ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲೇನು ಚರ್ಚೆ?
ನವದೆಹಲಿ, ಸಪ್ಟೆಂಬರ್.10: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿ ಸಂಘರ್ಷದ ನಡುವೆ ಶಾಂಘೈ ಸಹಕಾರ ಸಂಸ್ಥೆ(SCO)ಯ ಸಭೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಶಾಂತಿ ಮಾತುಕತೆ ನಡೆಸಲಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಸಭೆಯಲ್ಲಿ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಚರ್ಚೆ ನಡೆಸಲಿದ್ದಾರೆ ಎಂದರು.
ರಷ್ಯಾ: ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ಆರಂಭ
ಉಭಯ ನಾಯಕರ ನಡುವಿನ ಚರ್ಚೆಯ ಮುಖ್ಯ ಉದ್ದೇಶವೇ ಲಡಾಖ್ ಗಡಿಯಲ್ಲಿ ಶಾಂತಿ ಸ್ಥಾಪನೆ ಮಾಡುವುದಾಗಿದೆ. ಈ ವೇಳೆ ಕಳೆದ ನಾಲ್ಕು ತಿಂಗಳಿನಿಂದ ಗಡಿಯಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆ ಬಗ್ಗೆ ಭಾರತವು ಉಲ್ಲೇಖಿಸಲಿದೆ ಎಂದು ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ. ಗುರುವಾರ ಸಂಜೆ 6 ಗಂಟೆಗೆ ಜೈಶಂಕರ್ ಮತ್ತು ವಾಂಗ್ ಯೀ ನಡುವಿನ ಸಭೆ ಆರಂಭವಾಗಬೇಕಿದ್ದು, ಕೆಲವು ಕಾರಣಗಳಿಂದಾಗಿ ಸಭೆ ತಡವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತ-ಚೀನಾ ರಕ್ಷಣಾ ಸಚಿವರ ಸಭೆ ನಡೆಯಲಿಲ್ಲ:
ಮಾಸ್ಕೋದಲ್ಲೇ ನಡೆದ ಶಾಂಘೈ ಸಹಕಾರಿ ಸಂಸ್ಥೆಗಳ ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗಿ ಮುಖಾಮುಖಿಯಾಗಿದ್ದರು. ಶಾಂತಿ ಮಾತುಕತೆಗೆ ಚೀನಾ ರಕ್ಷಣಾ ಸಚಿವರು ಉತ್ಸುಕತೆ ತೋರಿದ್ದರೂ ಸಭೆ ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ.
ಲಡಾಖ್ ಗಡಿಯಲ್ಲಿ ಸೇನಾಧಿಕಾರಿಗಳ ಸಭೆ ವಿಫಲ:
Recommended Video
ಕಳೆದ ನಾಲ್ಕು ತಿಂಗಳಿನಿಂದ ಲಡಾಖ್ ಗಡಿಯಲ್ಲಿನ ಯಥಾ ಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮತ್ತು ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಚುಶುಲ್ ಪ್ರದೇಶದಲ್ಲಿ ಸೇನಾಧಿಕಾರಿಗಳ ಹಂತದ ಸಭೆಗಳು ಸಾಲು ಸಾಲಾಗಿ ನಡೆಯುತ್ತಿವೆ. ಇದರ ನಡುವೆಯೂ ಗಡಿರೇಖೆಯ ಸುತ್ತಮುತ್ತಲಿನ ಎತ್ತರ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಶಾಂತಿ ಮಾತುಕತೆಯು ವಿಫಲವಾಗುತ್ತಿದೆ.