ಕುಲಭೂಷಣ್ ಜಾಧವ್ ಪ್ರಕರಣ: ಗುರುವಾರ ಮಧ್ಯಾಹ್ನ 3.30ಕ್ಕೆ ತೀರ್ಪು
ಪಾಕಿಸ್ತಾನದ ಸೇನಾ ಕೋರ್ಟ್ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ವಿರುದ್ಧ ಅಂತರರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು ಭಾರತ. ಆ ಪ್ರಕರಣದ ತೀರ್ಪು ಮೇ ಹದಿನೆಂಟರ ಮಧ್ಯಾಹ್ನ 3.30ಕ್ಕೆ ಪ್ರಕಟವಾಗಲಿದೆ
ನವದೆಹಲಿ, ಮೇ 17: ಪಾಕ್ ಸೇನಾ ಕೋರ್ಟ್ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿದ ಪ್ರಕರಣದ ವಿರುದ್ಧ ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದ ತೀರ್ಪು ಗುರುವಾರ ಮಧ್ಯಾಹ್ನ 3.30ಕ್ಕೆ ಹೊರಬೀಳಲಿದೆ. ಹೇಗ್ ನಲ್ಲಿರುವ ಅಂತರರಾಷ್ಟ್ರೀಯ ಕೋರ್ಟ್ ಕಳೆದ ವಾರ ಆದೇಶ ಕಾಯ್ದಿರಿಸಿತ್ತು.
ವಿಚಾರಣೆ ಸಂಪೂರ್ಣವಾಗಿ ತೀರ್ಪು ಹೊರಬರುವ ಮುನ್ನವೇ ಪಾಕಿಸ್ತಾನವು ಕುಲಭೂಷಣ್ ಜಾಧವ್ ನನ್ನು ಗಲ್ಲಿಗೆ ಏರಿಸಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು. ಆದ್ದರಿಂದ ತುರ್ತಾಗಿ ಆದೇಶ ನೀಡಬೇಕು ಎಂದಿತ್ತು. ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನ ನಡೆಸಿದ ವಿಚಾರಣೆ ಸರಿಯಾಗಿರಲಿಲ್ಲ ಎಂದು ಕೂಡ ಹೇಳಲಾಗಿತ್ತು. ಭಾರತವನ್ನು ಪ್ರತಿನಿಧಿಸಿರುವ ಹರೀಶ್ ಸಾಳ್ವೆ, ಪಾಕಿಸ್ತಾನವು ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದಿದ್ದರು.[ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?]

ಭಾರತವು ಕುಲಭೂಷಣ್ ಜಾಧವ್ ಗೆ ರಾಯಭಾರ ಮೂಲಕ ನೆರವು ಒದಗಿಸಲು ಹದಿನಾರು ಬಾರಿ ಮಾಡಿದ ಪ್ರಯತ್ನವನ್ನೂ ಪಾಕಿಸ್ತಾನ ತಿರಸ್ಕರಿಸಿತ್ತು. ಕಡೆಗೆ ಜಾಧವ್ ರ ತಾಯಿ ಮಾಡಿದ ಮನವಿಯನ್ನೂ ನಿರಾಕರಿಸಲಾಯಿತು. ಈ ಸನ್ನಿವೇಶವು ತೀರಾ ಗಂಭೀರವಾಗಿದೆ ಎಂದು ಸಾಳ್ವೆ ವಾದ ಮಂಡಿಸಿದ್ದರು. ಇನ್ನು ಜಾಧವ್ ಭಾರತದ ಗೂಢಚಾರ ಎಂಬ ಪಾಕ್ ವಾದವನ್ನೂ ತಳ್ಳಿಹಾಕಲಾಗಿದೆ.
ಜಾಧವ್ ರನ್ನು ಇರಾನ್ ನಿಂದ ಅಪಹರಿಸಲಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ. ಆದ್ದರಿಂದ ಗಲ್ಲು ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಸಾಳ್ವೆ ವಾದ ಮಂಡಿಸಿದ್ದಾರೆ. ವಾದ ಮಂಡಿಸುವ ವೇಳೆ ಕುಲಭೂಷಣ್ ಜಾಧವ್ ತಪ್ಪೊಪ್ಪಿಗೆ ವಿಡಿಯೋವನ್ನು ನೋಡುವಂತೆ ಕೇಳಿಕೊಂಡಿತು. ಆದರೆ ಕೋರ್ಟ್ ಇದಕ್ಕೆ ಅನುಮತಿ ನೀಡಿಲ್ಲ. ಭಾರತದ ವಾದದಲ್ಲಿ ಲೋಪಗಳಿವೆ ಎಂದು ಪಾಕ್ ಹೇಳಿದ್ದು, ಮನವಿಯಲ್ಲೂ ಅದೇ ರೀತಿ ಇದ್ದುದರಿಂದ ತಿರಸ್ಕರಿಸಲಾಯಿತು ಎಂದು ತಿಳಿಸಿದೆ.[ವಿಡಿಯೋ : 16 ಬಾರಿ ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ]
ಕಳೆದ ವಾರ ಅಂತರರಾಷ್ಟ್ರೀಯ ಕೋರ್ಟ್ ಜಾಧವ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಭಾರತವು ಹರೀಶ್ ಸಾಳ್ವೆ ಅವರನ್ನು ಜಾಧವ್ ಪರ ಅರ್ಜಿ ಸಲ್ಲಿಸಲು ನೇಮಿಸಿತ್ತು. ಪಾಕಿಸ್ತಾನದ ವಿಚಾರದಲ್ಲಿ ಅಂತರರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿರುವುದು ಇದು ಎರಡನೇ ಬಾರಿ. ತಪ್ಪಾದ ಸಾಕ್ಷ್ಯಗಳನ್ನು ಮುಂದು ಮಾಡಿಕೊಂಡು, ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದ್ದರಿಂದ ಅದನ್ನು ರದ್ದು ಮಾಡಬೇಕು ಎಂದು ಕೋರಲಾಗಿದೆ.












Click it and Unblock the Notifications