ಬಾಂಗ್ಲಾದಲ್ಲಿ ಹಿಂದೂ ಅರ್ಚಕನ ಕಗ್ಗೊಲೆ, ಹೊಣೆ ಹೊತ್ತ ಇಸೀಸ್
ಢಾಕಾ, ಫೆ. 23: ಬಾಂಗ್ಲಾದೇಶದ ಪಂಚಘರ್ ಜಿಲ್ಲೆಯ ದೇಗುಲವೊಂದರ ಅರ್ಚಕನ ಹತ್ಯೆ ಹೊಣೆಯನ್ನು ಇರಾಕಿ ಉಗ್ರ ಸಂಘಟನೆ ಐಎಸ್ ಐಎಸ್ ಹೊತ್ತುಕೊಂಡಿದೆ. ಇತ್ತೀಚೆಗೆ ಹಿಂದೂ ಉದ್ಯಮಿಯೊಬ್ಬರ ಹತ್ಯೆಯ ಹೊಣೆಯನ್ನು ಇಸೀಸ್ ಹೊತ್ತುಕೊಂಡಿತ್ತು.
ಈ ಮೂಲಕ ಹಿಂದೂ ಸಮುದಾಯದ ಮುಖಂಡರು, ಉದ್ಯಮಿಗಳು, ಮುಖ್ಯಸ್ಥರ ಮೇಲೆ ಇಸೀಸ್ ನೇರ ದಾಳಿಗೆ ಇಳಿದಿದೆ. ಉದ್ಯಮಿ ತರುಣ್ ದತ್ತಾ ಹತ್ಯೆ ಹೊಣೆ ಹೊತ್ತುಕೊಂಡ ಇಸೀಸ್ ಭಾನುವಾರ ರಾತ್ರಿ ಜೋಗೇಶ್ವರ್ ರಾಯ್ ಎಂಬ ಅರ್ಚಕನ ಕೊಲೆಗೈದಿದೆ.
ಪಂಚಘರ್ ಜಿಲ್ಲೆಯ ದೇವಿಗಂಜ್ ಪ್ರದೇಶದ ಶ್ರೀಶ್ರೀ ಸಂತ ಗೌರಿ ಮಠದ ಪ್ರಧಾನ ಅರ್ಚಕರಾಗಿದ್ದ ರಾಯ್ ಅವರು ಪ್ರಾರ್ಥನೆ ಸಲ್ಲಿಸಲು ಮುಂದಾದಾಗ ದ್ವಿಚಕ್ರ ವಾಹನದಲ್ಲಿ ಬಂದ ಉಗ್ರರು ಮಾರಕಾಸ್ತ್ರಗಳಲ್ಲಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಈ ಹಿಂದೆ ಹಿಂದೂ ಸಮುದಾಯದ ಉದ್ಯಮಿ ದತ್ತಾ ಅವರು ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಇದೇ ರೀತಿ ಹತ್ಯೆ ಮಾಡಲಾಗಿತ್ತು. ಗೋವಿಂದ್ ಗಂಜ್ ಪಟ್ಟಣದಲಿ ಈ ಘಟನೆ ನಡೆದಿತ್ತು.
ಅರ್ಚಕರ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಗ್ರರ ದಾಳಿ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಇಲ್ಲ ಎಂದು ಎಸ್ಪಿ ಅಬ್ದುಲ್ ಕಲಾಂ ಅಜಾದ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)