ಸೈನಿಕರನ್ನು ವಾಪಸ್ ಕರೆಸಿಕೊಳ್ಳಿ, ಇಲ್ಲಾಂದ್ರೆ ನಮ್ಮ ಆಯ್ಕೆ ಯುದ್ದ, ಚೀನಾ
ಬೀಜಿಂಗ್, ಜುಲೈ 5 (ಪಿಟಿಐ) : ಸಿಕ್ಕಿಂ ಗಡಿ ವಿಚಾರದಲ್ಲಿ ಯಾವುದೇ ರಾಜಿಗೆ ನಾವು ಸಿದ್ದವಿಲ್ಲ, ಜೊತೆಗೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಚೀನಾ ಮಂಗಳವಾರ (ಜು 4) ಭಾರತಕ್ಕೆ ಎಚ್ಚರಿಕೆ ನೀಡಿದೆ.
ದೋಕ್ಲಾಂ ವಲಯದಲ್ಲಿ ಭಾರತ ತನ್ನ ಸೈನಿಕರನ್ನು ಹಿಂದಕ್ಕೆ ಪಡೆದ ನಂತರವೇ ಮುಂದಿನ ಮಾತುಕತೆ ಎಂದಿರುವ ಚೀನಾ, ಭಾರತ ಸರಕಾರ ಪರಿಸ್ಥಿಯನ್ನು ಸರಿಯಾಗಿ ನಿಭಾಯಿಸದೇ ಇದ್ದಲ್ಲಿ ನಮಗಿರುವ ಮುಂದಿನ ಆಯ್ಕೆಯೆಂದರೆ 'ಯುದ್ದ' ಎನ್ನುವ ಖಡಕ್ ಎಚ್ಚರಿಕೆ ಚೀನಾ ನೀಡಿದೆಯೆಂದು ಪಿಟಿಐ ವರದಿ ಮಾಡಿದೆ.

ನೆರೆರಾಷ್ಟ್ರಗಳ ಜೊತೆ ಶಾಂತಿ, ಸೌಹಾರ್ದತೆಯಿಂದಿರಲು ಚೀನಾ ಬಯಸುತ್ತದೆ, ಆದರೆ ಅದು ನಮ್ಮ ದೌರ್ಭಲ್ಯವಲ್ಲ. ಈಗ ಎರಡು ದೇಶಗಳ ನಡುವೆ ಉಂಟಾಗಿರುವ ಬಿಗುವಿನ ವಾತಾವರಣಕ್ಕೆ ಭಾರತವೇ ಕಾರಣ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.
ಇತಿಹಾಸದ ಪಾಠಗಳಿಂದ ಭಾರತೀಯ ಸೈನಿಕರು ಪಾಠ ಕಲಿಯಬೇಕು ಎಂದು ಚೀನಾ ಭಾರತೀಯ ಸೈನಿಕರಿಗೆ ಎಚ್ಚರಿಕೆ ನೀಡುವ ಮೂಲಕ 1962ರ ಯುದ್ಧವನ್ನು ನೆನಪಿಸಿತ್ತು. 1962ರ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಚೀನಾಗೆ ತಿರುಗೇಟು ನೀಡಿದ್ದರು.
ದೋಕ್ಲಾಂ ಗಡಿಪ್ರದೇಶ ತನ್ನದೆಂದು ವಾದಿಸುತ್ತಿರುವ ಚೀನಾ ವಿವಾದಿತ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ರವಾನಿಸಿತ್ತು. ಚೀನಾಕ್ಕೆ ಅದರದೇ ಧಾಟಿಯಲ್ಲಿ ತಿರುಗೇಟು ನೀಡಿದ್ದ ಭಾರತ ದೋಕ್ಲಾಂ ಪ್ರದೇಶಕ್ಕೆ ತಾನೂ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದರಿಂದ ಪರಿಸ್ಥಿತಿ ಸಂಪೂರ್ಣ ಗಂಭೀರವಾಗಿದೆ.
ತಾನು ಚೀನಾಗೆ ದೊಡ್ಡ ಪ್ರತಿಸ್ಪರ್ಧಿ ಎಂದು ಭಾರತ ಭಾವಿಸಿದೆ, ಆದರೆ ಚೀನಾಗೆ ಭಾರತ ಯಾವ ಲೆಕ್ಕವೂ ಅಲ್ಲ ಎಂದು ಚೀನಾದ ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ಚೀನಾದ ಮಾಧ್ಯಮಗಳು ವರದಿ ಮಾಡುತ್ತಿವೆ.












Click it and Unblock the Notifications