IC-814 ಹೈಜಾಕ್ ಮಾಡಿದ್ದ ಜಹೂರ್ ಇಬ್ರಾಹಿಂ ಕರಾಚಿಯಲ್ಲಿ ಹತ?
ಕರಾಚಿ, ಮಾರ್ಚ್ 09: ಭಾರತದ ವಿಮಾನ IC-814 ಹೈಜಾಕ್ ಮಾಡಿದ್ದ ಮಿಸ್ತ್ರಿ ಜಹೂರ್ ಇಬ್ರಾಹಿಂ ಕರಾಚಿಯಲ್ಲಿ ಹತನಾಗಿರುವ ಸುದ್ದಿ ಬಂದಿದೆ. ಇಬ್ರಾಹಿಂನನ್ನು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಹತ್ಯೆಮಾಡಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗುತ್ತಿದೆ.
ಕರಾಚಿಯ ಅಕ್ಬರ್ ಕಾಲೋನಿಯಲ್ಲಿ ಪೀಠೋಪಕರಣ ಮಾರಾಟ ಅಂಗಡಿಯೊಂದಕ್ಕೆ ಗುರುತು ಪತ್ತೆಯಾಗದ ಇಬ್ಬರು ದಾಳಿಕೋರರು ನುಗ್ಗಿದ್ದಾರೆ. ಜಾಹಿದ್ ಅಕ್ ಹುಂದ್ ಎಂಬ ಅಲಿಯಾಸ್ ಹೆಸರಿನಲ್ಲಿ ಕ್ರೆಸೆಂಟ್ ಫರ್ನಿಚರ್ ಅಂಗಡಿ ಹೊಂದಿದ್ದ ಇಬ್ರಾಹಿಂನನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಗಳು ಲಭ್ಯವಿದ್ದು, ಇಬ್ಬರು ಬೈಕ್ ಮೂಲಕ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ, ಹೆಲ್ಮೆಟ್ ಹಾಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 1999ರ ಡಿಸೆಂಬರ್ 24ರಂದು ನವದೆಹಲಿಯಿಂದ ಕಠ್ಮಂಡುವಿಗೆ ತೆರಳಬೇಕಿದ್ದ ಭಾರತೀಯ ವಿಮಾನಯಾನ ಸಂಸ್ಥೆಗೆ ಸೇರಿದ ಐಸಿ -814 ವಿಮಾನವನ್ನು ಮಿಸ್ತ್ರಿ ಜಹೂರ್ ಇಬ್ರಾಹಿಂ ಹಾಗೂ ನಾಲ್ವರ ತಂಡ ಹೈಜಾಕ್ ಮಾಡಿತ್ತು. ಸುಮಾರು 179 ಮಂದಿ ಪ್ರಯಾಣಿಕರು, 11 ಮಂದಿ ಫ್ಲೈಟ್ ಸಿಬ್ಬಂದಿ ಇದ್ದರು. ಅಪಹರಣವಾದ ವಿಮಾನವನ್ನು ಅಮೃತ್ ಸರ್, ಲಾಹೋರ್ ಹಾಗೂ ದುಬೈ ಎಂದು ಸುತ್ತಾಡಿಸಲಾಗಿತ್ತು.
ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ಇಂಧನ ತುಂಬಿಸಿಕೊಳ್ಳಲು ನಿಲ್ಲಿಸಬೇಕಾಯಿತು. ಆಗ ಆ ಪ್ರದೇಶ ತಾಲಿಬಾನಿಗಳ ವಶದಲ್ಲಿತ್ತು. ವಿಮಾನದಲ್ಲಿದ್ದ ಭಾರತೀಯ ಮೂಲದ ಪ್ರಯಾಣಿಕ ರುಪಿನ್ ಕತ್ಯಾಲ್ ಎಂಬುವರು ಇಬ್ರಾಹಿಂ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದರು, ಅಂದಿನ ವಾಜಪೇಯಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊನೆಗೆ ಮೂವರು ಉಗ್ರರನ್ನು ಭಾರತದ ಜೈಲಿನಿಂದ ಹೊರಕ್ಕೆ ಬಿಡಲಾಯಿತು. ಈ ಮೂಲಕ ಪ್ರಯಾಣಿಕರನ್ನು ಉಳಿಸಲಾಗಿತ್ತು. ಅಂದಿನ ಸರ್ಕಾರದ ನಡೆ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ. ಮಸೂದ್ ಅಜರ್ ಅಳ್ವಿ, ಸೈಯದ್ ಒಮರ್ ಶೇಖ್, ಅಹ್ಮದ್ ಜರ್ಗಾರ್ ಎಂಬ ಉಗ್ರರನ್ನು ಡಿಸೆಂಬರ್ 31, 1999ರಂದು ಬಿಡುಗಡೆಗೊಳಿಸಿ, ಇಬ್ರಾಹಿಂ ಹಾಗೂ ತಂಡದತ್ತ ಕಳಿಸಲಾಯಿತು.
ಜೈಶ್ ಎ ಮೊಹಮ್ಮದ್ ನಾಯಕ,ಐಸಿ 814 ಹೈಜಾಕ್ ಮಾಸ್ಟರ್ ಮೈಂಡ್ ಯೂಸುಫ್ ಅಜರ್ ಅಲಿಯಾಸ್ ಮೊಹಮ್ಮದ್ ಸಲೀಂನನ್ನು ಭಾರತೀಯ ವಾಯುಸೇನೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ಪಠಾನ್ ಕೋಟ್, ಉರಿ ಹಾಗೂ ಪುಲ್ವಾಮಾ ಮೇಲೆ ನಡೆದ ದಾಳಿ ಸಂಚು ರೂಪಿಸುವಲ್ಲಿ ಸಲೀಂ ಪ್ರಮುಖ ಪಾತ್ರವಹಿಸಿದ್ದ ಎಂದು ನಂತರ ತಿಳಿದು ಬಂದಿತ್ತು.