ಭಾರತ-ಪಾಕ್ ಮಧ್ಯೆ ಯುದ್ಧ ಕಾರ್ಮೋಡ ಇನ್ನೂ ಕರಗಿಲ್ಲ: ಇಮ್ರಾನ್ ಖಾನ್
ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 26: ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿಯುವ ತನಕ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಹಾಗೇ ಇರುತ್ತದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ. ಫೆಬ್ರವರಿ ಹದಿನಾಲ್ಕರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಶ್-ಇ-ಮೊಹ್ಮದ್ ಸಂಘಟನೆಯಿಂದ ಉಗ್ರ ದಾಳಿ ನಡೆದ ನಂತರ ಭಾರತ-ಪಾಕ್ ಮಧ್ಯೆ ಉದ್ವಿಗ್ನ ಸನ್ನಿವೇಶ ಇದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರ ಸರಕಾರ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆಗಳಿದ್ದು, ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ನೆರಳು ಇನ್ನೂ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಫೆಬ್ರವರಿ ಹದಿನಾಲ್ಕರಂದು ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಭಾರತೀಯ ವಾಯು ಸೇನೆಯು ಗಡಿ ನಿಯಂತ್ರಣ ರೇಖೆ ಆಚೆಗೆ, ಬಾಲಕೋಟ್ ನಲ್ಲಿ ಇದ್ದ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯ ತರಬೇತಿ ನೆಲೆ ಮೇಲೆ ದಾಳಿ ನಡೆಸಿತ್ತು.

ಅಪಾಯ ಇನ್ನೂ ಮುಗಿದಿಲ್ಲ. ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿಯುವ ತನಕ ಉದ್ವಿಗ್ನ ಸನ್ನಿವೇಶ ಹೀಗೇ ಇರುತ್ತದೆ. ಭಾರತದ ಯಾವುದೇ ಆಕ್ರಮಣಕಾರಿ ದಾಳಿಗೆ ತಿರುಗೇಟು ನೀಡಲು ನಾವು ಸಿದ್ಧರಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಅಫ್ಘಾನಿಸ್ತಾನ ಸರಕಾರ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಲಿಬಾನ್ ಜತೆಗೆ ಇಸ್ಲಾಮಾಬಾದ್ ನಲ್ಲಿ ಇದ್ದ ಭೇಟಿ ಸಹ ರದ್ದು ಪಡಿಸಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಫೆಬ್ರವರಿ ಹದಿನೆಂಟನೇ ತಾರೀಕು ತಾಲಿಬಾನ್ ನ ಪ್ರತಿನಿಧಿಗಳು ಇಸ್ಲಾಮಾಬಾದ್ ನಲ್ಲಿ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿ, ಮಾತುಕತೆ ನಡೆಸಬೇಕಿತ್ತು.
ಅಮೆರಿಕ ಹಾಗೂ ವಿಶ್ವಸಂಸ್ಥೆಯಿಂದ ನಿರ್ಬಂಧ ಹೇರಿದ ಕಾರಣಕ್ಕೆ ನಮ್ಮ ಹಲವು ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಮಾತುಕತೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಭೇಟಿ ರದ್ದು ಮಾಡುತ್ತಿದ್ದೇವೆ ಎಂದು ತಾಲಿಬಾನ್ ತಿಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.












Click it and Unblock the Notifications