ಚೀನಾ ಕ್ಸಿನ್ಜಿಯಾಂಗ್ ಬಿಕ್ಕಟ್ಟಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಭಾರತ
ನವದೆಹಲಿ, ಅ. 7: ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದ ಬಿಕ್ಕಟ್ಟಿನ ಬಗ್ಗೆ ಭಾರತ ಮೊದಲ ಬಾರಿಗೆ ಮಾತನಾಡಿದೆ. ಕ್ಸಿನ್ಜಿಯಾಂಗ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ.
ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಚಕಾರ ಎತ್ತುವ ಚೀನಾಗೆ ಭಾರತ ಮೊದಲ ಬಾರಿಗೆ ನೀಡಿರುವ ತಕ್ಕ ಪ್ರತ್ಯುತ್ತರ ಇದು ಎಂದು ಹೇಳಲಾಗುತ್ತಿದೆ.
ಅಚ್ಚರಿ ಎಂದರೆ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕು ಪರಿಸ್ಥಿತಿ ಹೇಗಿದೆ ಎಂದು ಚರ್ಚೆ ಅಗಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ (ಯುಎನ್ಎಚ್ಆರ್ಸಿ) ಹೊರಡಿಸಲಾದ ಕರಡು ನಿರ್ಣಯದಲ್ಲಿ ಭಾರತದ ಅನುಪಸ್ಥಿತಿ ಇತ್ತು. ಅದಾಗಿ ಒಂದು ದಿನದ ನಂತರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ, ಕ್ಸಿನ್ಜಿಯಾಂಗ್ ಪ್ರದೇಶದ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದರು.

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಕ್ಸಿನ್ಜಿಯಾಂಗ್ ಪ್ರದೇಶದ ಬಿಕ್ಕಟ್ಟಿನ ಬಗ್ಗೆ ಮಾಡಲಾದ ವೋಟಿಂಗ್ನಲ್ಲಿ ಭಾರತ ಯಾಕೆ ಗೈರಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಬಾಗಚಿ, "ಭಾರತ ಎಲ್ಲಾ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ" ಎಂದು ಸ್ಪಷ್ಟಪಡಿಸಿದರು.
"ಒಂದು ದೇಶಕ್ಕೆ ನಿರ್ದಿಷ್ಟವಾಗಿರುವ ನಿರ್ಣಯಗಳಿಂದ ಏನೂ ಪ್ರಯೋಜನ ಇಲ್ಲ ಎಂಬುದು ಭಾರತ ದೀರ್ಘ ಕಾಲದಿಂದ ತಳೆದಿರುವ ನಿರ್ಧಾರ. ಇಂಥ ಸಮಸ್ಯೆಗಳನ್ನು ಎದುರಿಸಲು ಮಾತುಕತೆಯಿಂದ ಸಾಧ್ಯ ಎಂಬ ಅಭಿಪ್ರಾಯ ಭಾರತದ್ದು," ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರು.
ಕ್ಸಿನ್ಜಿಯಾಂಗ್ ಊಯ್ಗುರ್ ಪ್ರದೇಶದಲ್ಲಿ ಮಾನವ ಹಕ್ಕು ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆ ಹೈಕಮಿಷನರ್ ಕಚೇರಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಭಾರತ ಗಮನಿಸಿರುವುದಾಗಿ ಬಾಗಚಿ ತಿಳಿಸಿದರು.

"ಕ್ಸಿನ್ಜಿಯಾಂಗ್ ಪ್ರದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಬೇಕು. ಸಂಬಂಧಿಸಿದವರು ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಹುದು ಎನ್ನುವ ಆಶಯ ಇದೆ" ಎಂದು ಅರಿಂದಮ್ ಬಾಗಚಿ ಅಭಿಪ್ರಾಯಪಟ್ಟರು.
ಇದೇ ವೇಳೆ, ಗುರುವಾರ ನಡೆದ ವೋಟಿಂಗ್ನಲ್ಲಿ ಚೀನಾ ಪರವಾಗಿ ಹೆಚ್ಚು ಮತಗಳು ಬಿದ್ದವು. ಯುಎನ್ಎಚ್ಆರ್ಸಿಯಲ್ಲಿ ಬಂದ ನಿರ್ಣಯಕ್ಕೆ ವಿರುದ್ಧವಾಗಿ 19 ಸದಸ್ಯರು ಮತ ಚಲಾಯಿಸಿದ್ದಾರೆ. ಅಮೆರಿಕ, ಕೆನಡಾ, ಡೆನ್ಮಾರ್ಕ್, ಫಿನ್ಲೆಂಡ್, ಬ್ರಿಟನ್, ಐಸ್ಲೆಂಡ್, ನಾರ್ವೆ ಮತ್ತು ಸ್ವೀಡನ್ ದೇಶಗಳ ಗುಂಪು ಈ ನಿರ್ಣಯ ಮಂಡನೆ ಮಾಡಿತ್ತು. ಮುಸ್ಲಿಮರ ಜಾಗತಿಕ ನಾಯಕನಾಗಿ ಮಿಂಚುತ್ತಿರುವ ಟರ್ಕಿ ಮೊದಲಾದ ದೇಶಗಳು ಈ ನಿರ್ಣಯದ ಸಹ-ಪ್ರಾಯೋಜಕರಾಗಿದ್ದವು.
ವೋಟಿಂಗ್ನಲ್ಲಿ ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ನೆದರ್ಲೆಂಡ್ಸ್ ದೇಶಗಳು ನಿರ್ಣಯದ ಪರವಾಗಿ ನಿಂತವು. ಆದರೆ, ಭಾರತ, ಉಕ್ರೇನ್, ಮಲೇಷ್ಯಾ ಸೇರಿದಂತೆ 11 ಸದಸ್ಯ ದೇಶಗಳು ತಟಸ್ಥವಾಗಿ ಉಳಿದವು.
ಕ್ಸಿನ್ಜಿಯಾಂಗ್ ಬಿಕ್ಕಟ್ಟು ಏನು?
ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯ ಊಯ್ಗರ್ ಮುಸ್ಲಿಮ್ ಸಮುದಾಯದ ಪ್ರಾಬಲ್ಯ ಇರುವ ಪ್ರದೇಶವಾಗಿದೆ. ಇದು ಚೀನಾದ ಅತಿದೊಡ್ಡ ಪ್ರಾಂತ್ಯವೂ ಹೌದು. ಭಾರತದ ಅರ್ಧಭಾಗದಷ್ಟು ವಿಸ್ತೀರ್ಣವಾಗಿದೆ ಕ್ಸಿನ್ಜಿಯಾಂಗ್. ಜನಸಂಖ್ಯೆ 2.5 ಕೋಟಿ ಮಾತ್ರ. ಶೇ. 58ರಷ್ಟು ಜನಸಂಖ್ಯೆ ಮುಸ್ಲಿಮರು. ಊಯ್ಗುರ್ ಮುಸ್ಲಿಮ್ ಸಮುದಾಯದವರು ಹೆಚ್ಚಿನವರು.
ಇಲ್ಲಿನ ಮುಸ್ಲಿಮರು ಕ್ಸಿನ್ಜಿಯಾಂಗ್ ಪ್ರತ್ಯೇಕತೆಗಾಗಿ ಹೋರಾಡುತ್ತಿದ್ದರಿಂದ ಅದನ್ನು ನಿಗ್ರಹಿಸಲು ಚೀನಾ ಬಲಪ್ರಯೋಗ ಮಾಡುತ್ತಿದೆ ಎಂಬುದು ಈಗ ಆಕ್ಷೇಪದ ಅಂಶ. 1950ರಲ್ಲಿ ಕ್ಸಿನ್ಜಿಯಾಂಗ್ನಲ್ಲಿ 29 ಸಾವಿರ ಮಸೀದಿಗಳಿದ್ದವು. ಈಗ ಒಂದು ಸಾವಿರ ಮಸೀದಿ ಇದ್ದರೆ ಹೆಚ್ಚು.
ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕೆ ಧ್ವನಿ ಎತ್ತದಂತೆ ಚೀನಾದ ಕಮ್ಯೂನಿಸ್ಟ್ ಸರಕಾರ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕಮ್ಯೂನಿಸ್ಟ್ ಚೀನಾದಲ್ಲಿ ಮಂದಿರಗಳಿಗೆ ಹೆಚ್ಚು ಮನ್ನಣೆ ಇಲ್ಲ. ಧರ್ಮದ ಆಚರಣೆ ಕೇವಲ ಮನೆಗೆ ಸೀಮಿತವಾಗಿರಬೇಕು ಎಂಬುದು ಅದರ ಧೋರಣೆ. ಅದರಂತೆ ಕ್ಸಿನ್ಜಿಯಾಂಗ್ನಲ್ಲಿ ಹೇರಳವಾಗಿದ್ದ ಮಸೀದಿಗಳು ಬಹುತೇಕ ನಾಶವಾಗಿವೆ. ಮುಸ್ಲಿಮರು ಸಾರ್ವಜನಿಕವಾಗಿ ಧರ್ಮಾಚರಣೆಗೆ ನಿರ್ಬಂಧ ಹಾಕಲಾಗಿದೆ.
ಹೋರಾಟದ ಹಾದಿ ತುಳಿಯುವ ಮುಸ್ಲಿಮರನ್ನು ಪ್ರತ್ಯೇಕ ಸ್ಥಳದಲ್ಲಿರಿಸಿ 'ಮನಃಪರಿವರ್ತನೆ'ಯ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಇದೊಂದು ರೀತಿಯಲ್ಲಿ ಡಿಟೆನ್ಷನ್ ಸೆಂಟರ್ಗಳಂತೆ ಎಂಬುದು ಮಾನವ ಹಕ್ಕು ಸಂಘಟನೆಗಳ ಅನಿಸಿಕೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲೆ ಬಷೆಲೆಟ್ ಅವರು ಭಯೋತ್ಪಾದನೆ ಮತ್ತು ಉಗ್ರವಾದ ಹತ್ತಿಕ್ಕುವ ಹೆಸರಿನಲ್ಲಿ ಕ್ಸಿನ್ಜಿಯಾಂಗ್ನಲ್ಲಿ ಗಂಭೀರ ಸ್ವರೂಪದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗಿದೆ ಎಂದು ವರದಿ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications