ಮೈಕ್ರೋಸಾಫ್ಟ್ ಅತ್ಯುನ್ನತ ಹುದ್ದೆಗೆ ಭಾರತದ ಟೆಕ್ಕಿ
ವಾಷಿಂಗ್ಟನ್, ಫೆ.5: ನಾಡಿನ ಟೆಕ್ಕಿಯೊಬ್ಬರು ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಹೈದರಾಬಾದ್ ಮೂಲದ ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸತ್ಯ ನಾದೆಳ್ಲ (సత్య నాదెళ్ల) ಅವರು ಬಿಲ್ ಗೇಟ್ಸ್ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಿದ ಮೈಕ್ರೋಸಾಫ್ಟ್ ಎಂಬ ದೈತ್ಯ ಕಂಪನಿಯ ಚುಕ್ಕಾಣಿ ಹಿಡಿದಿದ್ದಾರೆ.
ಸತ್ಯ ನಾದೆಳ್ಲ ಅವರು ಅನಂತಪುರ ಜಿಲ್ಲೆಯ ಯಲ್ಲನೂರು ಮಂಡಳ ಬುಕ್ಕಾಪುರಂ ಗ್ರಾಮದವರು. ಅವರ ತಂದೆ ಯುಗಂಧರ್ ಮಾಜಿ ಐಎಎಸ್ ಅಧಿಕಾರಿ, ಪ್ರಧಾನ ಮಂತ್ರಿಯ ಕಾರ್ಯದರ್ಶಿಯಾಗಿದ್ದವರು.

ಬಿಲ್ ಗೇಟ್ಸ್ ನಂತರ ಮೈಕ್ರೋಸಾಫ್ಟ್ ಕಂಪನಿಗೆ ಮೂರನೆಯ CEO ಆಗಿದ್ದಾರೆ. ಹಾಲಿ ಸಿಇಒ ಸ್ಟೀವ್ ಬಾಲ್ಮರ್ ಅವರು ಆಗಸ್ಟ್ನಲ್ಲಿ ತಮ್ಮ ಹುದ್ದೆಗೆ ವಿದಾಯ ಹೇಳುವ ಇಂಗಿತ ವ್ಯಕ್ತಪಡಿಸಿದ್ದರು. ಸತ್ಯ ನಾದೆಳ್ಲ, ಪ್ರಸ್ತುತ ಕಂಪನಿಯಲ್ಲಿ ಕಂಪ್ಯೂಟಿಂಗ್ ಪ್ಲಾಟ್ ಫಾರಂ, ಡೆವಲಪರ್ ಟೂಲ್ಸ್ ಮತ್ತು ಕ್ಲೌಡ್ ಸೇವೆಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
20 ವರ್ಷದಿಂದ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಟೆಕ್ಕಿಯಾಗಿ ಸೇವೆ ಸಲ್ಲಿಸುತ್ತಿರುವ 46 ವರ್ಷದ ಸತ್ಯ ನಾದೆಳ್ಲ ಅವರು ಇದೀಗ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ. ಕಂಪನಿಯು 6 ತಿಂಗಳಿಂದ ತನ್ನ ಮುಂದಿನ ಸಿಇಒ ಆಯ್ಕೆ ಸಂಬಂಧ ತೀವ್ರ ಕಸರತ್ತು ನಡೆಸಿತ್ತು. ತಮಿಳುನಾಡಿನ ಸುಂದರ್ (ಗೂಗಲ್ ಕ್ರೋಮ್ ಮತ್ತು ಆ್ಯಪ್ ಉಪಾಧ್ಯಕ್ಷ ) ತೀವ್ರ ಪೈಪೋಟಿ ನೀಡಿದ್ದರು.
ಮಣಿಪಾಲದಲ್ಲಿ ಶಿಕ್ಷಣ ಪಡೆದ ಬಳಿಕ ಸತ್ಯ ನಾದೆಳ್ಲ ಅವರು ಯೂನಿವರ್ಸಿಟಿ ಆಫ್ ವಿಸ್ಕನ್ಸಿನ್ ನಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಹಾಗೂ ಯುನಿವರ್ಸಿಟಿ ಆಫ್ ಚಿಕಾಗೋದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಇನ್ನು ಮುಂದೆ ತಾಂತ್ರಿಕ ವಿಭಾಗದ ಸಲಹೆಗಾರರಾಗಿ ತಮ್ಮ ಕರ್ತವ್ಯ ಮುಂದುವರಿಸಲಿದ್ದಾರೆ.












Click it and Unblock the Notifications