಭಾರತೀಯರು ಕಾಬೂಲ್ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ನೀಡಿಲ್ಲ.
ತಾಲಿಬಾನ್ ಜತೆ ಭಾರತ ಮಾತುಕತೆ
ಎರಡು ದಿನಗಳ ಹಿಂದಷ್ಟೇ, ತಾಲಿಬಾನ್ ಮನವಿ ಮೇರೆಗೆ ಭಾರತ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ತಾಲಿಬಾನ್ ಉಗ್ರವಾದ, ಭಾರತ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿತ್ತು.
ಖತಾರ್ನ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮನವಿ ಮೇರೆಗೆ ಭಾರತದ ಖತಾರ್ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ದೀಪಕ್ ಮಿತ್ತಲ್ ಹಲವು ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ. ಭಾರತದ ಎಲ್ಲಾ ಕಾಳಜಿಯನ್ನು ಸೂಕ್ತವಾಗಿ ಪರಿಹರಿಸುವ ಭರವಸೆಯನ್ನು ತಾಲಿಬಾನ್ ಪ್ರತಿನಿಧಿಗಳು ನೀಡಿದ್ದಾರೆ.
ತಾಲಿಬಾನ್ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಹಾಗೂ ಭಾರತಕ್ಕೆ ಆಗಮಿಸಲು ಇಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಸ್ಥಳಾಂತರ ಕುರಿತು ದೋಹಾ ಕಚೇರಿಯಲ್ಲಿ ಚರ್ಚಿಸಲಾಯಿತು. ಈ ಮಾತುಕತೆಯಲ್ಲಿ ಆಫ್ಘಾನಿಸ್ತಾನ ನೆಲವನ್ನು ಯಾವುದೇ ಕಾರಣಕ್ಕೂ ಭಾರತ ವಿರೋಧಿ ಚಟುವಟಿಕೆ, ಭಾರತ ವಿರುದ್ದ ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ದೀಪಕ್ ಮಿತ್ತಲ್ ತಾಲಿಬಾನ್ಗಳಿಗೆ ಸೂಚನೆ ನೀಡಿದ್ದಾರೆ.
ಭಾರತದ ರಾಯಭಾರಿ ದೀಪಕ್ ಮಿತ್ತಲ್ ಎತ್ತಿದ ಹಲವು ಕಾಳಜಿ ಹಾಗೂ ಸೂಚನೆಗಳನ್ನು ಸೂಕ್ತವಾಗಿ ಪರಿಹರಿಸುವುದಾಗಿ ತಾಲಿಬಾನ್ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಭಾರತದ ಜೊತೆ ಸೌಹಾರ್ಧಯುತ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.