ಭಾರತ-ಪಾಕ್ ಉದ್ವಿಗ್ನ: ಚೀನಾಗೆ ದೌಡಾಯಿಸಿದ ಪಾಕ್ ವಿದೇಶಾಂಗ ಸಚಿವ
ಇಸ್ಲಾಮಾಬಾದ್, ಆ 9: ಜಮ್ಮು, ಕಾಶ್ಮೀರ ವಿಭಜನೆ, ಆರ್ಟಿಕಲ್ 370 ರದ್ದತಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಹದೆಗೆಟ್ಟಿದೆ. ಈ ನಡುವೆ, ಪಾಕಿಸ್ತಾನದ ವಿದೇಶಾಂಗ ಸಚಿವರು ಚೀನಾಗೆ ದೌಡಾಯಿಸಿದ್ದಾರೆ.
ಚೀನಾ ಸರಕಾರದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆಸಲು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಬೀಜಿಂಗ್ ಗೆ ತೆರಳಿದ್ದು, ಭಾರತದ ನಡೆ, ಕಾನೂನುಬಾಹಿರ ಎಂದು ಚೀನಾಗೆ ಮನವೊಲಿಸಲು ಮುಂದಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಲ್ಲಿ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂದಕ್ಕೆ ಪಡೆದ ವಿಚಾರ ಪ್ರಸ್ತಾವಿಸಲು ಮುಂದಾಗಿರುವ ಪಾಕಿಸ್ತಾನ, ಅದಕ್ಕೂ ಮೊದಲು ಚೀನಾದ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿದೆ.

'ಆರ್ಟಿಕಲ್ 370 ರದ್ದತಿಯನ್ನು ಹಿಂದಕ್ಕೆ ಪಡೆದು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಥಾಸ್ಥಿತಿ ಮುಂದುವರಿಸಿದರೆ, ಭಾರತದ ಜೊತೆಗಿನ ಎಲ್ಲಾ ಸಂಬಂಧಗಳನ್ನು ಮುಂದುವರಿಸುವ ಬಗ್ಗೆ ಚಿಂತಿಸಲಾಗುವುದು' ಎಂದು ಪಾಕ್ ವಿದೇಶಾಂಗ ಸಚಿವರು, ಗುರುವಾರ (ಆ 8) ಹೇಳಿಕೆ ನೀಡಿದ್ದರು.
ಕಾಶ್ಮೀರಿ ಜನರ ಹೋರಾಟದ ಬೆಂಬಲಕ್ಕಾಗಿ 'ಯಾವುದೇ ಹಂತಕ್ಕೆ ಹೋಗಲು' ಸಹ ಸಿದ್ಧ ಎಂದು ಪಾಕಿಸ್ತಾನ ಸೇನೆ ಈಗಾಗಲೇ ಹೇಳಿದೆ. ಕಾಶ್ಮೀರ ವಿಚಾರವಾಗಿ ಭಾರತದ ನಿರ್ಧಾರವನ್ನು ತಿರಸ್ಕರಿಸುವ ಪಾಕ್ ಸರಕಾರದ ತೀರ್ಮಾನವನ್ನು ಪೂರ್ಣವಾಗಿ ಬೆಂಬಲಿಸುವ ನಿರ್ಧಾರಕ್ಕೆ ಪಾಕ್ ಸೇನೆ ಬಂದಿತ್ತು.
ಪಾಕಿಸ್ತಾನ, ಇಸ್ಲಾಮಾಬಾದ್ ನಲ್ಲಿರುವ ಭಾರತದ ರಾಯಭಾರಿಯನ್ನು ಹೊರಹಾಕಿ, ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿತ್ತು. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿ, ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳನ್ನು ಅಮಾನತು ಮಾಡಿತ್ತು. (ಚಿತ್ರ: ಪಿಟಿಐ)












Click it and Unblock the Notifications